
ಶಿವಮೊಗ್ಗ: ದೀಪಾವಳಿ ಹಬ್ಬದಂದು ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮಾಜಿ ಶಾಸಕರೊಬ್ಬರಿಗೆ ಹೋರಿಯೊಂದು ತಿವಿದಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಎರಡು ದಿನಗಳ ಹಿಂದೆ ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಯಲ್ಲಿ ಸಾಂಪ್ರಾದಾಯಿಕ ಗ್ರಾಮೀಣ ಕ್ರೀಡೆ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯನ್ನು ವೀಕ್ಷಿಸಲು ಶಿಕಾರಿಪುರದ ಮಾಜಿ ಶಾಸಕ ಮಹಾಲಿಂಗಪ್ಪ ತೆರಳಿದ್ದರು.

ಹೋರಿ ಬೆದರಿಸುವ ಸ್ಪರ್ಧೆ ನೋಡಲು ಮನೆಯೊಂದರ ಬಾಗಿಲ ಮುಂದೆ ನಿಂತಿದ್ದಾಗ ಗಾಬರಿಗೊಂಡಿದ್ದ ಬಂದ ಹೋರಿ ಬಂದು ಅವರನ್ನು ತಿವಿದಿದೆ. ಒಂದೆರಡು ಬಾರಿ ಮಹಾಲಿಂಗಪ್ಪ ಅವರನ್ನು ತಿವಿದ ಹೋರಿ ನಂತರ ಅವರನ್ನು ಎತ್ತಿಹಾಕಿದೆ. ಮಾಜಿ ಶಾಸಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆಂದು ಎಂದು ಹೇಳಲಾಗಿದೆ.
ಸ್ಥಳೀಯರು ಹೋರಿ ಬೆದರಿಸುವ ಸ್ಪರ್ಧೆಯನ್ನು ರೆಕಾರ್ಡ್ ಮಾಡುವಾಗ ಈ ದೃಶ್ಯ ಸೆರೆಯಾಗಿದೆ. ಮನೆಯೊಂದರ ಬಾಗಿಲತ್ತ ನಿಂತಿದ್ದ ಮಹಾಲಿಂಗಪ್ಪ ಅವರಿಗೆ ಓಡಿಬಂದ ಹೋರಿ ಕೊಂಬಿನಿಂದ ತಿವಿದಿದ್ದು ಕಂಡುಬಂದಿದೆ. ತದನಂತರ ಅವರು ಅಂಗಾತ ಬಿದ್ದಿರುವುದು ಕಂಡುಬಂದಿದೆ. ನಂತರ ಹೋರಿ ಅಲ್ಲಿಂದ ಓಡಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಜಿ ಶಾಸಕರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ