ಮುಡಾ ಹಗರಣ | ಸಿಎಂ ಸಿದ್ದರಾಮಯ್ಯ ವಿರುದ್ಧದ ಖಾಸಗಿ ದೂರು ; ಆದೇಶ ಕಾಯ್ದಿರಿಸಿದ ವಿಶೇಷ ಕೋರ್ಟ್‌

ಬೆಂಗಳೂರು : ಮುಡಾದಲ್ಲಿ ಮುಖ್ಯಮಂತ್ರಿ ಪತ್ನಿ ಬಿ.ಎಂ. ಪಾರ್ವತಿ ಅವರು ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸುವುದರ ಕುರಿತಾದ ಆದೇಶವನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶುಕ್ರವಾರ ಕಾಯ್ದಿರಿಸಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆಯನ್ನು ಜನ್ರತಿನಿಧಿಗಳ ವಿಶೇಷ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಅವರು ನಡೆಸಿದರು.
ವರದಿ ಪ್ರಕಾರ, ಅರ್ಜಿದಾರ ಸ್ನೇಹಮಯಿ ಕೃಷ್ಣ ಪರವಾಗಿ ಹಿರಿಯ ವಕೀಲರಾದ ಲಕ್ಷ್ಮಿ ಐಯ್ಯಂಗಾರ್‌ ಅವರು “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವ ಮೈದುನ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಆಕ್ಷೇಪಾರ್ಹವಾದ 3.16 ಗುಂಟೆ ಜಮೀನು ಮಾರಾಟ ಮಾಡುವ ಅಧಿಕಾರವೇ ಜೆ ದೇವರಾಜುಗೆ ಇಲ್ಲ” ಎಂದು ವಾದಿಸಿದರು.

“ದೇವರಾಜು ಅವರಿಂದ ಮಲ್ಲಿಕಾರ್ಜುನ ಸ್ವಾಮಿಗೆ 2004ರಲ್ಲಿ ಕ್ರಯಪತ್ರವಾಗಿಲ್ಲ. ಆದರೆ, ಮಲ್ಲಿಕಾರ್ಜುನ ಸ್ವಾಮಿ ಅವರು ಪಾರ್ವತಿ ಅವರಿಗೆ ದಾನ ಮಾಡುತ್ತಾರೆ.ಬಡಾವಣೆಗಾಗಿ ಮಾರ್ಪಾಡು ಮಾಡಿರುವ ಭೂಮಿಯು ಕೃಷಿ ಭೂಮಿ ಹೇಗೆ ಆಗುತ್ತದೆ? ಇದಲ್ಲ ಆದ ಬಳಿಕ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಬದಲಿ ನಿವೇಶನಕ್ಕೆ ಮನವಿ ಸಲ್ಲಿಸಿದ್ದರು. ಇಲ್ಲಿ ದೇವರಾಜು, ಮಲ್ಲಿಕಾರ್ಜುನ ಸ್ವಾಮಿ, ಪಾರ್ವತಿ ಅವರಾರಿಗೂ ಹಕ್ಕು (ಟೈಟಲ್‌) ಇರುವುದಿಲ್ಲ. ಹಕ್ಕು ಇಲ್ಲದಿರುವ ಭೂಮಿಗೆ ಪರಿಹಾರ ಕೋರಿದ್ದಾರೆ. ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪೂರ್ಣವಾಗಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ” ಎಂದರು.
“50:50 ಯೋಜನೆಯಡಿ ಬದಲಿ ನಿವೇಶನ ಮಂಜೂರು ಮಾಡಲು ಮುಡಾ ಅಯುಕ್ತರು ನಿರ್ಧಾರ ಮಾಡುತ್ತಾರೆ. ಒಂದೊಮ್ಮೆ ಪಾರ್ವತಿ ಅವರಿಗೆ ಹಕ್ಕು ಇದ್ದರೂ ಅವರು 4,800 ಚದರ ಅಡಿ ಮಾತ್ರ ಪಡೆಯಲು ಅವಕಾಶ ಇದೆ. ಅದು ಕೂಡ ಸ್ವಾಧೀನ ಆಗಿರುವ ಅದೇ ಲೇಔಟ್ ನಲ್ಲಿ ಪಡೆಯಬಹುದು. ಇಲ್ಲಿ ಪಾವರ್ತಿ ಅವರಿಗೆ ಬದಲಿ ನಿವೇಶನ ಮಂಜೂರು ಮಾಡಲು 2005ರ 50:50 ನಿಯಮ ಬಳಕೆ ಮಾಡಲಾಗಿದೆ. ಅಲ್ಲದೇ, ವಿಶೇಷ ಬಡಾವಣೆಯಲ್ಲಿ ಬದಲಿ ನಿವೇಶನ ಮಂಜೂರು ನೀಡಲು ಆಯುಕ್ತರು ನಿರ್ಧಾರ ಮಾಡಿದ್ದಾರೆ. ಮುಖ್ಯಮಂತ್ರಿಗಳು ಹೇಳಿರುವ ಪ್ರಕಾರ ಅದು ಕೃಷಿ ಭೂಮಿಯಾಗಿರುವುದರಿಂದ ಪಾರ್ವತಿ ಅವರು ಹಕ್ಕು ಹೊಂದಿದ್ದರೆ ಎರಡು ನಿವೇಶನ ಮಾತ್ರ ನೀಡಬಹುದಿತ್ತು. ಆದರೆ, 38 ಸಾವಿರ ಚದರ ಅಡಿ ಪಡೆಯಲು ಹೇಗೆ ಸಾಧ್ಯ? ಪಾರ್ವತಿ ಅವರಿಗೆ ಮಾಲೀಕತ್ವದ ಹಕ್ಕು ಇಲ್ಲದಿರುವುದರಿಂದ ಇದು ಪಕ್ಕಾ ಹಗರಣವಾಗಿದೆ. ದಾಖಲೆಗಳನ್ನು ಸೃಷ್ಟಿಸಿ ನಿವೇಶನ ಪಡೆಯಲಾಗಿದೆ” ಎಂದು ವಾದಿಸಿದರು.

ಪ್ರಮುಖ ಸುದ್ದಿ :-   ಕಸದ ರಾಶಿಯ ಮಧ್ಯೆ ಕ್ಯಾನ್ಸರ್ ಪೀಡಿತ ವೃದ್ಧ ಮಹಿಳೆ ಪತ್ತೆ : ಮೊಮ್ಮಗ ನನ್ನನ್ನು ಇಲ್ಲಿ ಬಿಟ್ಟು ಹೋದ ಎಂದ ವೃದ್ಧೆ...!

ರಾಜ್ಯಪಾಲರ ಪೂರ್ವಾನುಮತಿಗೆ ಸಂಬಂಧಿಸಿದಂತೆ “ಪ್ರಕರಣದಲ್ಲಿ ಸಂಜ್ಞೇಯ ಪರಿಗಣಿಸುವಾಗ ರಾಜ್ಯಪಾಲರ ಪೂರ್ವಾನುಮತಿ ಅಗತ್ಯವಿರುವುದಿಲ್ಲ. ಸಿಸಿ ನಂಬರ್‌ ಮಾಡುವಾಗ ಬೇಕಾಗುತ್ತದೆ. ಇದಕ್ಕೂ, ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. ಹೀಗಾಗಿ, ನ್ಯಾಯಾಲಯವು ಪ್ರಕರಣವನ್ನು ವಿಚಾರಣೆಗೆ ಪರಿಗಣಿಸಬೇಕು. ಪ್ರಕರಣವು ಸಂಜ್ಞೇಯ ಪೂರ್ವ ಹಂತದಲ್ಲಿದ್ದು, ಸದ್ಯಕ್ಕೆ ರಾಜ್ಯಪಾಲರ ಪೂರ್ವಾನುಮತಿ ಬೇಕಿಲ್ಲ. ಹೀಗಾಗಿ, ನ್ಯಾಯಾಲಯ ವಿಚಾರಣೆಗೆ ಪರಿಗಣಿಸಬಹುದು. ಪ್ರಕರಣ ದಾಖಲಾದ ನಂತರ ತನಿಖಾಧಿಕಾರಿಗೆ ಅನುಮಾನಗಳಿದ್ದರೆ ವಿಶೇಷ ನ್ಯಾಯಾಲಯದ ಸಲಹೆ ಪಡೆದು ಮುಂದುವರಿಯಲು ಅವಕಾಶವಿದೆ” ಎಂದು ಹೇಳಿದರು.
“ಪಾರ್ವತಿ ಅವರಿಗೆ ಪರ್ಯಾಯ ನಿವೇಶನ ನೀಡುವ ಸಂದರ್ಭವೇ ಇಲ್ಲ. ಆದರೂ ಸಂಪೂರ್ಣ ಅಭಿವೃದ್ಧಿಯಾಗಿರುವ ಬಡಾವಣೆಯಲ್ಲಿ ನಿವೇಶನ ಹಂಚಿಕೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರಭಾವ ಬೀರಿದ್ದಾರೆ. ಸಿದ್ದರಾಮಯ್ಯ ಅವರು ಮೂರು ಬಾರಿ ಪ್ರಮುಖ ಹುದ್ದೆಯಲ್ಲಿದ್ದಾರೆಎಂದು ವಾದಿಸಿದರು. ವಾದ ಆಲಿಸಿದ ನ್ಯಾಯಾಲಯವು ಈ ಖಾಸಗಿ ದೂರು ವಿಚಾರಣೆಗೆ ಸ್ವೀಕರಿಸುವ ಬಗ್ಗೆ ಆಗಸ್ಟ್​ 13ಕ್ಕೆ ಆದೇಶ ಕಾಯ್ದಿರಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement