ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಭಾಗಿಯಾಗಿದ್ದ ಶಿಕ್ಷಕರಿಗೆ ರಿಲೀಫ್‌ : ಅಮಾನತು ಆದೇಶಕ್ಕೆ ಕೆಎಟಿ ತಡೆ

ಕಲಬುರಗಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನದಲ್ಲಿ ಭಾಗವಹಿಸಿದ್ದ ಆರೋಪದ ಮೇಲೆ ಅಮಾನತುಗೊಂಡಿದ್ದ ಇಬ್ಬರು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಅಮಾನತು ಆದೇಶಕ್ಕೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (KAT) ಕಲಬುರಗಿ ಪೀಠ ತಡೆ ನೀಡಿದೆ.
ಹುಣಸಗಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುರುರಾಜ ಜೋಶಿ ಹಾಗೂ ಕುಪ್ಪಿ ಶಾಲೆಯ ಅಣ್ಣಾಸಾಹೇಬ ದೇಶಮುಖ್ ಅವರು ತಮ್ಮ ಅಮಾನತು ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (KAT) ಮೊರೆ ಹೋಗಿದ್ದರು.
ಆರ್‌ಎಸ್‌ಎಸ್‌ನ ಸಮವಸ್ತ್ರ ಧರಿಸಿ 2025ರ ಅಕ್ಟೋಬರ್‌ 10ರಂದು ಹುಣಸಗಿಯಲ್ಲಿ ನಡೆದ ಪಥಸಂಚಲನದಲ್ಲಿ ಭಾಗವಹಿಸಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಆಗಸ್ಟ್‌ 20ರಂದು ಇಬ್ಬರು ಶಿಕ್ಷಕರನ್ನು ಅಮಾನತುಗೊಳಿಸಿತ್ತು. ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಇಲಾಖೆಯು ಈ ಶಿಸ್ತು ಕ್ರಮ ಕೈಗೊಂಡಿತ್ತು. ಈ ವಿಚಾರ ರಾಜ್ಯ ರಾಜಕೀಯ ವಲಯದಲ್ಲಿಯೂ ವಿವಾದಕ್ಕೆ ಕಾರಣವಾಗಿದ್ದು, ಶಿಕ್ಷಕರ ಅಮಾನತು ಕ್ರಮದ ವಿರುದ್ಧ ವಿವಿಧ ವಲಯಗಳಿಂದ ಟೀಕೆ ವ್ಯಕ್ತವಾಗಿತ್ತು. ಬಳಿಕ ಶಿಕ್ಷಕರು ಪರಿಹಾರ ಕೋರಿ ಕೆಎಟಿ ಕಲಬುರಗಿ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.

ಪ್ರಮುಖ ಸುದ್ದಿ :-   ಖ್ಯಾತ ಕನ್ನಡ ನಟ ದುನಿಯಾ ವಿಜಯ - ನಾಗರತ್ನ ದಂಪತಿ ವಿಚ್ಛೇದನ : 2 ಕೋಟಿ ಜೀವನಾಂಶ ನೀಡಲು ಆದೇಶ

ವಿಚಾರಣೆಯ ವೇಳೆ ಶಿಕ್ಷಕರು, ಆರ್‌ಎಸ್‌ಎಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದುದನ್ನು ಯಾವುದೇ ರೀತಿಯ ದುರ್ನಡತೆ ಎಂದು ಪರಿಗಣಿಸಲಾಗುವುದಿಲ್ಲ ಎಂದು ವಾದಿಸಿದರು. ಇಲಾಖೆಯಿಂದ ನೀಡಲಾದ ಕಾರಣ ಕೇಳುವ ನೋಟಿಸ್‌ಗೆ ಸಲ್ಲಿಸಿದ್ದ ಉತ್ತರದಲ್ಲಿ, ಕಾರ್ಯಕ್ರಮವು ಭಾನುವಾರ ನಡೆದಿದ್ದು ತಮ್ಮ ಕರ್ತವ್ಯ ಸಮಯದ ಹೊರತಾದ ಅವಧಿಯಲ್ಲಿ ನಡೆದಿತ್ತು ಎಂದು ತಿಳಿಸಿದ್ದಾರೆ. ಅಲ್ಲದೆ, ಪಥಸಂಚಲನವು ರಾಜಕೀಯ ಕಾರ್ಯಕ್ರಮವಲ್ಲ; ಸಾಂಸ್ಕೃತಿಕ ಚಟುವಟಿಕೆಯ ಭಾಗವಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ ಶಿಕ್ಷಕರ ಈ ಸಮರ್ಥನೆಯನ್ನು ಇಲಾಖೆ ತಿರಸ್ಕರಿಸಿತ್ತು. ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳನ್ನು ಶಿಕ್ಷಕರು ಉಲ್ಲಂಘಿಸಿದ್ದಾರೆ ಎಂದು ಇಲಾಖೆ ಆರೋಪಿಸಿತ್ತು. ವಿಶೇಷವಾಗಿ ಶಿಕ್ಷಕರಂತಹ ಜವಾಬ್ದಾರಿಯುತ ಹುದ್ದೆಯಲ್ಲಿರುವ ಸರ್ಕಾರಿ ನೌಕರರು ರಾಜಕೀಯ ಸ್ವರೂಪದ ಚಟುವಟಿಕೆಗಳಲ್ಲಿ ಭಾಗವಹಿಸಬಾರದು ಎಂದು ಇಲಾಖೆ ತನ್ನ ನಿಲುವು ವ್ಯಕ್ತಪಡಿಸಿತ್ತು.

ಈ ಪ್ರಕರಣದ ಹಿಂದೆ ಶಿಕ್ಷಕರ ವಿರುದ್ಧ ದಾಖಲಾಗಿದ್ದ ದೂರುಗಳೂ ಕಾರಣವಾಗಿದ್ದವು. ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ ಜಿಲ್ಲಾ ಅಧ್ಯಕ್ಷ ಜುಮ್ಮಣ್ಣ ಗುಡಿಮನಿ ಅವರು ಆಗಿನ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ದೂರು ಸಲ್ಲಿಸಿ, ಸರ್ಕಾರಿ ನೌಕರರಾಗಿರುವ ಶಿಕ್ಷಕರು ದುರ್ನಡತೆ ಎಸಗಿದ್ದಾರೆ ಎಂದು ಆರೋಪಿಸಿದ್ದರು.
ಸರ್ಕಾರಿ ನೌಕರರು ರಾಜಕೀಯ ಸಂಘಟನೆಗಳ ಸದಸ್ಯರಾಗುವುದಕ್ಕೂ, ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿರುವ ಸಂಘಟನೆಗಳೊಂದಿಗೆ ಸಂಪರ್ಕ ಹೊಂದುವುದಕ್ಕೂ ಅವಕಾಶವಿಲ್ಲ. ಅಲ್ಲದೆ, ಪ್ರತಿಭಟನೆಗಳು ಮತ್ತು ಆಂದೋಲನಗಳಲ್ಲಿ ಭಾಗವಹಿಸುವುದೂ ನಿಯಮಬಾಹಿರ ಎಂದು ಇಲಾಖೆ ಹೇಳಿತ್ತು. ದೂರುಗಳು ಹಾಗೂ ವರದಿಗಳ ಆಧಾರದ ಮೇಲೆ ಶಿಕ್ಷಕರಿಗೆ ನೋಟಿಸ್‌ ಜಾರಿಗೊಳಿಸಿ, ನಂತರ ಇಲಾಖಾ ತನಿಖೆ ಪೂರ್ಣಗೊಳ್ಳುವವರೆಗೆ ಅಮಾನತು ಮಾಡಲಾಗಿತ್ತು.
ಗುರುರಾಜ ಜೋಶಿ ಮತ್ತು ಅಣ್ಣಾಸಾಹೇಬ ದೇಶಮುಖ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಕೆಎಟಿ ಕಲಬುರಗಿ ಪೀಠವು ಗುರುವಾರ ಅಮಾನತು ಆದೇಶಕ್ಕೆ ತಾತ್ಕಾಲಿಕ ತಡೆ ನೀಡಿದೆ. ಈ ಮಧ್ಯಂತರ ಆದೇಶದಿಂದ ಇಬ್ಬರು ಶಿಕ್ಷಕರಿಗೆ ರಿಲೀಫ್‌ ದೊರೆತಿದ್ದು, ಇಲಾಖಾ ತನಿಖೆ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಇತರೆ ವಿಚಾರಣೆಗಳು ಮುಂದಿನ ದಿನಗಳಲ್ಲಿ ಸಂಬಂಧಿತ ಪ್ರಾಧಿಕಾರಗಳ ಮುಂದೆ ಮುಂದುವರಿಯಲಿವೆ.

ಪ್ರಮುಖ ಸುದ್ದಿ :-   ಕುಮಟಾ : ಕುಂಬೇಶ್ವರ ದೇವಸ್ಥಾನದ ಅರ್ಚಕರ ಕೊಲೆ ಪ್ರಕರಣ ; ಮೂವರಿಗೆ ಜೀವಾವಧಿ ಶಿಕ್ಷೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement