ಜಮ್ಮು ಮತ್ತು ಕಾಶ್ಮೀರದ ಸೊಪೋರ್ ಜಿಲ್ಲೆಯ ತುಜ್ಜಾರ್ ಗ್ರಾಮದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಅಲ್ ಬದ್ರ್ ಮುಖ್ಯಸ್ಥ ಗನಿ ಖ್ವಾಜಾ ಹತನಾಗಿದ್ದಾನೆ.
ಎನ್ಕೌಂಟರ್ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಐಜಿಪಿ ಕಾಶ್ಮೀರ ವಿಜಯ್ ಕುಮಾರ್, ಅಲ್ ಬದ್ರ್ ಮುಖ್ಯಸ್ಥನನ್ನು ಕೊಂದಿರುವುದು ದೊಡ್ಡ ಯಶಸ್ಸು ಎಂದು ಹೇಳಿದ್ದಾರೆ.
ತುಜ್ಜರ್ ಗ್ರಾಮದಲ್ಲಿ ಕೆಲವು ಉಗ್ರರು ತಲೆಮರೆಸಿಕೊಂಡಿದ್ದಾರೆ ಎಂದು ಭದ್ರತಾ ಪಡೆಗಳಿಗೆ ಸುಳಿವು ಸಿಕ್ಕನಂತರ ಸ್ಥಳೀಯ ಪೊಲೀಸರು, ಸಿಆರ್ಪಿಎಫ್ ಮತ್ತು ಸೇನೆಯ ಜಂಟಿ ತಂಡ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿತು.
ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆ ಎನ್ಕೌಂಟರ್ ಆಗಿ ಮಾರ್ಪಟ್ಟಿದೆ. ಎನ್ಕೌಂಟರ್ ಪ್ರಾರಂಭವಾದ ಕೂಡಲೇ ಪೊಲೀಸರು ಅಲ್ ಬದ್ರ್ ಮುಖ್ಯಸ್ಥ ಗನಿ ಖ್ವಾಜಾ ಎಂದು ಗುರುತಿಸಲ್ಪಟ್ಟ ಉಗ್ರನನ್ನು ಗುಂಡಿಕ್ಕಿ ಕೊಂದರು.
ಎನ್ಕೌಂಟರ್ ನಡೆದ ಸ್ಥಳದಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಶೋಧ ಕಾರ್ಯ ಮುಂದುವರೆದಿದೆ ಎಂದು ವಿಜಯಕುಮಾರ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ