ಉಡುಪಿ ಜಿಲ್ಲಾಧಿಕಾರಿ ಎದುರು ಶರಣಾದ ನಕ್ಸಲ್ ತೊಂಬಟ್ಟು ಲಕ್ಷ್ಮೀ

ಉಡುಪಿ : ಕಳೆದ 20 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೊಂಬಟ್ಟುವಿನ ಲಕ್ಷ್ಮೀ ಭಾನುವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಭಾನುವಾರ ಶರಣಾಗಿದ್ದಾರೆ.
ಪೊಲೀಸ್ ಭದ್ರತೆಯೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ ಲಕ್ಷ್ಮೀ ಜೊತೆ ಅವರ ಸಹೋದರ ವಿಠಲ ಪೂಜಾರಿ ಹಾಗೂ ಸಂಬಂಧಿಕರು ಮತ್ತು ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯ ಸದಸ್ಯರಾದ ಶ್ರೀಪಾಲ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರೈಸಿ, ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಕ್ಸಲ್ ಶರಣಾಗತಿ ಸಮಿತಿ ಜಿಲ್ಲಾಧ್ಯಕ್ಷೆ ಹಾಗೂ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹಾಗೂ ಜಿಲ್ಲಾ ಸಮಿತಿ ಸಂಚಾಲಕ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ಜಿಲ್ಲಾ ಸಮಿತಿ ಸದಸ್ಯ ಹಾಗೂ ಜಿ.ಪಂ ಸಿಇಒ ಪ್ರತೀಕ್ ಬಾಯಲ್ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶರಣಾಗತರಾದರು.
ಶರಣಾಗತಿ ಪ್ರಕ್ರಿಯೆ ವೇಳೆ ಮಾತನಾಡಿದ ಲಕ್ಷ್ಮಿ, ಸದ್ಯ ಸ್ವಇಚ್ಛೆಯಿಂದ ಸರ್ಕಾರದ ಮುಂದೆ ಶರಣಾಗಿದ್ದೇನೆನಕ್ಸಲ್ ಶರಣಾಗತಿ ಬಗ್ಗೆ ಟಿವಿಗಳಲ್ಲಿ ಸುದ್ದಿ ನೋಡಿ ತಿಳಿದುಕೊಂಡೆ. ಸಿದ್ದರಾಮಯ್ಯನವರು ಒಂದು ಅವಕಾಶ ಕೊಟ್ಟಿದ್ದಾರೆ. ಅದರಂತೆ ಶರಣಾಗಿದ್ದೇನೆ. ನಮ್ಮೂರಿಗೆ ರಸ್ತೆ, ನೀರು, ಶಾಲೆ, ಆಸ್ಪತ್ರೆ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದನ್ನು ಮಾಡಿಕೊಡಬೇಕು ಎಂದು ಹೇಳಿದರು.

ಶರಣಾಗತಿ ಪ್ರಕ್ರಿಯೆ ಬಳಿಕ ಲಕ್ಷ್ಮಿ ಅವರನ್ನು ಪೊಲೀಸರು ವಶಕ್ಕೆ ಪಡೆದು ಆರೋಗ್ಯ ತಪಾಸಣೆಗೊಳಪಡಿಸಿದರು. ನಂತರ ನ್ಯಾಯಾಲಯಕ್ಕೆ ಕರೆದೊಯ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು.
ಲಕ್ಷ್ಮಿ ಹಿನ್ನೆಲೆ; ತೊಂಬಟ್ಟುವಿನ ಪಂಜು ಪೂಜಾರಿ ದಂಪತಿಯ ಆರು ಮಂದಿ ಮಕ್ಕಳಲ್ಲಿ ಒಬ್ಬರಾದ ಲಕ್ಷ್ಮಿ ಹೈಸ್ಕೂಲ್ ಶಿಕ್ಷಣ ಪಡೆದಿದ್ದಾರೆ. ಗ್ರಾಮದಲ್ಲಿ ವಿವಿಧ ಸಾಮಾಜಿಕ ಚಳವಳಿಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಸಾರಾಯಿ ಅಂಗಡಿ ವಿರುದ್ಧದ ಹೋರಾಟಗಳಲ್ಲೂ ಇವರು ಸಕ್ರಿಯರಾಗಿ ಭಾಗವಹಿಸಿದ್ದು, ಆ ವೇಳೆ ಪಶ್ಚಿಮಘಟ್ಟ ಭಾಗದಲ್ಲಿ ಕಾಣಿಸಿಕೊಂಡ ನಕ್ಸಲ್ ಹೋರಾಟದ ಗುಂಪಿನತ್ತ ಆಕರ್ಷಿತರಾಗಿ ಅದನ್ನು ಸೇರಿದ್ದರು. ನಕ್ಸಲಿಸಂನೊಂದಿಗೆ ಗುರುತಿಸಿಕೊಂಡ ಬಳಿಕ ಅಲ್ಲಿ ಸಕ್ರಿಯರಾಗಿದ್ದ ಅವರ ಮೇಲೆ ಸದ್ಯ ಉಡುಪಿಯಲ್ಲಿ 3 ರಿಂದ 4 ಕೇಸುಗಳಿವೆ.
ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಪ್ಯಾಕೇಜ್ ನಿಯಮದಂತೆ ಲಕ್ಷ್ಮೀ ಶರಣಾಗಿದ್ದು, ಸರ್ಕಾರ ಘೋಷಣೆ ಮಾಡಿದಂತೆ ಅವರಿಗೆ ನೀಡಬೇಕಾದ ಸೌಲಭ್ಯಗಳನ್ನು ಶೀಘ್ರದಲ್ಲಿ ನೀಡಲಾಗುವುದು. ಮೂರು ಹಂತದಲ್ಲಿ ನಕ್ಸಲ್ ಪ್ಯಾಕೇಜ್ ಇದ್ದು, ಕೆಟಗರಿ ಎ ವರ್ಗದಡಿ ನಮ್ಮ ರಾಜ್ಯದವರೇ ಆಗಿದ್ದು, ನಕ್ಸಲ್ ಚಟುವಟಿಕೆಯಲ್ಲಿ ತೊಡಗಿ, ಕೇಸ್ ಇದ್ದು ಶರಣಾಗುತ್ತಿರುವವರಿಗೆ 7.50 ಲಕ್ಷ ಹಣ ನೀಡಲಾಗುತ್ತಿದೆ. ಕೆಟಗರಿ ಬಿ ವರ್ಗದಡಿ ಹೊರ ರಾಜ್ಯದ ನಕ್ಸಲರಿಗೆ ಶಸ್ತ್ರಸಜ್ಜಿತ ನಕ್ಸಲ್ ಗುಂಪಿನ ಸದಸ್ಯನಾಗಿದ್ದು, ಒಂದಕ್ಕಿಂತ ಹೆಚ್ಚು ಸದಸ್ಯರಾಗಿದ್ದರೆ 5 ಲಕ್ಷ ರೂ. ಪ್ಯಾಕೇಜ್ ನೀಡಲಾಗುತ್ತದೆ. ಕೆಟಗರಿ ಸಿ ವರ್ಗದಡಿ ನಕ್ಸಲ್ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದು, ಪ್ರಕರಣಗಳು ಇದ್ದರೂ 2 ಲಕ್ಷ ರೂ. ಪ್ಯಾಕೇಜ್ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪ್ರಮುಖ ಸುದ್ದಿ :-   ಸುಹಾಸ ಶೆಟ್ಟಿ ಕೊಲೆ ಪ್ರಕರಣ ; ಮತ್ತೆ ಮೂವರು ಆರೋಪಿಗಳ ಬಂಧನ

ಲಕ್ಷ್ಮೀ ಎ ಕೆಟಗರಿಗೆ ಬರುತ್ತಾರೆ ಎಂಬುದನ್ನು ಗಮನಿಸಿ ಶಿಫಾರಸು ಮಾಡಿದ್ದೇವೆ. ಅವರಿಗೆ ಪುನರ್ವಸತಿ, ತರಬೇತಿ, ವಿದ್ಯಾಭ್ಯಾಸಕ್ಕೂ ಅವಕಾಶ ಇದೆ. ಈಕೆಯನ್ನು ಎ ಕೆಟಗರಿಯಲ್ಲಿ ಪರಿಗಣಿಸಲಾಗುತ್ತದೆ. ಆಕೆ ಹೇಳಿರುವ ಊರಿನ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ ಕೆ ಮಾತನಾಡಿ, ಲಕ್ಷ್ಮೀ ವಿರುದ್ಧ ಬೈಂದೂರು ತಾಲೂಕಿನ ಅಮಾಸೆಬೈಲು ಠಾಣೆಯಲ್ಲಿ 2007ರಲ್ಲಿ ಗುಂಡಿನ ದಾಳಿ ನಡೆಸಿದ ಪ್ರಕರಣ, ಹಲ್ಲೆ ಮಾಡಿ ಬೆದರಿಕೆ ಹಾಕಿದ ಪ್ರಕರಣ ಹಾಗೂ ಕರ ಪತ್ರಗಳನ್ನು ಅಂಟಿಸಿದ ಮೂರು ಪ್ರಕರಣಗಳಿವೆ ಎಂದು ಹೇಳಿದರು.
‘ಮುಖ್ಯವಾಹಿನಿಗೆ ಬಂದಿರುವ ನಕ್ಸಲರು ಕೆಲವೊಂದು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಅವುಗಳನ್ನು ಈಡೇರಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ’ ಎಂದು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ರಾಜ್ಯ ಸಮಿತಿ ಸದಸ್ಯರಾದ ಕೆ. ಪಿ ಶ್ರೀಪಾಲ ತಿಳಿಸಿದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement