ರೆಸಾರ್ಟ್‌ ರಿಸೆಪ್ಶನಿಸ್ಟ್‌ ಅಂಕಿತಾ ಭಂಡಾರಿ ಕೊಲೆ ಪ್ರಕರಣ : ಬಿಜೆಪಿಯ ನಾಯಕನ ಪುತ್ರ, ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆ

ಡೆಹ್ರಾಡೂನ್: ಅಂಕಿತಾ ಭಂಡಾರಿ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಉತ್ತರಾಖಂಡದ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ಕೋಟ್ವಾರ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿಗಳಾದ ಪುಲ್ಕಿತ್ ಆರ್ಯ, ಸೌರಭ ಭಾಸ್ಕರ ಮತ್ತು ಅಂಕಿತ ಗುಪ್ತಾ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 201 (ಸಾಕ್ಷ್ಯ ನಾಶಪಡಿಸುವುದು), 120 ಬಿ (ಕ್ರಿಮಿನಲ್ ಪಿತೂರಿ), ಮತ್ತು 354 (ಮಹಿಳೆಯ ವಿರುದ್ಧ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ) ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಿದೆ.
ಪ್ರಮುಖ ಆರೋಪಿ ಪುಲ್ಕಿತ್ ಆರ್ಯ, ಉತ್ತರಾಖಂಡದ ಉಚ್ಚಾಟಿತ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವರ ಪುತ್ರ ಎಂಬುದು ಗಮನಾರ್ಹ. ಜೀವಾವಧಿ ಶಿಕ್ಷೆಯ ಜೊತೆಗೆ, ನ್ಯಾಯಾಲಯವು ಪ್ರತಿಯೊಬ್ಬ ಅಪರಾಧಿಗೆ ₹50,000 ದಂಡ ವಿಧಿಸಿತು ಮತ್ತು ಅಂಕಿತಾ ಭಂಡಾರಿ ಅವರ ಕುಟುಂಬಕ್ಕೆ ಒಟ್ಟಾರೆಯಾಗಿ ₹4 ಲಕ್ಷ ಪರಿಹಾರವನ್ನು ನೀಡುವಂತೆ ನಿರ್ದೇಶಿಸಿತು.

ಈ ಪ್ರಕರಣವು ಸೆಪ್ಟೆಂಬರ್ 2022ರದ್ದು, ಪೌರಿ ಜಿಲ್ಲೆಯ ಯಮಕೇಶ್ವರ ಬ್ಲಾಕ್‌ನಲ್ಲಿರುವ ವನಂತರಾ ರೆಸಾರ್ಟ್‌ನಲ್ಲಿ ಸ್ವಾಗತಕಾರಿಣಿಯಾಗಿದ್ದ 19 ವರ್ಷದ ಅಂಕಿತಾ ಭಂಡಾರಿ ಅವರನ್ನು ಕ್ರೂರವಾಗಿ ಕೊಲೆ ಮಾಡಲಾಗಿತ್ತು.  ಒತ್ತಡ ಹೇರಿದಾಗ ಅದಕ್ಕೆ ವಿರೋಧಿಸಿದ ಅಂಕಿತಾ ಅವರನ್ನು ಬ್ಯಾರೇಜ್‌ಗೆ ತಳ್ಳಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಸೆಪ್ಟೆಂಬರ್ 18, 2022 ರಂದು ಅಂಕಿತಾ ಕಾಣೆಯಾಗಿದ್ದಾರೆಂದು ವರದಿಯಾದಾಗ ಈ ಘಟನೆ ಬೆಳಕಿಗೆ ಬಂದಿತು. ಒಂದು ವಾರದ ನಂತರ ಚೀಲಾ ಶಕ್ತಿ ಕಾಲುವೆಯಲ್ಲಿ ಆಕೆಯ ಶವ ಪತ್ತೆಯಾಗಿದ್ದು, ರಾಜ್ಯಾದ್ಯಂತ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಯಿತು. ಆಕೆಯ ಸಾವಿಗೆ ಮುನ್ನ, ಪೌರಿ ಗರ್ವಾಲ್ ನಿವಾಸಿಯಾಗಿದ್ದ ಅಂಕಿತಾ, ರೆಸಾರ್ಟ್‌ನಲ್ಲಿನ ಚಟುವಟಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಮತ್ತು ತಮ್ಮ ಸುರಕ್ಷತೆಯ ಬಗ್ಗೆ ಭಯ ವ್ಯಕ್ತಪಡಿಸಿದ್ದರು ಎಂದು ವರದಿಯಾಗಿದೆ.
19 ವರ್ಷದ ಅಂಕಿತಾ ಭಂಡಾರಿ ಅವರ ಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಲಾಯಿತು.ವಿಶೇಷ ತನಿಖಾ ತಂಡ(SIT)ದ ತನಿಖೆಯ ಆಧಾರದ ಮೇಲೆ ರೆಸಾರ್ಟ್‌ ಮಾಲೀಕ ಪುಲ್ಕಿತ್ ಆರ್ಯ ಮತ್ತು ರೆಸಾರ್ಟ್‌ನ ಇಬ್ಬರು ಉದ್ಯೋಗಿಗಳಾದ ಸೌರಭ ಭಾಸ್ಕರ ಮತ್ತು ಅಂಕಿತ್ ಗುಪ್ತಾ ವಿರುದ್ಧ ಕೊಲೆ, ಸಾಕ್ಷ್ಯ ನಾಶ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಗಂಭೀರ ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.

ಪ್ರಮುಖ ಸುದ್ದಿ :-   ಏರ್ ಇಂಡಿಯಾ ವಿಮಾನದಲ್ಲಿ 7 ಮಂದಿ ಅಸ್ವಸ್ಥ

ಪೊಲೀಸರು ಸುಮಾರು 500 ಪುಟಗಳ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದರಲ್ಲಿ 97 ಸಾಕ್ಷಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಈ ಪೈಕಿ 47 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಯಿತು. ಎರಡು ವರ್ಷ ಮತ್ತು ಎಂಟು ತಿಂಗಳಿಗೂ ಹೆಚ್ಚು ಕಾಲ ನಡೆದ ಕಠಿಣ ನ್ಯಾಯಾಂಗ ಪ್ರಕ್ರಿಯೆಯ ಉದ್ದಕ್ಕೂ, ಮೂವರು ಆರೋಪಿಗಳನ್ನು ಜೈಲಿನಿಂದ ನಿರಂತರವಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಪ್ರಕರಣದಲ್ಲಿ ನಿರ್ಣಾಯಕ ಅಂಶವೆಂದರೆ ಅಂಕಿತಾ ಮತ್ತು ಪುಲ್ಕಿತ್ ಆರ್ಯ ನಡುವಿನ ವರದಿಯಾದ ವಿವಾದ. ತನಿಖೆಯ ಪ್ರಕಾರ, ಪುಲ್ಕಿತ್ ಅಂಕಿತಾ ಮೇಲೆ ಆಪಾದಿತ ವಿಐಪಿ ಅತಿಥಿಗೆ “ಹೆಚ್ಚುವರಿ ಸೇವೆಗಳನ್ನು” ಒದಗಿಸುವಂತೆ ಒತ್ತಡ ಹೇರಿದ್ದರ ಸುತ್ತ ಸಂಘರ್ಷ ಕೇಂದ್ರೀಕೃತವಾಗಿತ್ತು. ಅಂಕಿತಾ ತನ್ನ ಸ್ನೇಹಿತ ಪುಷ್ಪದೀಪ್ ಜೊತೆ ತನ್ನ ಆತಂಕವನ್ನು ಹಂಚಿಕೊಂಡಿದ್ದರು, ನಂತರ ಅವರು ವೀಡಿಯೊ ಹೇಳಿಕೆಯಲ್ಲಿ ತಮ್ಮ ಆತಂಕಗಳನ್ನು ದೃಢಪಡಿಸಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement