ಬೆಂಗಳೂರು: ಗರ್ಭಿಣಿ ಪತ್ನಿ ಕೊಂದು ವಿಮಾನದಲ್ಲಿ ಪರಾರಿಯಾಗಿದ್ದ ಖತರ್ನಾಕ್ ಗಂಡನ ಸೆರೆ

ಬೆಂಗಳೂರು: `ಬಾನಲ್ಲೆ ಮಧುಚಂದ್ರಕೆ’ ಸಿನಿಮಾದಂತೆಯೇ ಬೆಂಗಳೂರಿನಲ್ಲೊಬ್ಬ ತನ್ನ ಹೆಂಡತಿಯನ್ನ ಕೊಲೆ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ಪತ್ನಿಯನ್ನು ಕೊಂದು ವಿಮಾನದಲ್ಲಿ ದೆಹಲಿಗೆ ಪರಾರಿಯಾದವನನ್ನು ಬೆಂಗಳೂರಿನ ಸದ್ದುಗುಂಟೆ ಪಾಳ್ಯ ಠಾಣೆ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಸಾಫ್ಟ್‌ವೇರ್ ಎಂಜಿನಿಯರ್ ನಾಝ್‍ ಎಂಬವರನ್ನು ಪ್ರೀತಿಸಿ ವಿವಾಹದ ನಂತರ ಕೊಲೆ ಮಾಡಿ ಪರಾರಿಯಾಗಿದ್ದ ನಾಸಿರ್ ಹುಸೇನ್‍ನನ್ನು ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅನಾಥನಾಗಿದ್ದ ನಾಸೀರ್ ಹುಸೇನ್ ಮತ್ತು ನಾಝ್ ಪರಸ್ಪರ ಪ್ರೀತಿಸಿ ಕಳೆದ ಆರು ತಿಂಗಳ ಹಿಂದೆ ವಿವಾಹವಾಗಿ ತಾವರೆಕೆರೆಯ ಸುಭಾಷ್ ನಗರದ ಅಪಾರ್ಟ್‍ಮೆಂಟ್‍ವೊಂದರಲ್ಲಿ ವಾಸವಾಗಿದ್ದರು. ಇತ್ತೀಚೆಗಷ್ಟೇ ಗರ್ಭಿಣಿಯಾಗಿದ್ದ ನಾಝ್ ಮೇಲೆ ನಾಸಿರ್ ಅನುಮಾನ ವ್ಯಕ್ತಪಡಿಸಿದ್ದ. ಇದರಿಂದ ದಂಪತಿ ಮಧ್ಯೆ ಕಲಹ ನಡೆಯುತ್ತಿತ್ತು, ನಾಸಿರ್ ಗರ್ಭಪಾತ ಮಾಡಿಸಿಕೊಳ್ಳುವಂತೆ ಹೆಂಡತಿಯನ್ನು ಒತ್ತಾಯಿಸಿದ್ದ.ಇದು ನಾಝ್‍ಗೆ ಇಷ್ಟವಿಲ್ಲದ ಕಾರಣ ಇಬ್ಬರ ನಡುವೆ ಆಗಾಗ ಗಲಾಟೆ ಆಗುತ್ತಿತ್ತು ಎನ್ನಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ವಿಕೋಪಕ್ಕೆ ಹೋಗಿತ್ತು. ಸಂಚು ರೂಪಿಸಿದ್ದ ನಾಸಿರ್ ನಾಝ್‍ಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ.

ನಾಸಿರ್‌ ಕೊಲೆ ಮಾಡುವ ಮೊದಲು ದೆಹಲಿಗೆ ವಿಮಾನ ಟಿಕೆಟ್ ಬುಕ್ ಮಾಡಿದ್ದ. ನಂತರ ಕೊಲೆ ಮಾಡಿ ಟ್ಯಾಕ್ಸಿ ಮೂಲಕ ವಿಮಾನ ನಿಲ್ದಾಣಕ್ಕೆ ತೆರಳಿದ್ದ. ನಂತರ ಟ್ಯಾಕ್ಸಿ ಚಾಲಕನಿಗೆ 4000 ರೂ. ಹಣ ಫೋನ್ ಪೇ ಮಾಡಿ ನಂತರ ಆತನಿಂದ 3500 ರೂ. ಹಣ ಮರಳಿ ಪಡೆದುಕೊಂಡಿದ್ದ ಎಂದು ಹೇಳಲಾಗಿದೆ.
ಕಳೆದ ಸೋಮವಾರ ತಾವರೆಕೆರೆಯ ಫ್ಲಾಟ್‌ನಲ್ಲಿ 6 ತಿಂಗಳ ಗರ್ಭಿಣಿ ನಾಝ್ ಎಂಬಾಕೆಯನ್ನ ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಆರೋಪಿ ನಾಸಿರ್ ಹುಸೇನ್ ಭಾನುವಾರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ದೆಹಲಿ ವಿಮಾನ ಟೇಕ್‍ಆಫ್ ಆಗುತ್ತಿದ್ದಂತೆ ಕೊನೆ ಕ್ಷಣದಲ್ಲಿ ಪತ್ನಿ ನಾಝ್‍ಳನ್ನು ಕೊಲೆ ಮಾಡಿರುವುದಾಗಿ ಬಾಮೈದನಿಗೆ ಮೆಸೇಜ್ ಮಾಡಿ ನಿನ್ನ ತಂಗಿಯ ಅಕ್ರಮ ಸಂಬಂಧಕ್ಕೆ ಕೋಪಗೊಂಡು ಕೊಲೆ ಮಾಡಿದ್ದೇನೆ. ಮನೆಗೆ ಹೋಗಿ ಮೃತದೇಹವನ್ನು ತೆಗೆದುಕೊಳ್ಳಿ ಎಂದು ಮೆಸೇಜ್ ಮಾಡಿ ಮೊಬೈಲ್ ಸ್ವಿಚ್‍ಆಫ್ ಮಾಡಿ ಪರಾರಿಯಾಗಿದ್ದ. ನಂತರ ದೆಹಲಿಯಿಂದ ಪಶ್ಚಿಮ ಬಂಗಾಳಕ್ಕೆ ಹೋಗಿ ತಲೆ ಮರೆಸಿಕೊಂಡಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡ ಸದ್ದುಗುಂಟೆ ಪಾಳ್ಯ ಠಾಣೆ ಪೊಲೀಸರು ಮೊಬೈಲ್ ಜಾಡು ಹಿಡಿದು ದೆಹಲಿಗೆ ತೆರಳಿದ್ದರು. ನಂತರ ಪಶ್ಚಿಮ ಬಂಗಾಳಕ್ಕೆ ತೆರಳಿದ ಪೊಲೀಸರು ಭಾನುವಾರ ಆತನ ಆಟಕ್ಕೆ ಹೆಡೆಮುರಿ ಕಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಶಿರಸಿ: ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು, ಇತರರ ನಿವಾಸದ ಮೇಲೆ ಐಟಿ ದಾಳಿ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement