ಬೆಂಗಳೂರು: ನಗರ ಪ್ರದೇಶದ ಬಡ ಜನರ ಆರೋಗ್ಯ ಸಂಜೀವಿನಿಯಾಗಿ ಕಾರ್ಯನಿರ್ವಹಿಸುವ ನಮ್ಮ ಕ್ಲಿನಿಕ್ಗಳನ್ನು ಡಿಸೆಂಬರ್ 14 ರಂದು ಬೆಳಗ್ಗೆ 11 ಗಂಟೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಲೋಕಾರ್ಪಣೆ ಮಾಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಲಿದ್ದಾರೆ. ಆರಂಭದಲ್ಲಿ 114 ಕ್ಲಿನಿಕ್ಗಳು ಏಕಕಾಲಕ್ಕೆ, ಒಂದೇ ಸಮಯದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಒಟ್ಟು 438 ನಮ್ಮ ಕ್ಲಿನಿಕ್ಗಳನ್ನು ಆರಂಭಿಸಲು ಸರ್ಕಾರ ಯೋಜನೆ ರೂಪಿಸಿದ್ದು, ಜನವರಿ ಕೊನೆಯಲ್ಲಿ ಕಾರ್ಯನಿರ್ವಹಿಸಲಿವೆ.ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 243 ನಮ್ಮ ಕ್ಲಿನಿಕ್ಗಳು ಕಾರ್ಯಚರಣೆ ಮಾಡಲಿದ್ದು, ಜನವರಿ ಎರಡನೇ ವಾರದೊಳಗೆ ಜನರಿಗೆ ಲಭ್ಯವಾಗುವಂತೆ ಮಾಡಲು ಕೆಲಸ ನಡೆಯುತ್ತಿದ್ದು, ಕನಿಷ್ಠ 150 ಕ್ಲಿನಿಕ್ಗಳು ಲಭ್ಯವಾಗಲಿದೆ. 10 ರಿಂದ 20 ಸಾವಿರ ಜನಸಂಖ್ಯೆಗೆ ಒಂದರಂತೆ ನಮ್ಮ ಕ್ಲಿನಿಕ್ಗಳು ಆರಂಭವಾಗಲಿದೆ ಎಂದರು.
ಈ ಕ್ಲಿನಿಕ್ಗಳಲ್ಲಿ 12 ರೀತಿಯ ಆರೋಗ್ಯ ಸೇವೆಗಳು ಸಿಗಲಿವೆ. ತಲಾ ಒಬ್ಬ ವೈದ್ಯಾಧಿಕಾರಿ, ನರ್ಸಿಂಗ್ ಸ್ಟಾಫ್, ಲ್ಯಾಬ್ ಟೆಕ್ನಿಷಿಯನ್, ಡಿ ದರ್ಜೆ ನೌಕರರು ಇರಲಿದ್ದಾರೆ. ಗರ್ಭಿಣಿ ಮತ್ತು ಜನನ ಸಮಯದ ಆರೈಕೆ, ನವಜಾತ ಶಿಶುವಿನ ಸಮಗ್ರ ಆರೈಕೆ, ಬಾಲ್ಯ ಮತ್ತು ಹದಿಹರಯದವರಿಗೆ ಸೇವೆಗಳು, ಸಾರ್ವತ್ರಿಕ ಲಸಿಕಾಕರಣದ ಸೇವೆಗಳು, ಕುಟುಂಬ ಕಲ್ಯಾಣ ಗರ್ಭ ನಿರೋಧಕ ಸೇವೆಗಳು, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಸಾಮಾನ್ಯ ಮತ್ತು ಸಣ್ಣ ಪ್ರಮಾಣದ ಕಾಯಿಲೆಗಳಿಗೆ ಸೇವೆ, ಮಧುಮೇಹ, ರಕ್ತದೊತ್ತಡಕ್ಕೆ ಚಿಕಿತ್ಸೆ, ಸಕ್ಕರೆ ಕಾಯಿಲೆ, ದೀರ್ಘಾವಧಿ ಕಾಯಿಲೆಗಳು, ಬಾಯಿ ಹಾಗೂ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್, ಬಾಯಿಯ ಆರೋಗ್ಯ ಸಮಸ್ಯೆಗಳು ಮತ್ತು ಸೇವೆಗಳು, ಕಣ್ಣಿನ ತಪಾಸಣೆ, ಮೆಂಟಲ್ ಹೆಲ್ತ್ಗೆ ಸಂಬಂಧಿಸಿದ ಮೂಲಭೂತ ಸೇವೆಗಳು ಸೇರಿದಂತೆ ಬೇರೆ ಆಸ್ಪತ್ರೆಗಳಿಗೆ ರೆಫರಲ್ ಸೇವೆಗಳು ಇಲ್ಲಿ ಲಭ್ಯವಾಗಲಿದೆ ಎಂದರು.
ವೃದ್ಧಾಪ್ಯ ಆರೈಕೆ, ತುರ್ತು ವೈದ್ಯಕೀಯ ಸೇವೆಗಳು, ಉಚಿತ ಆರೋಗ್ಯ ತಪಾಸಣೆ ಸೇರಿದಂತೆ ಔಷಧಗಳು ಸಂಪೂರ್ಣ ಉಚಿತವಾಗಿರಲಿದೆ. 14 ಪರೀಕ್ಷೆಗಳು ಇಲ್ಲಿ ಲಭ್ಯವಿದ್ದು, ಟೆಲಿ ಕನ್ಸಲ್ಟೇಷನ್ ಸರ್ವೀಸಸ್, ಕ್ಷೇಮ ಚಟುವಟಿಕೆಗಳು ಕೂಡ ಉಚಿತವಾಗಿವೆ. 14 ಮಾದರಿಯ ಟೆಸ್ಟ್ಗಳು ನಮ್ಮ ಕ್ಲಿನಿಕ್ ನಲ್ಲಿ ಸಂಪೂರ್ಣ ಉಚಿತವಿದೆ. ಬೆಳಗ್ಗೆ 9 ರಿಂದ ಸಂಜೆ 4:30ರ ವರೆಗೆ ನಮ್ಮ ಕ್ಲಿನಿಕ್ ತೆರೆದಿರುತ್ತವೆ. ಭಾನುವಾರ ರಜೆ ಇರುತ್ತದೆ. 80%ರಷ್ಟಯ ಸರ್ಕಾರದ ಕಟ್ಟಡಗಳೇ ಬಳಕೆಯಾಗಲಿದೆ. ಒಟ್ಟು 438 ನಮ್ಮ ಕ್ಲಿನಿಕ್ ಯೋಜನೆಗೆ 150 ಕೋಟಿ ರೂ.ಗಳ ವೆಚ್ಚ ತಗುಲಿದೆ. ಈಗಾಗಲೇ ನಮ್ಮ ಕ್ಲಿನಿಕ್ ಯೋಜನೆಗಾಗಿ 300 ವೈದ್ಯರ ನೇಮಕಾತಿ ಆಗಿದ್ದು, 80 ರಿಂದ 100 ವೈದ್ಯರ ಕೊರತೆ ಇದೆ. ಡಿಸೆಂಬರ್ 14ರಂದು ಬೆಂಗಳೂರಲ್ಲಿ ಯಾವುದೇ ನಮ್ಮ ಕ್ಲಿನಿಕ್ ಓಪನ್ ಆಗೋದಿಲ್ಲ. ರಾಜ್ಯದ ಗ್ರಾಮೀಣ ಭಾಗದಲ್ಲಿ ನಮ್ಮ ಕ್ಲಿನಿಕ್ ಮೊದಲು ಲೋಕಾರ್ಪಣೆಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಬಾಗಲಕೋಟೆ -18, ಬಳ್ಳಾರಿ -11, ಬೆಳಗಾವಿ 21, ಬೆಂಗಳೂರು ಗ್ರಾಮಾಂತರ -9, ಬೀದರ್ -6, ಚಾಮರಾಜನಗರ -3, ಚಿಕ್ಕಬಳ್ಳಾಪುರ -3, ಚಿಕ್ಕಮಗಳೂರು -4, ಚಿತ್ರದುರ್ಗ -1, ದಕ್ಷಿಣ ಕನ್ನಡ -12, ದಾವಣಗೆರೆ -1, ಧಾರವಾಡ -6, ಗದಗ -11, ಹಾಸನ -5, ಹಾವೇರಿ -5, ಕಲಬುರ್ಗಿ -11, ಕೊಡಗು -1, ಕೋಲಾರ -3, ಕೊಪ್ಪಳ -3, ಮಂಡ್ಯ -4, ಮೈಸೂರು -6, ರಾಯಚೂರು -8, ರಾಮನಗರ -3, ತುಮಕೂರು -10, ಉಡುಪಿ -10, ಉತ್ತರ ಕನ್ನಡ -10, ವಿಜಯಪುರ -10, ವಿಜಯನಗರ -6, ಯಾದಗಿರಿ- 3, ಬಿಬಿಎಂಪಿ ವ್ಯಾಪ್ತಿಯಲ್ಲಿ- 243 ನಮ್ಮ ಕ್ಲಿನಿಕ್ಗಳಿ ಇರಲಿವೆ.
ಝಿಕಾ ವೈರಸ್: ಪ್ರತ್ಯೇಕ ಮಾರ್ಗಸೂಚಿ
ಪುಣೆ ಲ್ಯಾಬ್ ರಿಪೋರ್ಟ್ ಪ್ರಕಾರ ರಾಜ್ಯದಲ್ಲಿ 5 ವರ್ಷದ ಒಂದು ಹೆಣ್ಣು ಮಗುವಿಗೆ ಝಿಕಾ ವೈರಸ್ ಇರುವುದು ಖಚಿತವಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ರಾಜ್ಯದಲ್ಲಿ ಇದು ಮೊದಲ ಪ್ರಕರಣವಾಗಿದ್ದು ಸರ್ಕಾರ ಇದನ್ನು ಬಹಳ ಎಚ್ಚರದಿಂದ ಗಮನಿಸುತ್ತಿದೆ. ಮಗುವಿನ ಮೇಲೆ ನಿಗಾ ಇಡಲಾಗಿದೆ. ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ದೃಢವಾಗಿದ್ದು, ರಾಯಚೂರು ಹಾಗೂ ನೆರೆ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ಮತ್ತು ಅದನ್ನು ನಿರ್ವಹಿಸಲು ಸಜ್ಜಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಅಲ್ಲದೆ ಆರೋಗ್ಯ ಇಲಾಖೆಯಿಂದ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ