ಚಿಕ್ಕಮಗಳೂರು: ಮಲೆನಾಡಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶೃಂಗೇರಿ ಶಾರದಾಂಬೆ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ ಮಾಡಲು ಆಡಳಿತ ಮಂಡಳಿ ನಿರ್ಧರಿಸಿದೆ. ಆಗಸ್ಟ್ 15ರಿಂದ ವಸ್ತ್ರ ಸಂಹಿತೆ ಜಾರಿಯಾಗಲಿದ್ದು, ಶಾರದಾಂಬೆಯ ದರ್ಶನ ಹಾಗೂ ಶ್ರೀಗಳ ದರ್ಶನ ಹಾಗೂ ಪಾದಪೂಜೆಗೆ ಆಗಮಿಸುವ ಭಕ್ತರು ನಿಗದಿತ ಉಡುಪುಗಳನ್ನು ಧರಿಸಿ ಬರುವಂತೆ ಸೂಚಿಸಲಾಗಿದೆ.
ಈ ಬಗ್ಗೆ ಶೃಂಗೇರಿ ಶಾರದಾ ಪೀಠದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದ್ದು, ಆಗಸ್ಟ್ 15ರಿಂದ ಶಾರದಾ ದೇವಿ ದರ್ಶನಕ್ಕೆ ಬರುವ ಭಕ್ತರು ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಬರಲು ಕೋರಲಾಗಿದೆ. ಸಾಂಪ್ರದಾಯಿಕ ಉಡುಗೆ ಧರಿಸದೆ ಬರುವವರಿಗೆ ಅರ್ಧ ಮಂಟಪದೊಳಗೆ ಪ್ರವೇಶವಿರುವುದಿಲ್ಲ. ಹೊರಗಿನ ಪ್ರಾಕಾರದಿಂದಲೇ ದೇವಿ ದರ್ಶನ ಪಡೆಯಬೇಕು ಎಂದು ಪ್ರಕಟನೆ ತಿಳಿಸಿದೆ.
ಪುರುಷರು ಧೋತಿ ಮತ್ತು ಶಲ್ಯ ಹಾಗೂ ಉತ್ತರೀಯವನ್ನು ಧರಿಸಬೇಕು. ಮಹಿಳೆಯರು ಸೀರೆ, ರವಿಕೆ, ಸಲ್ವಾರ್ ಜತೆಗೆ ದುಪ್ಪಟ್ಟಾ (ಪೈಜಾಮಾ ದುಪ್ಪಟ್ಟಾ) ಅಥವಾ ಲಂಗ ದಾವಣಿ ಧರಿಸಿ ದರ್ಶನ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
ಶ್ರೀಗಳ ದರ್ಶನ ಹಾಗೂ ಪಾದಪೂಜೆಗೆ ತೆರಳುವ ಭಕ್ತರು ಆಗಸ್ಟ್ 15 ರಿಂದ ಭಾರತೀಯ ಸಂಪ್ರದಾಯದಂತೆ ವಸ್ತ್ರ ಧರಿಸಿ ಶ್ರೀಗಳ ದರ್ಶನ ಪಡೆಯಬೇಕು. ಭಾರತೀಯ ಸಂಪ್ರದಾಯದ ಉಡುಗೆಗಳನ್ನು ಹೊರತುಪಡಿಸಿ ಇತರೆ ಉಡುಗೆ ತೊಟ್ಟು ಬಂದಲ್ಲಿ ಗುರುನಿವಾಸದ ಒಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ