ಹುಬ್ಬಳ್ಳಿ: ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆ ನಡೆದ ಹೋಟೆಲ್​ನಲ್ಲಿ ಹೋಮ-ಹವನ

ಹುಬ್ಬಳ್ಳಿ: ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಕೊಲೆಯಾದ ನಗರದ ಉಣಕಲ್ ಬಳಿಯ ದಿ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಶುಕ್ರವಾರ ಸುದರ್ಶನ ಹೋಮ ಮಾಡಲಾಯಿತು.
ಚಂದ್ರಶೇಖರ್​ ಗುರೂಜಿ ಹತ್ಯೆ ನಡೆದ ಸ್ಥಳದಲ್ಲೇ ಹೋಮ-ಹವನ ನಡೆಸಲಾಗಿದೆ. ಗುರೂಜಿ ಹತ್ಯೆಯಿಂದ ಹೋಟೆಲ್​ನಲ್ಲಿ ಆತಂಕ ನಿರ್ಮಾಣವಾಗಿತ್ತು. ಭಯ ದೂರ ಮಾಡಿ, ಹೋಟೆಲ್ ಶುದ್ಧಗೊಳಿಸಲು ಸುದರ್ಶನ ಹೋಮ ಮಾಡಲಾಗಿದೆ.

ನಗರದ ಉಣಕಲ್ ಕೆರೆ ಬಳಿಯ ದಿ ಪ್ರೆಸಿಡೆಂಟ್ ಹೋಟೆಲ್​ನಲ್ಲಿ ಭಕ್ತರ ಸೋಗಲ್ಲಿ ಬಂದ ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಗಳಿಬ್ಬರು ಚಂದ್ರಶೇಖರ ಗುರೂಜಿ ಅವರನ್ನು ಚಾಕುವಿನಿಂದ ಇರಿದು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಆರೋಪಿಗಳನ್ನು ಬಂಧಿಸಿರುವ ಪೊಲೀಸರ ತನಿಖೆ ಮುಂದುವರಿಸಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಹೋಟೆಲ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ದೇವರ ಈಗ ಮೊರೆ ಹೋಗಿದ್ದಾರೆ.

ಜು.5ರಂದು ಚಂದ್ರಶೇಖರ ಗುರೂಜಿ ಮೃತಪಟ್ಟಿದ್ದರು. 6ರಂದು ಸಂಜೆ ಹುಬ್ಬಳ್ಳಿಯ ಸುಳ್ಳ ರಸ್ತೆಯಲ್ಲಿರುವ ಚಂದ್ರಶೇಖರ ಗುರೂಜಿ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಿತ್ತು. ಗುರೂಜಿ ಕೊಲೆ ಬಳಿಕ ಹೋಟೆಲ್‌ನಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿತ್ತು. ಹೀಗಾಗಿ ಭಯ ನಿವಾರಣೆಗಾಗಿ ಸ್ಥಳದಲ್ಲಿ ಹೋಮ ಮಾಡಲಾಯಿತು ಎಂದು ಹೇಳಲಾಗಿದೆ.
ಇಬ್ಬರು ಪುರೋಹಿತರು ಮಂತ್ರಘೋಷಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು ಎನ್ನಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement