ಆಲಪ್ಪುಳ: ವಿಷು ಹಬ್ಬದ ಶುಭಾಶಯ ಕೋರುವ ಕಾರ್ಡ್ನಲ್ಲಿ ಭಗವಾನ್ ಶ್ರೀಕೃಷ್ಣನ ಚಿತ್ರದ ಪಕ್ಕದಲ್ಲಿ ‘ಚಿಕನ್ ಮಂಡಿ’ (ಗ್ರಿಲ್ಡ್ ಚಿಕನ್ ಮತ್ತು ಅನ್ನದ ಖಾದ್ಯ) ಇರುವ ಫೋಟೋವನ್ನು ಬಳಸಿ ವಿವಾದ ಸೃಷ್ಟಿಸಿದ್ದ ಕೇರಳದ ರೆಸ್ಟೋರೆಂಟ್ ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ.
ಚೇರ್ತಲಾದ ಮನೋರಮಾ ಜಂಕ್ಷನ್ ಬಳಿ ಇರುವ ‘ಮೆಹರ್ ಮಂದಿ ಅಂಡ್ ಗ್ರಿಲ್ಸ್’ ಹೋಟೆಲ್ನ ಮಾಲೀಕ ಅರ್ಷದ್ ಬಂಧಿತ ವ್ಯಕ್ತಿ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಷು ಹಬ್ಬದ ಪೋಸ್ಟರ್ನಲ್ಲಿ, ಅನ್ನ ಮತ್ತು ಗ್ರಿಲ್ಡ್ ಚಿಕನ್ ತುಂಬಿದ ತಟ್ಟೆಯ ಮುಂದೆ ಶ್ರೀಕೃಷ್ಣನು ಕುಳಿತಿರುವಂತೆ ಚಿತ್ರಿಸಲಾಗಿತ್ತು. ಈ ಚಿತ್ರವು ಹಿಂದೂ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.
ಈ ಚಿತ್ರವು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ತಣ್ಣೀರ್ಮುಕ್ಕಂ ಮೂಲದ ನ್ಯಾಯವಾದಿ ಎಂ.ವಿ. ಬಿಜು ಎಂಬುವವರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ, ಕೋಮು ಸಂಘರ್ಷ ಪ್ರಚೋದಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳಿಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಅಪರಾಧಕ್ಕೆ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ.
ಹೋಟೆಲ್ ಪಾಲುದಾರರ ಕ್ಷಮೆಯಾಚನೆ
ವಿವಾದ ತಾರಕಕ್ಕೇರುತ್ತಿದ್ದಂತೆ, ಹೋಟೆಲ್ನ ಮ್ಯಾನೇಜಿಂಗ್ ಪಾರ್ಟ್ನರ್ಗಳಲ್ಲಿ ಒಬ್ಬರಾದ ಶಮೀರ್ ಇನ್ಸ್ಟಾಗ್ರಾಮ್ ಮೂಲಕ ಬೇಷರತ್ ಕ್ಷಮೆಯಾಚಿಸಿದ್ದಾರೆ.
“ಈ ಪೋಸ್ಟರ್ ಅನ್ನು ಉದ್ದೇಶಪೂರ್ವಕವಾಗಿ ಹಂಚಿಕೊಂಡಿಲ್ಲ. ಆರಂಭದಲ್ಲಿ ಇದನ್ನು ಖಾಸಗಿ ಗುಂಪೊಂದರಲ್ಲಿ ಹಂಚಿಕೊಳ್ಳಲಾಗಿತ್ತು, ಅಲ್ಲಿ ಆಕ್ಷೇಪಣೆಗಳು ವ್ಯಕ್ತವಾಗಿದ್ದವು. ಆದರೆ ನಂತರ ತಪ್ಪು ಸಂವಹನದಿಂದಾಗಿ (Miscommunication) ಈ ಚಿತ್ರ ಬೇರೆಯವರಿಗೆ ಫಾರ್ವರ್ಡ್ ಆಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿತು ಎಂದು ಅವರು ಹೇಳಿದ್ದಾರೆ.
ಯಾವುದೇ ಧರ್ಮದ ಭಾವನೆಗಳಿಗೆ ನೋವುಂಟು ಮಾಡುವ ಉದ್ದೇಶ ನಮಗಿಲ್ಲ. ಪೋಸ್ಟರ್ ಅನ್ನು ಅಳಿಸಿ ಹಾಕುವ ಮೊದಲೇ ಅದು ವೈರಲ್ ಆಗಿದೆ. ದಯವಿಟ್ಟು ಈ ವಿಚಾರವನ್ನು ಇಲ್ಲಿಗೆ ಕೈಬಿಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪ್ರಸ್ತುತ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ