ಕುಂದಾಪುರ: ಕಂಪೌಂಡ್ ಇಲ್ಲದ ಬಾವಿಗೆ ಬಿದ್ದು ಇಬ್ಬರು ಮಕ್ಕಳು ಮೃತಪಟ್ಟಿದ್ದು ತಾಯಿ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ಸೇರಿದ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೆಳ್ಳಾಲ ಗ್ರಾಮದ ಹೊಟ್ನಬೈಲು ಎಂಬಲ್ಲಿ ಶನಿವಾರ ನಡೆದಿದೆ ಎಂದು ವರದಿಯಾಗಿದೆ.
ಮೃತ ಮಕ್ಕಳನ್ನು ಧೀರಜ್ (13) ಹಾಗೂ ಛಾಯಾ (8) ಎಂದು ಗುರುತಿಸಲಾಗಿದೆ. ತಾಯಿ ಶೀಲಾ (43) ಎಂಬುವವರನ್ನು ರಕ್ಷಣೆ ಮಾಡಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಮನೆಯ ಸಮೀಪದ ಗದ್ದೆಯಲ್ಲಿನ ಬಾವಿಗೆ ಮಕ್ಕಳೊಂದಿಗೆ ತಾಯಿಯೂ ಬಿದ್ದಿದ್ದರು. ಮಾಹಿತಿ ಗೊತ್ತಾಗಿ ಸ್ಥಳೀಯರು ರಕ್ಷಣೆಗೆ ಧಾವಿಸಿ ಅವರನ್ನು ಮೇಲಕ್ಕೆತ್ತುವ ಪ್ರಯತ್ನ ಮಾಡಿದರು. ಆದರೆ ಅಷ್ಟರಲ್ಲೇ ಇಬ್ಬರು ಮಕ್ಕಳು ಮೃತಪಟ್ಟಿದ್ದರು ಎನ್ನಲಾಗಿದೆ.
ಆಕಸ್ಮಿಕವಾಗಿ ಬಾವಿಗೆ ಒಬ್ಬರು ಬಿದ್ದಾಗ ಅವರನ್ನು ರಕ್ಷಿಸಲು ಹೋಗಿ ಈ ಅವಘಡ ಸಂಭವಿಸಿದೆಯೇ ಅಥವಾ ಮಕ್ಕಳೊಂದಿಗೆ ಆತ್ಮಹತ್ಯೆ ಪ್ರಯತ್ನಕ್ಕೆ ಮುಂದಾಗಿದ್ದರೆ ಎನ್ನುವುದು ತನಿಖೆಯ ನಂತರ ತಿಳಿದುಬರಬೇಕಿದೆ. ಘಟನಾ ಸ್ಥಳಕ್ಕೆಪೊಲೀಸರು ಭೇಟಿ ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ