ಮತದಾರರ ಪಟ್ಟಿ ಪರಿಷ್ಕರಣೆಯಿಂದ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ : ಸುಪ್ರೀಂ ಕೋರ್ಟಿಗೆ ಟಿಎಂಸಿ

ನವದೆಹಲಿ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಚುನಾವಣಾ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಿದೆ ಎಂದು ತೃಣಮೂಲ ಕಾಂಗ್ರೆಸ್ (TMC) ಸುಪ್ರೀಂ ಕೋರ್ಟ್‌ ಮುಂದೆ ಆರೋಪ ಮಾಡಿದೆ.
ಸೋಮವಾರ ನ್ಯಾಯಾಲಯದಲ್ಲಿ ಪಕ್ಷದ ಪರವಾಗಿ ವಾದ ಮಂಡಿಸಿದ ಸಂಸದ ಹಾಗೂ ಹಿರಿಯ ನ್ಯಾಯವಾದಿ ಕಲ್ಯಾಣ ಬ್ಯಾನರ್ಜಿ, “ಕಳೆದ 2021ರ ಚುನಾವಣೆಯಲ್ಲಿ ಟಿಎಂಸಿ ಗೆದ್ದಿದ್ದ ಆದರೆ ಈ ಬಾರಿ ಬಿಜೆಪಿ ಪಾಲಾದ 31 ಕ್ಷೇತ್ರಗಳಲ್ಲಿ, ಮತದಾರರ ಪಟ್ಟಿಯಿಂದ ಕೈಬಿಡಲಾದ ಮತಗಳ ಸಂಖ್ಯೆಯು ಗೆಲುವಿನ ಅಂತರಕ್ಕಿಂತಲೂ ಹೆಚ್ಚಿದೆ” ಎಂದು ಹೇಳಿದರು.
ಉದಾಹರಣೆ: ಒಂದು ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಕೇವಲ 862 ಮತಗಳಿಂದ ಸೋತಿದ್ದರೆ, ಅಲ್ಲಿ 5,000ಕ್ಕೂ ಹೆಚ್ಚು ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ರಾಜ್ಯಾದ್ಯಂತ ಟಿಎಂಸಿ ಮತ್ತು ಬಿಜೆಪಿ ನಡುವಿನ ಮತಗಳ ವ್ಯತ್ಯಾಸ 32 ಲಕ್ಷದಷ್ಟಿದೆ. ಆದರೆ, ಮತದಾರರ ಪಟ್ಟಿಯಿಂದ ಹೆಸರು ತೆಗೆದಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸುಮಾರು 35 ಲಕ್ಷ ಅರ್ಜಿಗಳು ಇನ್ನೂ ವಿಲೇವಾರಿಯಾಗದೆ ಬಾಕಿ ಉಳಿದಿವೆ ಎಂದು ಹೇಳಿದರು.
ಹಿರಿಯ ನ್ಯಾಯವಾದಿ ಮೇನಕಾ ಗುರುಸ್ವಾಮಿ ಮಾತನಾಡಿ, “ಪ್ರಸ್ತುತ ಅರ್ಜಿ ವಿಲೇವಾರಿ ವೇಗವನ್ನು ಗಮನಿಸಿದರೆ, ಈ ಬಾಕಿ ಅರ್ಜಿಗಳನ್ನು ವಿಲೇವಾರಿ ಮಾಡಲು ಕನಿಷ್ಠ ನಾಲ್ಕು ವರ್ಷಗಳು ಬೇಕಾಗಬಹುದು,” ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಮುಖ ಸುದ್ದಿ :-   ಶಿರಸಿ: ಕಸ್ತೂರಿರಂಗನ್ ವರದಿಯಿಂದ ಉತ್ತರ ಕನ್ನಡ ಜಿಲ್ಲೆಯ 567 ಹಳ್ಳಿಗಳನ್ನು ಕೈಬಿಡಲು ಒತ್ತಾಯಿಸಿ ಸಹಸ್ರಾರು ಆಕ್ಷೇಪಣಾ ಪತ್ರ ಸಲ್ಲಿಕೆ

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ ಮತ್ತು ನ್ಯಾಯಮೂರ್ತಿ ಜಯ್‌ಮಲ್ಯ ಬಾಗ್ಚಿ ಅವರ ಪೀಠವು, “ಮತದಾರರ ಪಟ್ಟಿಯಿಂದ ಹೊರಬಿದ್ದವರ ಮೇಲ್ಮನವಿಗಳು ಬಾಕಿ ಇರುವಾಗ, ಅಂತಹ ಮತಗಳಿಂದ ಫಲಿತಾಂಶ ಬದಲಾಗುವ ಸಾಧ್ಯತೆ ಇದ್ದಲ್ಲಿ ಪೀಡಿತರು ಚುನಾವಣಾ ಅರ್ಜಿಯನ್ನು ಸಲ್ಲಿಸಬಹುದು,” ಎಂದು ಅಭಿಪ್ರಾಯಪಟ್ಟಿತು.
ಮತ್ತೊಂದೆಡೆ, ಟಿಎಂಸಿ ಆರೋಪವನ್ನು ತಳ್ಳಿಹಾಕಿದ ಚುನಾವಣಾ ಆಯೋಗ (EC), ತನ್ನದೇ ಆದ ದತ್ತಾಂಶಗಳನ್ನು ಮಂಡಿಸಿತು.
ಮಾಲ್ಡಾ ಮತ್ತು ಮುರ್ಶಿದಾಬಾದ್ ಬೆಲ್ಟ್‌ನಲ್ಲಿ ಅತಿ ಹೆಚ್ಚು ಹೆಸರುಗಳನ್ನು ಕೈಬಿಡಲಾಗಿತ್ತು. ಸುಜಾಪುರ (1.50 ಲಕ್ಷ), ರಘುನಾಥ್‌ಗಂಜ್ (1.30 ಲಕ್ಷ), ಸಂಸೇರ್‌ಗಂಜ್ (1.25 ಲಕ್ಷ) ಸೇರಿದಂತೆ ಮತದಾರರ ಪಟ್ಟಿಯಿಂದ ಅತಿ ಹೆಚ್ಚು ಹೆಸರು ಕೈಬಿಟ್ಟ ಐದೂ ಕ್ಷೇತ್ರಗಳಲ್ಲಿ ಟಿಎಂಸಿಯೇ ಜಯಗಳಿಸಿದೆ. ಹೀಗಾಗಿ ಎಸ್‌ಐಆರ್‌ (‘SIR’) ಪ್ರಕ್ರಿಯೆಯಿಂದ ಫಲಿತಾಂಶ ಬದಲಾಗಿದೆ ಎಂಬ ವಾದ ಸರಿಯಲ್ಲ ಎಂದು ಆಯೋಗ ಪ್ರತಿಪಾದಿಸಿತು.
ಪಶ್ಚಿಮ ಬಂಗಾಳದ 294 ಸೀಟುಗಳ ಪೈಕಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮೊದಲ ಬಾರಿಗೆ ಐತಿಹಾಸಿಕ ಜಯ ಸಾಧಿಸಿದೆ. ಕಳೆದ 15 ವರ್ಷಗಳಿಂದ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯಾಗಿದ್ದ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಹಿಡಿದಿದೆ.
ಈ ಬಾರಿಯ ಚುನಾವಣೆಯಲ್ಲಿ ‘ನುಸುಳುಕೋರರ’ (Ghuspaithiya) ವಿಷಯ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಪ್ರಮುಖ ಅಸ್ತ್ರಗಳಾಗಿದ್ದವು.

ಪ್ರಮುಖ ಸುದ್ದಿ :-   ವಿಡಿಯೊ | ಚಿನ್ನದ ಉಂಗುರಗಳಿದ್ದ ಪೆಟ್ಟಿಗೆಯೊಂದಿಗೆ ಮಹಿಳೆ ಪರಾರಿ ; ಬೆನ್ನಟ್ಟಿ ಹಿಡಿದ ಚಿನ್ನಾಭರಣ ಅಂಗಡಿ ಮಾಲೀಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement