ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪೊಲೀಸರು ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಿದ್ದ ಆರೋಪಿಯನ್ನ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ರಾಜು ಅಲಿಯಾಸ್ ಧನರಾಜ ಎಂಬಾತನೇ ಬಂಧಿತ ಆರೋಪಿ. ರೇಣುಕಾಸ್ವಾಮಿ ಹತ್ಯೆಯಾದ ಬಳಿಕ ಈತ ತಲೆಮರೆಸಿಕೊಂಡಿದ್ದ. ಪೊಲೀಸರು ವಿಶೇಷ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈತ ಕೊಲೆ ಪ್ರಕರಣದ 9ನೇ ಆರೋಪಿಯಾಗಿರುವ ಈತ ತಲೆಮರೆಸಿಕೊಂಡಿದ್ದ.
ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬೆಚ್ಚಿ ಬೀಳಿಸುವಂತಹ ಸಂಗತಿ ಬಯಲಾಗಿದೆ. ನಟ ದರ್ಶನ್ ಹಾಗೂ ಇತರ ಆರೋಪಿಗಳು ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿದ್ದಾರೆ.
ಅಲ್ಲದೆ, ಪರೀಕ್ಷೆಯಲ್ಲಿ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ನೀಡಿದ ಬಗ್ಗೆ ವರದಿಯಲ್ಲಿದೆ ಎನ್ನಲಾಗಿದೆ. ದೇಹದ 34 ಕಡೆ ಹಲ್ಲೆ ನಡೆಸಿರುವುದು ಪತ್ತೆಯಾಗಿದೆ. ತನಿಖೆ ಕೈಗೊಂಡ ಪೊಲೀಸರು ಆರೋಪಿ ರಾಜುವನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಟ್ಟಣಗೆರೆ ಶೆಡ್ಗೆ ರೇಣುಕಾಸ್ವಾಮಿಯನ್ನು ಕರೆತಂದಾಗ ಆರೋಪಿ ನಂದೀಶ್ ಜೊತೆ ಸೇರಿ ರಾಜು ಎಲೆಕ್ಟ್ರಾನಿಕ್ ಮೆಗ್ಗರ್ ಸಾಧನೆ ಬಳಸಿ ಕರೆಂಟ್ ಶಾಕ್ ನೀಡಿದ್ದ. ಈತ ಆರೋಪಿ ನಂದೀಶ ಜೊತೆ ಬೆಂಗಳೂರಿನಲ್ಲಿ ಕೇಬಲ್ ಕೆಲಸ ಮಾಡುತ್ತಿದ್ದ. ಆತನನ್ನು ರೇಣುಕಾಸ್ವಾಮಿ ಕೂಡಿಹಾಕಿದ್ದ ಶೆಡ್ ಗೆ ಕರೆಸಿಕೊಳ್ಳಲಾಗಿತ್ತು. ಅಲ್ಲದೇ ಎಲೆಕ್ಟ್ರಿಕಲ್ ಮೆಗ್ಗರ್ ಮಷಿನ್ ಬಳಸಿ ರೇಣುಕಾಸ್ವಾಮಿಗೆ ಕರೆಂಟ್ ಶಾಕ್ ಕೊಡಲಾಗಿತ್ತು ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ