ಎಸ್‌ಟಿಗೆ ಸೇರ್ಪಡೆ : ಕುರುಬರ ಹೋರಾಟದ ಹಿಂದೆ ಆರೆಸ್ಸೆಸ್‌ ಇದೆ

ಹುಬ್ಬಳ್ಳಿ: ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡಬೇಕೆಂಬ ಹೋರಾಟದ ಹಿಂದೆ ಆರ್‌ಎಸ್‌ಎಸ್ ಇದೆ ಎಂದು ಪುನರುಚ್ಚರಿಸಿರುವ ವಿಧಾನಸಭೆಯ ಪ್ರತಿಪಕ್ಷದ ಪಕ್ಷದ ನಾಯಕ ಸಿದ್ದರಾಮಯ್ಯ ಸಚಿವ ಈಶ್ವರಪ್ಪ ಅವರನ್ನು ಎತ್ತಿಕಟ್ಟಿ ಮಾಡಿದ ಆರ್‌ಎಸ್‌ಎಸ್ ಪ್ರೇರಿತ ಹೋರಾಟ ಇದಾಗಿದೆ ಎಂದು ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಲಶಾಸ್ತ್ರ ಅಧ್ಯಯನದ ವರದಿ ಇನ್ನೂ ಬಂದಿಲ್ಲ. ಈ ವರದಿ ಬರುವ ಮುನ್ನವೇ ಹೋರಾಟ ಬೇಡ ಎಂಬುದಾಗಿ ಹೇಳಿದ್ದೆ. ಆದರೆ, ಈಗ ಹೋರಾಟ ಮಾಡುತ್ತಿರುವುದರ ಹಿಂದೆ ಆರ್‌ಎಸ್‌ಎಸ್ ಇದೆ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಏನೂ ಕೆಲಸ ಮಾಡಿಲ್ಲ ಎಂಬ ಸಚಿವ ಈಶ್ವರಪ್ಪ ಹೇಳಿಕೆಗೆ ಉತ್ತರ ನೀಡಿದ ಅವರು, ನಾನು ಏನು ಮಾಡಿದ್ದೇನೆ ಎಂಬುದು ರಾಜ್ಯದ ಜನರಿಗೆ ಗೊತ್ತಿದೆ. ಆದ್ದರಿಂದ ಈಶ್ವರಪ್ಪ ಸರ್ಟಿಫಿಕೇಟ್ ನನಗೆ ಬೇಕಾಗಿಲ್ಲ. ಈಶ್ವರಪ್ಪ ಯಾರು? ನಅನ್ಯಕೆ ಅವರಿಗೆ ಲೆಕ್ಕ ಒಪ್ಪಿಸಬೇಕು, ಐ ಡೋಂಟ್ ಕೇರ್ ಈಶ್ವರಪ್ಪ ಎಂದು ಕಿಡಿಕಾರಿದರು.
ರಾಜಕೀಯ ಅಸ್ಥಿತ್ವಕ್ಕಾಗಿ ಹೋರಾಟ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಕುಲಶಾಸ್ತ್ರದ ಅಧ್ಯಯನದ ವರದಿ ಬಂದ ನಂತರ ಕುರುಬರನ್ನು ಎಸ್‌ಟಿಗೆ ಸೇರ್ಪಡೆಮಾಡಬಹುದು. ಆದರೆ,ಎಸ್‌ಟಿಗೆ ಸೇರಿಸಬಾರದು ಎಂದು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಹಿಂದ್ ಸಮಾವೇಶ ಮಾಡುವ ಅಗತ್ಯವಿಲ್ಲ. ಕಾಂಗ್ರೆಸ್ ಹಿಂದುಳಿದ ವರ್ಗಗಳ ಪರವಾಗಿಯೇ ಇದೆ. ನಮಗೆ ಹೋರಾಟದ ಅವಶ್ಯಕತೆ ಇಲ್ಲ ಎಂದರು.
ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಯಿಂದ ಹಿಂದೆ ಸರಿದಿರುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲ. ಹೀಗಾಗಿ ಬಿಜೆಪಿಗೆ ಸಹಾಯ ಮಾಡಲು ಹೊರಟ್ಟಿದ್ದಾರೆ ಎಂದು ಟೀಕಿಸಿದರು.
ಉಪ ಚುನಾವಣೆ ಘೋಷಣೆಯಾದ ಬಳಿಕ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಹೊನ್ನಾವರ : ಯಕ್ಷಗಾನದಲ್ಲಿ ಮಂಥರೆಯಾಗಿ ಮಿಂಚಿದ ನಟಿ ಉಮಾಶ್ರೀ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement