ಮಂಗಳೂರು : ಧರ್ಮಸ್ಥಳದಲ್ಲಿ ಹಲವಾರು ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪಿತ ಪ್ರಕರಣಕ್ಕೆ ಸಂಬಂಧಿಸಿದಂತೆ, ದೂರುದಾರ ಚಿನ್ನಯ್ಯಗೆ ಆಶ್ರಯ ನೀಡಿದ ಆರೋಪದ ಮೇಲೆ ಉಜಿರೆಯಲ್ಲಿರುವ ಮಹೇಶ ಶೆಟ್ಟಿ ತಿಮರೋಡಿ ಅವರ ನಿವಾಸದ ಮೇಲೆ ವಿಶೇಷ ತನಿಖಾ ತಂಡ (ಎಸ್ಐಟಿ) ಮಂಗಳವಾರ (ಆಗಸ್ಟ್ 26) ದಾಳಿ ನಡೆಸಿದೆ
ಎಸ್ಐಟಿಯಿಂದ ಬೆಳಿಗ್ಗೆ 9:20 ರ ಸುಮಾರಿಗೆ ದಾಳಿ ನಡೆದಿದ್ದು, ಆಗಸ್ಟ್ 25 ರಂದು ಬೆಳ್ತಂಗಡಿ ನ್ಯಾಯಾಲಯದಿಂದ ಪಡೆದ ಸರ್ಚ್ ವಾರಂಟ್ ಜೊತೆ ಚಿನ್ನಯ್ಯನನ್ನು ಕರೆಕೊಂಡು ಬಂದು ಆವರಣದಲ್ಲಿ ಶೋಧ ಕಾರ್ಯಚರಣೆ ನಡೆಸಿದೆ . ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಎಸ್ಐಟಿ ಅಧಿಕಾರಿಗಳು ಚಿನ್ನಯ್ಯ ಅವರ ಮೊಬೈಲ್ ಫೋನ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಹಾಗೂ ತಿಮರೋಡಿ ಮನೆಯ ಸಿಸಿಟಿವಿ ಹಾರ್ಡ್ ಡಿಸ್ಕ್ ಅನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ಮಹೇಶ ಶೆಟ್ಟಿ ತಿಮರೋಡಿ ಮನೆಯಲ್ಲಿ ಚಿನ್ನಯ್ಯನಿಗೆ ಆಶ್ರಯ ನೀಡಿದ ಶಂಕೆ ಇದ್ದು, ಇದೇ ಮನೆಯಿಂದ ಈ ಚಿನ್ನಯ್ಯ ನಾನಾ ಯೂಟ್ಯೂಬ್ ಚಾನೆಲ್ ಗಳಿಗೆ ಸಂದರ್ಶನ ನೀಡಿದ್ದ ಎಂಬ ಅನುಮಾನವೂ ಇದೆ. ಈ ಹಿನ್ನೆಲೆಯಲ್ಲಿ ಚಿನ್ನಯ್ಯಗೆ ವಸ್ತುಗಳನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಎಸ್ಐಟಿ ದಾಳಿ ನಡೆಸಿದೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಶವಗಳನ್ನು ಹೂತಿಟ್ಟ ಆರೋಪಿತ ಪ್ರಕರಣಕ್ಕೆ ಸಂಬಂಧಿಸಿದ ಸಭೆಗಳು ಸಭೆಗಳು ಮತ್ತು ಯೋಜನೆಗಳು ಹೆಚ್ಚಾಗಿ ತಿಮರೋಡಿಯ ನಿವಾಸದಲ್ಲಿ ನಡೆಯುತ್ತಿದ್ದವು, ಈ ಹಿನ್ನೆಲೆಯಲ್ಲಿಯೂ ದಾಳಿ ನಡೆದಿದೆ ಎನ್ನಲಾಗಿದೆ. ಎಸ್ಐಟಿ ದಾಳಿಯ ಸಮಯದಲ್ಲಿ, ಮಹೇಶ ಶೆಟ್ಟಿ ತಿಮರೋಡಿ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ.
ಸುಳ್ಳು ಸಾಕ್ಷ್ಯಾಧಾರದ ಆರೋಪದ ಮೇಲೆ ಬಂಧಿಸಲ್ಪಟ್ಟಿರುವ ಚಿನ್ನಯ್ಯ, ಲೈಂಗಿಕ ದೌರ್ಜನ್ಯದ ಗುರುತುಗಳಿದ್ದ ಮಹಿಳೆಯರ ಶವಗಳು ಸೇರಿದಂತೆ ಹಲವಾರು ಶವಗಳನ್ನು ಧರ್ಮಸ್ಥಳದಲ್ಲಿ ದೀರ್ಘಕಾಲದವರೆಗೆ ಹೂಳಿರುವುದಾಗಿ ಹೇಳಿಕೊಂಡ ನಂತರ ವಿವಾದ ಭುಗಿಲೆದ್ದಿತು. ನಂತರ ಸರ್ಕಾರ ಈ ದೂರಿನ ರಚನೆಗೆ ಎಸ್ಐಟಿಯನ್ನು ರಚನೆ ಮಾಡಿತ್ತು. ದೇವಾಲಯವನ್ನು ಟಾರ್ಗೆಟ್ ಮಾಡುತ್ತಿರುವುದರ ವಿರುದ್ಧ ಬಿಜೆಪಿ ಪ್ರತಿಭಟಿಸಿತ್ತು. ದೂರು ಸುಳ್ಳಾಗಿದ್ದರೆ ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಕೂಡ ಎಚ್ಚರಿಸಿದ್ದರು. ಇತ್ತೀಚೆಗಷ್ಟೆ ಬಿಜೆಪಿ ನಾಯಕ ಬಿ.ಎಲ್. ಸಂತೋಷವಿರುದ್ಧ ಮಹೇಶ ಶೆಟ್ಟಿ ತಿಮರೋಡಿ ಅವಹೇಳನಕಾರಿ ಹೇಳಿಕೆಯ ಹಿನ್ನೆಲೆ ಉಡುಪಿ ಬ್ರಹ್ಮಾವರ ಪೊಲೀಸರಿಂದ ಬಂಧನಕ್ಕೊಳಗಾಗಿ ಜಾಮೀನು ಪಡೆದು ಹೊರಗೆ ಬಂದಿದ್ದಾರೆ.
.


ನಿಮ್ಮ ಕಾಮೆಂಟ್ ಬರೆಯಿರಿ