ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಮಂಗೇಶ ಪವಾರ್ ಮತ್ತು ಉಪಮೇಯರ್ ವಾಣಿ ಜೋಶಿ ಆಯ್ಕೆಯಾಗಿದ್ದಾರೆ.
ಮಹಾಪೌರ ಸ್ಥಾನ ಸಾಮಾನ್ಯ ಹಾಗೂ ಉಪಮಹಾಪೌರ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.
ಮಹಾಪೌರರಾಗಿ ಆಯ್ಕೆಯಾದ ಮಂಗೇಶ ಪವಾರ್ 41ನೇ ವಾರ್ಡಿನ ಸದಸ್ಯರು ಹಾಗೂ ಮರಾಠಿ ಭಾಷಿಕರು. ಉಪಮಹಾಪೌರರಾಗಿ ಆಯ್ಕೆಯಾದ ಕನ್ನಡ ಭಾಷಿಕ ವಾಣಿ ವಿಲಾಸ ಜೋಶಿ 43ನೇ ವಾರ್ಡಿನ ಸದಸ್ಯೆಯಾಗಿದ್ದಾರೆ. ಈ ಎರಡೂ ವಾರ್ಡುಗಳು ಬೆಳಗಾವಿ ದಕ್ಷಿಣ ಮತ ಕ್ಷೇತ್ರದಲ್ಲಿ ಬರುತ್ತಿದ್ದು, ಈ ಮೂಲಕ ಈ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ್ತೊಮ್ಮೆ ಮಹಾನಗರ ಪಾಲಿಕೆಯಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿದ್ದಾರೆ.
ಮಹಾಪೌರ ಸ್ಥಾನಕ್ಕೆ ಬಿಜೆಪಿಯಿಂದ ಮಂಗೇಶ ಪವಾರ್, ರಾಜು ಭಾತಖಾಂಡೆ, ಎಂಇಎಸ್ ನ ಬಸವರಾಜ ಮಾರುತಿ ಮೋದಗೇಕರ, ಎಐಎಂಐಎಂನ ಶಾಹಿದಖಾನ್ ಪಠಾಣ ತಲಾ 2 ನಾಮಪತ್ರ ಸಲ್ಲಿಸಿದರು. ಬಳಿಕ ರಾಜು ಭಾತಖಾಂಡೆ ಹಾಗೂ ಶಾಹಿದಖಾನ್ ಪಠಾಣ ಉಮೇದುವಾರಿಕೆ ವಾಪಸ್ ಪಡೆದರು. ಮಂಗೇಶ ಹಾಗೂ ಬಸವಾರಾಜ ಮಧ್ಯೆ ಚುನಾವಣೆ ನಡೆಯಿತು. ಮಂಗೇಶ ಪರವಾಗಿ 40 ಹಾಗೂ ವಿರುದ್ಧವಾಗಿ 5 ಮತಗಳು ಚಲಾವಣೆಯಾದವು. ತಟಸ್ಥವಾಗಿ ಇರುವ ಆಯ್ಕೆಗೆ ಯಾರೂ ಕೈ ಎತ್ತಲಿಲ್ಲ.
ಬಸವರಾಜ ಪರವಾಗಿ 20, ವಿರುದ್ಧವಾಗಿ 40 ಮತಗಳು ಬಂದವು. ಹೆಚ್ಚು ಮತ ಪಡೆದ ಮಂಗೇಶ ಅವರನ್ನು ಮಹಾಪೌರ ಎಂದು ಘೋಷಿಸಲಾಯಿತು.
ಉಪಮಹಾಪೌರ ಸ್ಥಾನಕ್ಕೆ ವಾಣಿ ವಿಲಾಸ ಜೋಶಿ, ದೀಪಾಲಿ, ಖುರ್ಷಿದ್ ಮುಲ್ಲಾ, ಲಕ್ಷ್ಮೀ ಲೋಕರಿ ತಲಾ 2 ನಾಮಪತ್ರ ಸಲ್ಲಿದರು. ಖುರ್ಷಿದ್ ಮುಲ್ಲಾ ಹಾಗೂ ದೀಪಾಲಿ ಉಮೇದುವಾರಿಕೆ ವಾಪಸ್ ಪಡೆದರು. ಕಣದಲ್ಲಿ ಉಳಿದ ವಾಣಿ ವಿಲಾಸ ಜೋಶಿ ಪರವಾಗಿ 40 ಹಾಗೂ ವಿರುದ್ಧವಾಗಿ 19 ಮತಗಳು ಬಂದವು. ಲಕ್ಷ್ಮೀ ಲೋಕರಿ ಪರವಾಗಿ 20, ವಿರೋಧವಾಗಿ 40 ಮತಗಳು ಬಂದವು. ಹೆಚ್ಚು ಮತ ಪಡೆದ ವಾಣಿ ಜೋಶಿ ಅವರನ್ನು ಉಪಮಹಾಪೌರ ಎಂದು ಘೋಷಿಸಲಾಯಿತು.
ಸಚಿವರಾದ ಲಕ್ಷ್ಮೀ ಹೆಬ್ಬಾಳಕರ, ಸತೀಶ ಜಾರಕಿಹೊಳಿ, ಶಾಸಕ ಆಸಿಫ್ ಸೇಠ್, ಸಂಸದೆ ಪ್ರಿಯಾಂಕ ಜಾರಕಿಹೊಳಿ ಹಾಗೂ ಒಬ್ಬ ಪಾಲಿಕೆ ಸದಸ್ಯ ಗೈರು ಹಾಜರಾಗಿದ್ದರು.
65 ಮತದಾರ ಪೈಕಿ 60 ಮಂದಿ ಹಾಜರಿದ್ದರು.
ಗೋವಾವೇಸ್ ಬಳಿಯ ತಿನಿಸುಕಟ್ಟೆಯ ಮಳಿಗೆಗಳನ್ನು ತಮ್ಮ ಪತ್ನಿಯ ಹೆಸರಿನಲ್ಲಿ ಪಡೆದಿದ್ದಾರೆ ಎಂಬ ಕಾರಣಕ್ಕೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮಂಗೇಶ ಪವಾರ್ ಅವರ ಮಹಾನಗರ ಪಾಲಿಕೆ ಸದಸ್ಯತ್ವವನ್ನು ರದ್ದುಗೊಳಿಸಿದ್ದರು. ಇದನ್ನು ಪ್ರಶ್ನಿಸಿ ಮಂಗೇಶ ಪವಾರ್ ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು. ಇದೀಗ ಅವರೇ ಬೆಳಗಾವಿ ಮಹಾನಗರ ಪಾಲಿಕೆಯ ನೂತನ ಮಹಾಪೌರರಾಗಿ ಆಯ್ಕೆ ಆಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ