ಬೆಂಗಳೂರು: ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದೆನ್ನಲಾದ ಸಿಡಿ ವಿಚಾರದ ಆರೋಪ ಕುರಿತು ತಾನು ರಾಜಕೀಯ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಸಲೀಲೆ ಸಿಡಿ ಆರೋಪದ ವಿಚಾರದ ಬಗ್ಗೆ ಚರ್ಚೆ ಮಾಡುವುದು ಶೋಭೆ ತರುವುದಿಲ್ಲ. ರಾಜಕೀಯ ಮಾಡಲು ಬೇರೆ ಮಾರ್ಗಗಳಿವೆ ಎಂದರು.
ಆದರೆ ರಾಜಕೀಯ ವ್ಯಕ್ತಿಗಳ ಈ ರೀತಿಯ ನಡವಳಿಕೆಗಳಿಂದ ಸಮಾಜದಲ್ಲಿ ಯಾವ ರೀತಿ ಸಂದೇಶ ಹೋಗುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಈಗಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರೇ ಇದಕ್ಕೆ ಉತ್ತರ ನೀಡಬೇಕು. ಅವರಿಂದಲೇ ಪ್ರತಿಕ್ರಿಯೆ ಪಡೆಯಬೇಕು ಎಂದು ಮಾಧ್ಯಮದವರಿಗೆ ಹೇಳಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ರಾಕ್ಷಸಿ ಸರ್ಕಾರವೆಂದು ಉಲ್ಲೇಖಿಸಿ ಆ ಸರ್ಕಾರವನ್ನು ತೆಗೆದು ರಾಮರಾಜ್ಯ ಮಾಡುತ್ತೇವೆ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದರು. ಯಾವ ರಾಮರಾಜ್ಯ ಮಾಡ್ತಾರೋ ಗೊತ್ತಿಲ್ಲ. ರಾಮರಾಜ್ಯ ತರುವವರು, ತಂದವರು ಎಲ್ಲರೂ ಈ ವಿದ್ಯಮಾನದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕುಮಾರಸ್ವಾಮಿ ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ