ನವದೆಹಲಿ: ಕೊರೊನಾ ಎರಡನೇ ಅಲೆ ಇನ್ನು ಮುಗಿದಿಲ್ಲ. ಇಡೀ ದೇಶ ಕೊರೊನಾ ಮುಕ್ತವಾಗುವವರೆಗೂ ನಾವು ಸುರಕ್ಷಿತರಲ್ಲ ಎಂದು ನೀತಿ ಆಯೋಗದ ಸದಸ್ಯರಾದ ಡಾ. ವಿಕೆ ಪಾಲ್ ರಾಜ್ಯಗಳನ್ನು ಎಚ್ಚರಿಸಿದ್ದಾರೆ.
ಆರೋಗ್ಯ ಸಚಿವಾಲಯದಲ್ಲಿ ಮಾತನಾಡಿದ ಡಾ. ಪಾಲ್ ಅವರು, ಕೋವಿಡ್ ನಿಯಂತ್ರಣ ಸಂಬಂಧ ಆಯಾ ರಾಜ್ಯಗಳು ತೆಗೆದುಕೊಂಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರೆಸುವಂತೆ ಮನವಿ ಮಾಡಿದರು.ಹಲವು ರಾಜ್ಯಗಳು ಕೊರೊನಾ ಎರಡನೇ ಅಲೆ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಹೇರಲಾಗಿದ್ದ ಲಾಕ್ಡೌನ್ ಸಡಿಲಗೊಳಿಸಿ ಅನ್ಲಾಕ್ ಪ್ರಕ್ರಿಯೆ ಆರಂಭಿಸುತ್ತಿರುವ ಸಮಯದಲ್ಲಿ ವಿ.ಕೆ. ಪಾಲ್ ಅವರು ಈ ಎಚ್ಚರಿಕೆ ನೀಡಿದ್ದಾರೆ.
ಮೊದಲನೇ ಅಲೆಯ ಸಂದರ್ಭದಲ್ಲಿ ಲಾಕ್ಡೌನ್ ಸಡಿಲಕೆ ಮಾಡಿ ನಿರ್ಲಕ್ಷ್ಯ ವಹಿಸಿದ ಬಳಿಕ ಎರಡನೆ ಅಲೆ ಅಪ್ಪಳಿಸಿದ್ದು, ಮೊದಲನೆಯದಕ್ಕಿಂತ ಹೆಚ್ಚು ಮಾರಕವೆಂಬುದನ್ನು ಸಾಬೀತು ಮಾಡಿದೆ. ಮೊದಲನೆ ಅಲೆಯ ಸಂದರ್ಭದಲ್ಲಿ ಭಾರತ ದೇಶವ್ಯಾಪಿ ಕಟ್ಟುನಿಟ್ಟಾದ ಲಾಕ್ಡೌನ್ನಿಂದ ಹೊರಬಂದಾಗ ಹಲವು ಪಾಠಗಳನ್ನು ಕಲಿತಿದ್ದು, ಇದು ಆತ್ಮವಿಶ್ವಾಸಕ್ಕೆ ಕಾರಣವಾಯಿತು ಮತ್ತು ಎರಡನೇ ಅಲೆ ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಆದರೆ, ಎರಡನೆ ಅಲೆ ಸಂಪೂರ್ಣ ಹತೋಟಿಗೆ ಬಂದಿಲ್ಲ. ಹೀಗಾಗಿ ರಾಜ್ಯ ಸರ್ಕಾರಗಳು ನಿರ್ಬಂಧ ಹಾಗೂ ಸಡಿಲಿಕೆ ಕ್ರಮ ತೆಗೆದುಕೊಳ್ಳುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿಕೇಂದ್ರ ಸರ್ಕಾರವು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕಠಿಣ ನಿರ್ಬಂಧಗಳು ಅಗತ್ಯವಿರುವ ಜಿಲ್ಲೆಗಳನ್ನು ಗುರುತಿಸಲು ಎರಡು ದಿಗಳ ಹಿಂದೆ ಜುಲೈ ತಿಂಗಳ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮಾರ್ಗಸೂಚಿಗಳು ಹೀಗಿವೆ..
*ಪಾಸಿಟಿವಿಟಿ ದರ ಅತಿ ಹೆಚ್ಚಿರುವ ಜಿಲ್ಲೆಗಳನ್ನು ಗುರುತಿಸುವುದು (ಶೇ. 10ಕ್ಕಿಂತ ಹೆಚ್ಚು)
*ಲಭ್ಯವಿರುವ ಹಾಸಿಗೆ (ಆಮ್ಲಜನಕ ಮತ್ತು ಐಸಿಯು ಬೆಡ್ಸ್)ಗಳ ಸೌಕರ್ಯದ ಬಗ್ಗೆ ವಿಶೇಷ ಗಮನ ನೀಡುವುದು.
*ಆಯಾ ವಾರದಲ್ಲಿ ಹೆಚ್ಚಿನ ಪಾಸಿಟಿವಿಟಿ ದರ ಅಥವಾ ಹೆಚ್ಚಿನ ಬೆಡ್ ಆಕ್ಯುಪೆನ್ಸಿ (ಆಮ್ಲಜನಕ ಮತ್ತು ಐಸಿಯು ಹಾಸಿಗೆಗಳು) ಹೊಂದಿರುವ ಜಿಲ್ಲೆಗಳಲ್ಲಿ ತೀವ್ರ ಮೇಲ್ವಿಚಾರಣೆ ಮಾಡುವುದು.
*ಪಾಸಿಟಿವಿಟಿ ದರ ಹೆಚ್ಚಿರುವ ಜಿಲ್ಲೆಗಳಲ್ಲಿ ಮತ್ತೆ ಕನಿಷ್ಠ 14 ದಿನಗಳ ಕಾಲ ನಿರ್ಬಂಧಗಳನ್ನು ವಿಧಿಸುವುದು. ಜಿಲ್ಲೆಯ ಪ್ರದೇಶವಾರು ಸಡಿಲಿಕೆ / ನಿರ್ಬಂಧದ ಬಗ್ಗೆ ಸ್ಪಷ್ಟವಾಗಿ ಸೂಚಿಸಿವುದು.
ಇವುಗಳನ್ನು ಮಾಡಲು ಕೇಂದ್ರವು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಮೇಲ್ವಿಚರಣೆ ಮಾಡುವುದು ಹೇಗೆ ಎಂಬ ಬಗ್ಗೆಯೂ ಕೇಂದ್ರ ಸರ್ಕಾರ ರಾಜ್ಯಗಳಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದೆ.
* ಜಿಲ್ಲಾ ಮಟ್ಟದಲ್ಲಿ ಪ್ರಕರಣಗಳ ಸಮೂಹಗಳ ಆಧಾರದ ಮೇಲೆ ಸೂಕ್ಷ್ಮ ವಿಶ್ಲೇಷಣೆ ಮಾಡಬೇಕು.
* ಆರೋಗ್ಯ ಮೂಲಸೌಕರ್ಯ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಬೇಕು.
*ಟೆಸ್ಟ್-ಟ್ರ್ಯಾಕ್-ಟ್ರೀಟ್-ವ್ಯಾಕ್ಸಿನೇಟ್ ತಂತ್ರವನ್ನು ಕಾರ್ಯಗತಗೊಳಿಸಬೇಕು ಮತ್ತು ಕೋವಿಡ್ -19 ಸೂಕ್ತ ನಡವಳಿಕೆ ಅನುಸರಿಸಲಾಗುತ್ತಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು.
ಈ ಜಿಲ್ಲೆಗಳಿಗೆ ಹಿರಿಯ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ. ಎರಡು ತಿಂಗಳ ಹಿಂದೆ ಹಲವು ರಾಜ್ಯಗಳಲ್ಲಿ ಕೊರೋನಾ ಎರಡನೇ ಅಲೆ ವ್ಯಾಪಕವಾಗಿ ಇತ್ತು. ಕೊರೊನಾ ನಿಯಂತ್ರಣಕ್ಕಾಗಿ ಆಯಾ ರಾಜ್ಯ ಸರ್ಕಾರಗಳು ಲಾಕ್ಡೌನ್ ಸೇರಿದಂತೆ ಹಲವು ಕ್ರಮಗಳನ್ನು ಜಾರಿಗೊಳಿಸಿದ್ದವು. ಸೋಂಕು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ಬಂದಂತೆ ಲಾಕ್ಡೌನ್ ಸಡಿಲಿಕೆಗೊಳಿಸಿದೆ. ಕರ್ನಾಟಕದಲ್ಲೂ ಸಹ ಕೆಲ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಡೆ ಅನ್ಲಾಕ್ ಪ್ರಕ್ರಿಯೆ ಆರಂಭಿಸಿದೆ.ಈ ಬೆನ್ನಲ್ಲೇಕೇಂದ್ರದಿಂದ ಈ ಮಹತ್ವದ ಸೂಚನೆಗಳು ಬಂದಿವೆ.
ನಿಮ್ಮ ಕಾಮೆಂಟ್ ಬರೆಯಿರಿ