ಮುಸ್ಕಾನ್‌ ತನಿಖೆ ಮಾಡಿದರೆ ತಪ್ಪೇನೂ ಇಲ್ಲ, ಆದರೆ ರಾಜಕಾರಣ ಮಾಡಿ ಶಾಂತಿ ಹದಗೆಡಿಸಬಾರದು: ಸುಮಲತಾ ಅಂಬರೀಷ್

ಬೆಂಗಳೂರು: ಮಂಡ್ಯದ ಮುಸ್ಕಾನ್‌ ಅವರನ್ನು ತನಿಖೆ ನಡೆಸಿದರೆ ತಪ್ಪೇನೂ ಇಲ್ಲ. ತನಿಖೆ ನಡೆದರೆ ಸತ್ಯ ಹೊರಗೆ ಬರುತ್ತದೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ಮಾಡುವುದರಲ್ಲಿ ತಪ್ಪೇನಿಲ್ಲ, ತನಿಖೆ ಆಗಿ ನಿಜ ಹೊರಗೆ ಬರಬೇಕು. ಆದರೆ ರಾಜಕಾರಣ ಮಾಡಿ ವಾತಾವರಣ ಹದಗೆಡಿಸುವ ಕೆಲಸ ಮಾಡಬಾರದು ಎಂದು ಸ್ಪಷ್ಟಪಡಿಸಿದರು.
ಮಂಡ್ಯ ಹಾಗೂ ರಾಜ್ಯದಲ್ಲಿ ವಾತಾವರಣ ಶಾಂತಿಯುತವಾಗಿದೆ. ಈ ಸಂದರ್ಭದಲ್ಲಿ ಎಲ್ಲಾ ಸಮಾಜಗಳು ಒಂದಾಗಿ, ಈ ಸಮಸ್ಯೆ ಬಗೆಹರಿಸಬೇಕು. ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಬಾರದು. ಯಾರೋ ಹೇಳಿಕೆಯಿಂದ ಬಲಿಪಶು ಆಗುವುದು ಬಡವರು. ಈ ರೀತಿ ಆಗಬಾರದು ಎಂದು ಸ್ಪಷ್ಟಪಡಿಸಿದರು.

ಮಂಡ್ಯದ ಮುಸ್ಕಾನ್‍ಗೆ ಸಂಘಟನೆ ಸಂಪರ್ಕದ ಬಗ್ಗೆ ತನಿಖೆಗೆ ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಸದ ಅನಂತಕುಮಾರ ಹೆಗಡೆ ಪತ್ರ ಬರೆದಿರುವುದಕ್ಕೆ ಪ್ರತಿಕ್ರಿಯಿಸಿ ಅವರು . ಸಂಘಟನೆಗಳು, ಸಮುದಾಯದ ಮುಖಂಡರ ಹೇಳಿಕೆಗಳಿಗೆ ಬಡವರು ಬಲಿಯಾಗುತ್ತಿದ್ದಾರೆ. ಎಲ್ಲರೂ ಶಾಂತಿಯಿಂದ ಇರಬೇಕಾಗುತ್ತದೆ. ಸರ್ಕಾರ ಯಾರು ಪ್ರಚೋದನೆ ಯಾರು ಮಾಡುತ್ತಾರೆ ಎಂದು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕಿದೆ ಎಂದರು.

ಪ್ರಮುಖ ಸುದ್ದಿ :-   ರಾಜ್ಯದ ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ಚುನಾವಣೆ ಘೋಷಣೆ

ತನಿಖೆ ನಡೆದರೆ ಮಾತ್ರ ವೀಡಿಯೋದಲ್ಲಿ ಹೇಳಿರುವುದು ನಿಜವೋ ಸುಳ್ಳೊ ಎಂಬುದು ಗೊತ್ತಾಗುತ್ತದೆ. ಕೆಲವರು ಅದನ್ನು ನಕಲಿ ವೀಡಿಯೊ ಎಂದು ಹೇಳುತ್ತಾರೆ. ತನಿಖೆ ಆದರೆ ಸತ್ಯ ತಿಳಿಯುತ್ತದೆ. ಆದರೆ ಇದೇವೇಳೆ ರಾಜಕಾರಣ ಮಾಡಿ ಶಾಂತಿ ಕೆಡಿಸುವ ಕೆಲಸ ಮಾಡಬಾರದು.ಸಮುದಾಯದ ನಾಯಕರು, ರಾಜಕೀಯ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ರಾಜಕೀಯ ಲಾಭಕ್ಕೆ ಹೇಳಿಕೆಗಳನ್ನು ಯಾರೂ ಕೊಡಬಾರದು ಎಂದು ಮನವಿ ಮಾಡಿದರು.
ಇದೇ ವೇಳೆ ಬಿಜೆಪಿಗೆ ಸೇರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ಎಲೆಕ್ಷನ್‍ಗೆ ನಿಂತಾಗಿನಿಂದ ಈ ಮಾತು ಕೇಳಿಬರ್ತಿದೆ. ನನ್ನ ಜಿಲ್ಲೆಯ ಅಭಿವೃದ್ಧಿ ನನ್ನ ಉದ್ದೇಶ. ಈಗ ಯಾವುದೇ ಪಕ್ಷ ಸೇರಲು ಕೆಲವು ತಾಂತ್ರಿಕ ಸಮಸ್ಯೆಗಳಿದೆ. ಜಿಲ್ಲೆಯ ಜನ ಹೇಗೆ ಹೇಳುತ್ತಾರೆ ಹಾಗೆ ಮಾಡುತ್ತೇನೆ. ಈ ಬಗ್ಗೆ ಮಂಡ್ಯದ ಜನ ಹೇಳಬೇಕು. ನಾನಾಗಿ ನಾನು ನಿರ್ಧಾರ ತೆಗೆದುಕೊಳ್ಳುವಿದಿಲ್ಲ. ಜನ ಹೇಳಿದ್ದಕ್ಕೆ ಪಕ್ಷೇತರ ಆಗಿ ಸ್ಪರ್ಧಿಸಿದ್ದೆ ಎಂದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement