150 ಕ್ಷೇತ್ರಗಳಲ್ಲಿ ನಮ್ಮ ಸಮುದಾಯವೇ ನಿರ್ಣಾಯಕ: ರಮೇಶ್ ಜಾರಕಿಹೊಳಿ

ಹರಿಹರ:ರಾಜ್ಯದ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಮ್ಮ ನಾಯಕ ಸಮುದಾಯ ನಿರ್ಣಾಯಕವಾಗಿದೆ. ಹಾಗಾಗಿಯೇ ಜನಜಾಗೃತಿ ಸಮಾವೇಶದ ಮೂಲಕ ನಮಗೆ ನ್ಯಾಯಸಮ್ಮತವಾಗಿ ದೊರಕಬೇಕಾದ ಸವಲತ್ತುಗಳ ಬಗ್ಗೆ ಮುಖ್ಯಮಂತ್ರಿಗಳ ಗಮನ‌ಸೆಳೆದಿದ್ದೇವೆ ಎಂದು ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು.
ಹರಿಹರ ತಾಲೂಕಿನ ರಾಜನಹಳ್ಳಿ ಗ್ರಾಮದಲ್ಲಿರುವ ವಾಲ್ಮೀಕಿ ಗುರುಪೀಠದಲ್ಲಿ ಹಮ್ಮಿಕೊಳ್ಳಲಾಗಿದ್ದ 3ನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆ ಮತ್ತು ಜನಜಾಗೃತಿ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾಯಕ ಜನಾಂಗದ ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗಿದೆ. ಆರ್ಥಿಕ, ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ಪಡೆಯುವ ದಿಸೆಯಲ್ಲಿ ಸಾಂಘಿಕ ಶಕ್ತಿ ಪ್ರದರ್ಶಿಸಬೇಕಾಗಿದೆ ಎಂದರು.
ಸಮಾಜದಲ್ಲಿ ಜಾಗೃತಿ ನಿರ್ಮಾಣ ಮತ್ತು ಸಬಲ ಸಂಘಟನೆಯ ದೃಷ್ಟಿಯಿಂದ ಮಹರ್ಷಿ ವಾಲ್ಮೀಕಿ ಜಾತ್ರೆ ಹಮ್ಮಿಕೊಂಡಿದ್ದು, ನ್ಯಾಯಸಮ್ಮತವಾಗಿ ಸವಲತ್ತುಗಳನ್ನು ಪಡೆಯಲು ಸಂಘಟನಾ ಶಕ್ತಿ ಪ್ರದರ್ಶಿಸಬೇಕಾಗಿದೆ ಎಂದರು.
ಅಂಬೇಡ್ಕರ್ ಅವರು ಹೇಳಿದಂತೆ ಜಾಗೃತಿ ಮತ್ತು ಸಂಘಟನೆ, ಎರಡೂ ಸಮುದಾಯವನ್ನು ಉನ್ನತ ಮಟ್ಟಕ್ಕೇರಿಸುತ್ತದೆ. ನಮ್ಮ ನಾಯಕ‌ ಸಮುದಾಯಕ್ಕೆ ಇತಿಹಾಸವಿದೆ. ಸಮಾವೇಶಗಳ ಮೂಲಕ ಜನಜಾಗೃತಿ ಮಾಡಲಾಗುತ್ತಿದೆ ಎಂದರು.
ನಮ್ಮ ಗುರುಪೀಠ ಮತ್ತು ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳು ಮಾರ್ಗದರ್ಶನ ಮಾಡುತ್ತಿದ್ದಾರೆ. ಈ ಹಿಂದಿನ ಗುರುಗಳಾದ ಶ್ರೀ ಪುಣ್ಯಾನಂದಪುರಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಸ್ಥಾಪಿಸಲಾದ ಈ‌ ಮಠ, ಇಂದು ನಾಡಿನ‌ ಪ್ರಮುಖ‌ ಮಠವಾಗಿ ಬೆಳೆದಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ‌ ಹೇಳಿದರು.
ಗಂಡುಗಲಿ ಕುಮಾರರಾಮ, ಕಂಪಿಲರಾಯ, ಎಚ್ಚಮನಾಯಕ, ಮದಕರಿ ನಾಯಕ, ಹಕ್ಕ – ಬುಕ್ಕ, ವೀರ ಸಿಂಧೂರ ಲಕ್ಷ್ಮಣನಂಥ ಧೀಮಂತರ ಸಮುದಾಯದ ಪ್ರತಿನಿಧಿಗಳಾಗಿರುವ ನಾವು ಸಂಘಟಿತರಾದರೆ ಮಾತ್ರ ನಮ್ಮ ಮುಂದಿನ‌ ಭವಿಷ್ಯ ಉಜ್ವಲವಾಗಲಿದೆ ಎಂದರು.
ಜನಜಾಗೃತಿ ಸಮಾವೇಶದಲ್ಲಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಹಾಜರಿದ್ದರು. ಚಲನಚಿತ್ರ ನಟ ಸುದೀಪ್ ಅವರಿಗೆ ವಾಲ್ಮೀಕಿ ರತ್ನ‌ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಮಹಾಸ್ವಾಮಿಗಳು ಜನಜಾಗೃತಿ ಸಮಾವೇಶದ ಸಾನಿಧ್ಯ ವಹಿಸಿದ್ದರು.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement