ತುಮಕೂರು: ಖಾಸಗಿ ಬಸ್ ಬೈಕ್ ಡಿಕ್ಕಿಯಾಗಿ ಬೈಕ್ನಲ್ಲಿದ್ದ ತಂದೆ-ಮಗಳು ಮೃತಪಟ್ಟ ಘಟನೆ ಭಾನುವಾರ (ಜನವರಿ 29) ಹೆಬ್ಬೂರಿನ ಬನ್ನಿಮರದಕಟ್ಟೆ ಬಳಿ ಸಂಭವಿಸಿದೆ.
ಮೃತರನ್ನು ತಿರುಮಲೇಗೌಡ (50), ಚಂದನ (20) ಎಂದು ಗುರುತಿಸಲಾಗಿದೆ. ಅಪಘಾತದ ಸ್ಥಳದಲ್ಲೇ ತಂದೆ ತಿರುಮಲೇಗೌಡ ಮೃತಪಟ್ಟಿದ್ದು, ಪುತ್ರಿ ಚಂದನಾ ಅವರಿಗೆ ಕುಣಿಗಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ತುಮುಕೂರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿದೆ. ನೆಟ್ಟಿಗೆರೆ ಗ್ರಾಮದ ನಿವಾಸಿಗಳಾಗಿದ್ದ ಇವರು ಬೆಂಗಳೂರಿನ ಸುಂಕದಕಟ್ಟೆಯಲ್ಲಿ ವಾಸವಾಗಿದ್ದರು.
ತಮ್ಮ ಊರಾದ ಗುಬ್ಬಿ ತಾಲೂಕಿನ ಸಿಎಸ್ಪುರ ಬಳಿಯ ನೆಟ್ಟಿಗೆರೆ ಗ್ರಾಮದಲ್ಲಿ ಹಬ್ಬ ಮುಗಿಸಿಕೊಂಡು ಬೈಕ್ನಲ್ಲಿ ಬೆಂಗಳೂರಿಗೆ ವಾಪಸ್ ಹೋಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲಿಸಿದ್ದಾರೆ. ಮೃತದೇಹಗಳನ್ನು ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ. ಇನ್ನು ಈ ಬಗ್ಗೆ ಹೆಬ್ಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ