‘ದುಷ್ಟಶಕ್ತಿ ಓಡಿಸಲು’ ಇಸ್ಲಾಂಗೆ ಮತಾಂತರವಾಗುವಂತೆ ಮಹಿಳೆಗೆ ಒತ್ತಡ : ಮೌಲ್ವಿಯ ಬಂಧನ

ಗಾಜಿಯಾಬಾದ್: ಇಸ್ಲಾಂಗೆ ಮತಾಂತರವಾದರೆ ಮಾತ್ರ ‘ದುಷ್ಟ ಶಕ್ತಿಯಿಂದ ಬಿಡುಗಡೆ ಸಾಧ್ಯ’ ಎಂದು ಮಹಿಳೆಯನ್ನು ಹೆದರಿಸಿ ನಂಬಿಸಿದ್ದ ಆರೋಪದ ಮೇರೆಗೆ ಉತ್ತರ ಪ್ರದೇಶದಲ್ಲಿ ಮೌಲ್ವಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯ ಮಗ ಅಕ್ಷಯ ಶ್ರೀವಾಸ್ತವ (35) ಎಂಬವರು ನಂದಗ್ರಾಮ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ ಮೌಲ್ವಿ ಸರ್ಫರಾಜ್ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದರ ಆಧಾರದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಮ್ಮ ತಾಯಿ ಮೀನು ಎಂಬವರು 2017ರಿಂದ ಕೆಲವು ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರು ಕೆಲವು ಜನರ ಸಲಹೆ ನೀಡಿದ ನಂತರ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮೌಲ್ವಿಯ ಬಳಿ ನೆರವಿಗಾಗಿ ಹೋಗಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಮೌಲ್ವಿಯ ಸೂಚನೆ ಮೇರೆಗೆ ಮನೆಯಲ್ಲಿದ್ದ ಎಲ್ಲಾ ಹಿಂದೂ ದೇವರ ವಿಗ್ರಹಗಳು ಮತ್ತು ಫೋಟೋಗಳನ್ನು ನಮ್ಮ ತಾಯಿ ತೆಗೆದುಹಾಕಿದ್ದರು. ಇಸ್ಲಾಂಗೆ ಮತಾಂತರವಾಗುವಂತೆ ತಮ್ಮ ಮಕ್ಕಳು ಹಾಗೂ ಕುಟುಂಬದ ಇತರೆ ಸದಸ್ಯರಿಗೂ ಅವರು ಒತ್ತಾಯಿಸಲು ಶುರುಮಾಡಿದ್ದರು ಎಂದು ಮಗ ಅಕ್ಷಯ ಆರೋಪಿಸಿದ್ದಾರೆ.

ಹಿಂದೂ ಧರ್ಮದ ಆಚರಣೆಯನ್ನು ಮುಂದುವರಿಸಿದರೆ ತನ್ನ ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ಇದಕ್ಕಾಗಿ ನೀವು ಇಸ್ಲಾಂಗೆ ಮತಾಂತರವಾಗಬೇಕು. ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗಲು ಇರುವುದು ಇದೊಂದೇ ಮಾರ್ಗ. ನೀವು ಮತಾಂತರವಾದರೆ ನಿಮ್ಮ ಆರೋಗ್ಯ ಸುಧಾರಣೆಯಾಗಲಿದೆ ಎಂದು ಮೀನು ಅವರನ್ನು ಸರ್ಫರಾಜ್ ನಂಬಿಸಿದ್ದ ಎಂಬುದಾಗಿ ಪೊಲೀಸರು ಹೇಳಿದ್ದಾರೆ.
ಗಾಜಿಯಾಬಾದಿನ ಮೋರ್ಟಿ ಗ್ರಾಮದ ಮೌಲ್ವಿ ಸರ್ಫರಾಜ್‌ನನ್ನು ಬಂಧಿಸಲಾಗಿದೆ ಎಂದು ನಂದಗ್ರಾಮ ಎಸಿಪಿ ರವಿಕುಮಾರ ಸಿಂಗ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

ತಾನು ಈ ಪ್ರದೇಶದಲ್ಲಿ ಕಳೆದ ಎಂಟು ವರ್ಷಗಳಿಂದ ಭೂತೋಚ್ಛಾಟನೆ ಮಾಡುವುದನ್ನು ಮಾಡುತ್ತಿದ್ದೆ. ದೆವ್ವ ಭೂತಗಳ ಭಯ ಬಿಡಿಸುವ ನೆಪದಲ್ಲಿ ಅನಾರೋಗ್ಯಪೀಡಿತ ಜನರಿಗೆ ಇಸ್ಲಾಂ ಸ್ವೀಕರಿಸುವಂತೆ ಒತ್ತಡ ಹೇರುತ್ತಿದ್ದುದ್ದಾಗಿ ವಿಚಾರಣೆ ವೇಳೆ ಸರ್ಫರಾಜ್ ಪೊಲೀಸರಿಗೆ ತಿಳಿಸಿದ್ದಾನೆ.
ಉತ್ತರ ಪ್ರದೇಶ ಅಕ್ರಮ ಧಾರ್ಮಿಕ ಮತಾಂತರದ ನಿಷೇಧ ಕಾಯ್ದೆ ಮತ್ತು ಮಾದಕವಸ್ತು ಹಾಗೂ ಮಂತ್ರ ವಿದ್ಯೆ ಪರಿಹಾರ ಕಾಯ್ದೆಗಳ ವಿವಿಧ ಸೆಕ್ಷನ್‌ಗಳ ಅಡಿ ಸರ್ಫರಾಜ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಎಸಿಪಿ ರವಿಕುಮಾರ ಸಿಂಗ್ ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement