ಲಕ್ನೋ 1,000 ಕ್ಕಿಂತಲೂ ಹೆಚ್ಚು ಜನರನ್ನು ಅಕ್ರಮವಾಗಿ ಮತಾಂತರಗೊಳಿಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಉಗ್ರ ನಿಗ್ರಹ ಪಡೆ(ಎಟಿಎಸ್) ಜೂನ್ ನವರೆಗೆ 8 ಮಂದಿಯನ್ನು ಬಂಧಿಸಿದ್ದು, ಅವರ ವಿರುದ್ಧ “ದೇಶದ ವಿರುದ್ಧ ಯುದ್ಧ ಸಾರಿದ” ಆರೋಪ ಹೊರಿಸಲಾಗಿದೆ.
ಎಟಿಎಸ್ ಮನವಿಯನ್ನು ಸ್ವೀಕರಿಸಿದ ಲಖನೌ ವಿಶೇಷ ನ್ಯಾಯಾಲಯವು, ಸೆಕ್ಷನ್ 121-ಎ ಮತ್ತು 123, ಐಪಿಸಿ ಸೆಕ್ಷನ್ 121 ಅಡಿ ಕೇಸ್ ದಾಖಲಿಸಿಕೊಂಡಿದೆ.
ಜೂನ್ 21ರಂದು ಎಟಿಎಸ್ ಅಧಿಕಾರಿಗಳು, ಕಾನೂನು ಬಾಹಿರ ಮತಾಂತರ ರಾಕೆಟ್ ದಂಧೆ ನಡೆಸುತ್ತಿದ್ದ ಇಬ್ಬರನ್ನು ದೆಹಲಿಯಲ್ಲಿ ಬಂಧಿಸಿದ್ದರು. ಆ ಬಂಧನದ ಬೆನ್ನಲ್ಲೇ ಮತ್ತೆ ಎಂಟು ಮಂದಿಯನ್ನು ಬಂಧಿಸಲಾಗಿದೆ. ಇವರೆಲ್ಲರು ಇಸ್ಲಾಮಿಲ್ ದವಾ ಸೆಂಟರ್ (ಐಡಿಸಿ) ಹೆಸರಿನ ಸಂಸ್ಥೆ ಮಾಡಿಕೊಂಡು, ಆ ಮೂಲಕ ಉತ್ತಮ ಶಿಕ್ಷಣ, ಮದುವೆ, ಕೆಲಸದಂತಹ ಆಮಿಷವೊಡ್ಡಿ ಸಾವಿರಾರು ಮಂದಿಯನ್ನು ಮತಾಂತರ ಮಾಡಿಕೊಳ್ಳುತ್ತಿದ್ದರು. ಹೆಚ್ಚಾಗಿ ಅಂಗವಿಕಲರು, ನಿರುದ್ಯೋಗಿಗಳು ಮತ್ತು ಬಡವರನ್ನೇ ಗುರಿಯಾಗಿಸಿಕೊಳ್ಳಲಾಗುತ್ತಿತ್ತು ಎನ್ನಲಾಗಿದೆ.
ಬಂಧಿತರಲ್ಲಿ ನಾಲ್ವರು ಮಹಾರಾಷ್ಟ್ರದವರಿದ್ದರೆ ಹರಿಯಾಣ, ಗುಜರಾತ್, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ತಲಾ ಒಬ್ಬರಿದ್ದಾರೆ.
ಆರಂಭದಲ್ಲಿ, ಆರೋಪಿಗಳ ವಿರುದ್ಧ ಎಫ್ಐಆರ್ ನಲ್ಲಿ 121 ಎ ಮತ್ತು 123 ಅನ್ನು ಸೇರಿಸಲು ಅನುಮತಿ ಪಡೆಯಲು ಲಖನೌದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಮುಂದೆ ರಾಜ್ಯ ಎಟಿಎಸ್ ಮನವಿ ಸಲ್ಲಿಸಿತ್ತು. ಆದರೆ ಸಿಜೆಎಂ, ಸ್ಥಳೀಯ ನ್ಯಾಯಾಲಯಗಳಿಗೆ ಐಪಿಸಿ ಸೆಕ್ಷನ್ 121 ಮತ್ತು 123 ಗೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಹೊಂದಿಲ್ಲ ಎಂಬುದನ್ನು ಅರಿತ ಎಟಿಎಸ್, ವಿಶೇಷ ನ್ಯಾಯಾಲಯದ ಮೊರೆ ಹೋಗಿದೆ.
ವಿಶೇಷ ನ್ಯಾಯಾಲಯ ಆರೋಪಿಗಳ ವಿರುದ್ಧ ಸೆಕ್ಷನ್ 121 ಎ ಮತ್ತು 123 ಅನ್ನು ಸೇರಿಸಲು ಅವಕಾಶ ನೀಡಿದ್ದು, ವಿಚಾರಣೆಯನ್ನು ಸೆಪ್ಟೆಂಬರ್ 14ಕ್ಕೆ ಮುಂದೂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ