ಪಹಲ್ಗಾಮ್‌ ಭಯೋತ್ಪಾದಕ ದಾಳಿ : ತಾಯ್ನಾಡಿಗೆ ಬಂದ ಕನ್ನಡಿಗರ ಮೃತದೇಹ

ಬೆಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ಗುಂಡಿಗೆ ಸಾವಿಗೀಡಾದ ಕರ್ನಾಟಕದ ಮೂವರು ಪ್ರವಾಸಿಗರಲ್ಲಿ ಇಬ್ಬರ ಮೃತದೇಹಗಳು ಗುರುವಾರ ಬೆಳಿಗ್ಗೆ ಬೆಂಗಳೂರು ತಲುಪಿವೆ.
ಬೆಂಗಳೂರಿನ ಭರತ ಭೂಷಣ ಮತ್ತು ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ ಅವರ ಮೃತದೇಹಗಳನ್ನು ಹೊತ್ತ ವಿಮಾನವು ಬೆಳಗಿನ ಜಾವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಸಂತ್ರಸ್ತರ ಕುಟುಂಬಗಳ ಸದಸ್ಯರು ಸಹ ಅದೇ ವಿಮಾನದಲ್ಲಿ ಆಗಮಿಸಿದ್ದಾರೆ.
ಬೆಂಗಳೂರಿನ ರಾಮಮೂರ್ತಿ ನಗರದ ಸಾಫ್ಟ್‌ವೇರ್ ಎಂಜಿನಿಯರ್ ಮಧುಸೂಧನ ರಾವ್ ಅವರ ಮೃತದೇಹವನ್ನು ಚೆನ್ನೈಗೆ ಕೊಂಡೊಯ್ದು ಅಲ್ಲಿಂದ ಅದನ್ನು ಅವರ ಊರಾದ ಆಂಧ್ರಪ್ರದೇಶದ ನೆಲ್ಲೂರಿಗೆ ಸಾಗಿಸಲಾಗುತ್ತದೆ.
ಮಂಜುನಾಥ ರಾವ್ ಅವರ ಸೋದರ ಮಾವ ಪ್ರದೀಪ ಮತ್ತು ಭರತ ಭೂಷಣ ಅವರ ಪತ್ನಿ ಸುಜಾತಾ ಅವರ ಸಂಬಂಧಿ ವಿನುತಾ ಅವರು ಮೃತದೇಹವನ್ನು ಸ್ವೀಕರಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ದಾಳಿಯಲ್ಲಿ ಬದುಕುಳಿದ ಮಂಜುನಾಥ ರಾವ್ ಅವರ ಪತ್ನಿ ಪಲ್ಲವಿ ಮತ್ತು ಅವರ ಮಗ ಅಭಿಜಯ ಅವರನ್ನು ಸಂಬಂಧಿಕರೊಂದಿಗೆ ಶಿವಮೊಗ್ಗಕ್ಕೆ ಕರೆದೊಯ್ಯಲಾಯಿತು. ಮಂಜುನಾಥ ರಾವ್ ಅವರ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ತೆಗೆದುಕೊಂಡು ಹೋಗಲಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ 3 ದಿನ ಜೋರಾದ ಗಾಳಿ ಮಳೆಯ ಮುನ್ಸೂಚನೆ

ಭರತ ಭೂಷಣ ಅವರ ದೇಹವು ಬೆಳಿಗ್ಗೆ 5:30 ರ ಸುಮಾರಿಗೆ ಯಶವಂತಪುರದ ಮತ್ತಿಕೆರೆಯಲ್ಲಿರುವ ಅವರ ನಿವಾಸ ತಲುಪಿದೆ. ಅನಾರೋಗ್ಯದ ಕಾರಣ ಮಗನ ಸಾವಿನ ಬಗ್ಗೆ ಅವರ ವೃದ್ಧ ತಾಯಿಗೆ ಮೃತದೇಹ ಬಂದ ನಂತರ ತಿಳಿಸಲಾಯಿತು. ಭೂಷಣ್ ಅವರ ಮೃತದೇಹವನ್ನು ಮಧ್ಯಾಹ್ನದವರೆಗೆ ಸಾರ್ವಜನಿಕ ದರ್ಶನಕ್ಕೆ ಇಡಲಾಗಿದ್ದು, ನಂತರ ಅಂತಿಮ ವಿಧಿವಿಧಾನ ನೇರವೇರಲಿದೆ.
ಬದುಕುಳಿದವರೊಂದಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸಹ ಆಗಮಿಸಿದರು. ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಉಪಸ್ಥಿತರಿದ್ದರು.

ಕಾಶ್ಮೀರದಲ್ಲಿ ಸಿಲುಕಿರುವ ಕರ್ನಾಟಕದ 180 ಪ್ರವಾಸಿಗರನ್ನು ಹೊತ್ತ ವಿಶೇಷ ವಿಮಾನ ಗುರುವಾರ ಆಗಮಿಸಿಲಿದೆ. ಕಾಶ್ಮೀರದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್, ತಾವು ಸಹ ಅವರೊಂದಿಗೆ ಹಿಂತಿರುಗುವುದಾಗಿ ದೃಢಪಡಿಸಿದ್ದಾರೆ. ಅವರು ಬೆಂಗಳೂರಿಗೆ ಸುರಕ್ಷಿತವಾಗಿ ಮರಳಲು ನಾವು ವಿಶೇಷ ವಿಮಾನ ವ್ಯವಸ್ಥೆ ಮಾಡಿದ್ದೇವೆ” ಎಂದು ಅವರು ತಿಳಿಸಿದ್ದಾರೆ. ಅವರಲ್ಲದೆ, ಕರ್ನಾಟಕದ ಇನ್ನೂ ಕೆಲವು ಪ್ರವಾಸಿಗರು ಕಾಶ್ಮೀರದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಇದಕ್ಕೂ ಮೊದಲು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಶ್ಮೀರದಲ್ಲಿ ಸಿಲುಕಿರುವ ರಾಜ್ಯದ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಮರಳಿ ಕರೆತರಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದ್ದರು. ಮಂಜುನಾಥ ಅವರ ಪತ್ನಿ ಪಲ್ಲವಿ ಮತ್ತು ಭರತ್ ಭೂಷಣ್ ಅವರ ಪತ್ನಿ ಸುಜಾತಾ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement