ಗುಜರಾತಿನ ಬೊಟಾಡ್ ಜಿಲ್ಲೆಯಲ್ಲಿ 42 ವರ್ಷದ ವ್ಯಕ್ತಿಯೊಬ್ಬ ತನ್ನ ಮೂವರು ಮಕ್ಕಳೊಂದಿಗೆ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಲೆ ಯತ್ನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಈತ ಜಾಮೀನಿನ ಮೇಲೆ ಹೊರ ಬಂದಿದ್ದ ಎಂದು ಹೇಳಲಾಗಿದೆ.
ಮೃತರನ್ನು ಮಂಗಾಭಾಯಿ ವಿಜುದಾ ಹಾಗೂ ಅವರ ಪುತ್ರಿಯರಾದ ಸೋನಂ (17), ರೇಖಾ (21) ಮತ್ತು ಮಗ ಜಿಗ್ನೇಶ (19) ಎಂದು ಗುರುತಿಸಲಾಗಿದ್ದು, ಇವರು ಬೋಟಡ್ನ ಗಧಾಡಾ ತಾಲೂಕಿನ ನಾನಾ ಸಖ್ಪರ್ ಗ್ರಾಮದವರಾಗಿದ್ದಾರೆ.
ಈ ಘಟನೆ ಭಾನುವಾರ ಸಂಜೆ 6:30ಕ್ಕೆ ನಿಂಗಲಾ ಮತ್ತು ಆಲಂಪುರ್ ನಿಲ್ದಾಣಗಳ ನಡುವೆ ನಡೆದಿದೆ ಎಂದು ರೈಲ್ವೇ ರಕ್ಷಣಾ ಪಡೆ ಸಬ್ ಇನ್ಸ್ಪೆಕ್ಟರ್ ವಿ.ಎಸ್. ಗೋಲೆ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಸಂಬಂಧಿಕರೊಂದಿಗಿನ ಜಗಳದ ನಂತರ ಕೊಲೆ ಯತ್ನದ ಆರೋಪದ ಮೇಲೆ ವಿಜುದಾ ಬಂಧನಕ್ಕೊಳಗಾಗಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
“ ನಾಲ್ವರು ಭಾವನಗರದಿಂದ ಗಾಂಧಿಧಾಮಕ್ಕೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಳಿಗಳ ಮೇಲೆ ತಂದೆ ಮತ್ತು ಮಕ್ಕಳ ಶವಗಳು ಪತ್ತೆಯಾಗಿವೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ವಿ.ಎಸ್. ಗೋಲೆ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ