ಬೆಂಗಳೂರು: ಎಲ್ಲಾ ನೌಕರರಿಗೆ ಇನ್ನು ಪ್ರತಿ ತಿಂಗಳ ಮೊದಲ ದಿನವೇ ವೇತನ ಪಾವತಿ ಮಾಡಲು ಕೆಎಸ್ಆರ್ಟಿಸಿ ನಿರ್ಧರಿಸಿದೆ.
ಅಕ್ಟೋಬರ್ನಿಂದ ಈ ಹೊಸ ಪದ್ಧತಿ ಜಾರಿಗೆ ಬರಲಿದೆ.
ಕೆಎಸ್ಆರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಈ ಬಗ್ಗೆ ತಿಳಿಸಿದ್ದು, ಸಾರಿಗೆ ಸಂಸ್ಥೆಯ ಕಾರ್ಮಿಕರ ಕ್ಷೇಮಾಭಿವೃದ್ಧಿ, ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಅಕ್ಟೋಬರ್ ತಿಂಗಳಿನಿಂದ ಚಾಲಕ, ನಿರ್ವಾಹಕ, ತಾಂತ್ರಿಕ ಸಿಬ್ಬಂದಿ ಸೇರಿದಂತೆ ಎಲ್ಲ ಸಿಬ್ಬಂಗೆ ಪ್ರತಿ ತಿಂಗಳು 1ರಂದೇ ವೇತನ ಪಾವತಿ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ವೇತನದ ಬಿಲ್ಲುಗಳನ್ನು ತಯಾರಿಸಲು ಪ್ರತಿ ತಿಂಗಳ 20ರಿಂದ 30ರ ವರೆಗೆ ಊಹಾತ್ಮಕ ಹಾಜರಾತಿ ಪರಿಗಣಿಸಲಾಗುತ್ತದೆ. ಈ ಕ್ರಮಕ್ಕೆ ಸಂಬಂಧಿಸಿದಂತೆ ಸಿಬ್ಬಂದಿಗಳ ವೇತನ ಬಿಲ್ಲುಗಳನ್ನು ತಯಾರಿಸುವಾಗ ಹಾಜರಾತಿ, ರಜೆ ಮಂಜೂರಾತಿ ಆದೇಶ, ಹೆಚ್ಚುವರಿ ಭತ್ಯೆ ಮುಂತಾದ ದಾಖಲಾತಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ, ವೇತನದ ಬಿಲ್ಲನ್ನು ಸಿದ್ಧಪಡಿಸುವಂತೆ ತಿಳಿಸಿದ್ದಾರೆ.
ಆದ್ದರಿಂದ ಈ ಅವಧಿಯಲ್ಲಿ ನೌಕರರು ಅನಧಿಕೃತ ಗೈರು ಹಾಜರಿ ಆಗದೆ ಹಾಗೂ ರಜೆ ಪಡೆಯದೆ (ಅತಿ ಅನಿವಾರ್ಯ ಕಾರಣ ಹೊರತುಪಡಿಸಿ), ಕರ್ತವ್ಯಕ್ಕೆ ಹಾಜರಾಗಬೇಕು. ಪೂರ್ಣ ಪ್ರಮಾಣದ ಸಂಬಳ ಪಡೆಯಲು ಇದರಿಂದ ಸಾಧ್ಯವಾಗಲಿದೆ ಎಂದು ವಿ.ಅನ್ಬುಕುಮಾರ್ ತಿಳಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿದ್ದರಿಂದ ನಿಗದಿತ ಸಮಯಕ್ಕೆ ವೇತನ ಪಾವತಿ ಆಗದಂತಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ