ಕೊಪ್ಪಳ: ಕೊಪ್ಪಳದಿಂದ ಹೊಸಪೇಟೆಗೆ ಹೋಗುತ್ತಿದ್ದ ಬಸ್ಗಳು ತಾಲೂಕಿನ ಹೊಸ ಲಿಂಗಾಪುರ (ಹುಲಿಗಿ ಕ್ರಾಸ್) ಬಳಿ ನಿಲ್ಲಿಸದ ಕಾರಣ ರೊಚ್ಚಿಗೆದ್ದ ಮಹಿಳೆಯೊಬ್ಬರು ಸರ್ಕಾರಿ ಬಸ್ಗೆ ಕಲ್ಲು ತೂರಿದ್ದಾರೆ ಎಂದು ವರದಿಯಾಗಿದೆ.
ವರದಿ ಪ್ರಕಾರ, ಭಾನುವಾರ ಈ ಘಟನೆ ನಡೆದಿದ್ದು, ಬಸ್ನ ಚಾಲಕ ಕಂ ನಿರ್ವಾಹಕ ಮುಕ್ಕಣ್ಣ ಕುಕನೂರು ಅವರು ಕಲ್ಲು ಎಸೆದ ಮಹಿಳೆಯನ್ನು ಎಲ್ಲ ಪ್ರಯಾಣಿಕರ ಸಮೇತ ಬಸ್ ಅನ್ನು ಮುನಿರಾಬಾದ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದು, ನಂತರ ಮಹಿಳೆಯಿಂದ ₹5 ಸಾವಿರ ದಂಡ ಕಟ್ಟಿಸಿಕೊಂಡು ವಾಪಸ್ ಕಳುಹಿಸಲಾಗಿದೆ.
ಇಳಕಲ್ ಬಳಿ ಪಾಪನಳ್ಳಿ ಗ್ರಾಮದ ಮಹಿಳೆಯೊಬ್ಬರು ಕೊಪ್ಪಳ ಜಿಲ್ಲೆಯ ಹುಲಿಗಿಯ ಹುಲಿಗೆಮ್ಮದೇವಿ ದರ್ಶನಕ್ಕೆಂದು ಬಂದಿದ್ದರು. ಬಸ್ಗಾಗಿ ಹುಲಿಗಿ ಕ್ರಾಸ್ ಬಳಿ ಬಹಳಷ್ಟು ಹೊತ್ತಿನಿಂದ ಕಾಯುತ್ತಿದ್ದರೂ ಬಸ್ಗಳು ನಿಲ್ಲಿಸಿರಲಿಲ್ಲ. ಸುಮಾರು ನಾಲ್ಕು ತಾಸು ಕಾಯ್ದರೂ ಬಸ್ಗಳನ್ನು ನಿಲ್ಲಿಸಿರಲಿಲ್ಲ ಎನ್ನಲಾಗಿದೆ. ಇದರಿಂದ ಬೇಸತ್ತ ಮಹಿಳೆ ಕೋಪದಿಂದ ಬಸ್ನತ್ತ ಕಲ್ಲು ತೂರಿದ್ದಾರೆ ಎನ್ನಲಾಗಿದೆ. ಮಳೆ ಬರುತ್ತಿತ್ತು. ಇಳಕಲ್ಗೆ ಹೋಗುವ ಬಸ್ಗಾಗಿ ನಾಲ್ಕೈದು ತಾಸಿನಿಂದ ಕಾದಿದ್ದೆ. ಹಲವು ಬಸ್ಗಳು ಹೋದರೂ ನಿಲ್ಲಿಸಲಿಲ್ಲ. ಇದರಿಂದ ಸಿಟ್ಟು ಬಂದು ಕಲ್ಲು ಎಸೆದೆ ಎಂದು ಮಹಿಳೆ ಹೇಳಿದ್ದಾರೆ.
ಬಸ್ನ ಗಾಜು ಒಡೆದಿದ್ದಕ್ಕೆ ₹5,000 ದಂಡ ಕಟ್ಟಬೇಕು, ಇಲ್ಲವಾದರೆ ದೂರು ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ ನಂತರ ಮಹಿಳೆ ಕ್ಷಮೆಯಾಗಿಸಿ ದಂಡ ಕಟ್ಟಿ ಅದೇ ಬಸ್ನಲ್ಲಿ ಪ್ರಯಾಣಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ