ಲಕ್ನೋ: ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗಾಗಿ ಪ್ರಚಾರ ಕೈಗೊಂಡಿದ್ದ ಬಿಜೆಪಿ ಶಾಸಕರೊಬ್ಬರನ್ನು ಗ್ರಾಮಸ್ಥರು ಅಟ್ಟಾಡಿಸಿ, ವಾಪಸ್ ಕಳುಹಿಸಿರುವ ಘಟನೆ ವರದಿಯಾಗಿದೆ.
ಶಾಸಕರ ವಿಧಾನಸಭಾ ಕ್ಷೇತ್ರವಾದ ಮುಜಾಫರ್ನಗರದಲ್ಲಿ ಈ ಘಟನೆ ನಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಖತೌಲಿ ಮೂಲದ ಬಿಜೆಪಿ ಶಾಸಕ ವಿಕ್ರಮ್ ಸಿಂಗ್ ಸೈನಿ ಸಭೆಯಲ್ಲಿ ಪಾಲ್ಗೊಳ್ಳಲು ಬುಧವಾರ ಗ್ರಾಮಕ್ಕೆ ಬಂದಿದ್ದಾಗ ಗ್ರಾಮಸ್ಥರು ಶಾಸಕರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಗುಂಪಿನ ಗ್ರಾಮಸ್ಥರು ಶಾಸಕ ಸೈನಿ ಕಾರನ್ನು ಹಿಂಬಾಲಿಸಿ, ಕಾರಿನಿಂದ ಕೆಳಗೆ ಇಳಿಯುವಂತೆ ಕೂಗಾಡಿದ್ದಾರೆ. ಅಲ್ಲದೆ, ಶಾಸಕರ ವಿರುದ್ಧ ಘೋಷಣೆ ಕೂಗಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಒಂದು ವರ್ಷದ ರೈತರ ಪ್ರತಿಭಟನೆಯ ನಂತರ ಸರ್ಕಾರವು ರದ್ದುಗೊಳಿಸಿದ ವಿವಾದಾತ್ಮಕ ಕೃಷಿ ಕಾನೂನುಗಳಿಗೆ ಅನೇಕರು ಅಸಮಾಧಾನ ಹೊಂದಿದ್ದಾರೆ ಎನ್ನಲಾಗಿದೆ.
ಉತ್ತರ ಪ್ರದೇಶದ ವಿಧಾನಸಭಾ ಚನಾವಣೆಯು ಫೆ. 10ರಂದು ಆರಂಭವಾಗಲಿದ್ದು, ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ