ರೈತ ಹೋರಾಟದಲ್ಲಿ ಭಿನ್ನಾಭಿಪ್ರಾಯ

ಲಖನೌ: ರೈತರ ಆಂದೋಲನವನ್ನು ಇನ್ನಷ್ಟು ತೀವ್ರಗೊಳಿಸುವ ದಿಸೆಯಲ್ಲಿ ರೈತ ಸಂಘಟನೆಗಳ ಮಧ್ಯೆ ಭಿನ್ನಾಭಿಪ್ರಾಯ ಸ್ಫೋಟಗೊಂಡಿದ್ದು, ಭಾರತೀಯ ಕಿಸಾನ್‌ ಯೂನಿಯನ್‌ ರೈಲ್‌ ರೋಕೊ ಕರೆ ನೀಡಿದ್ದರೆ, ಇದಕ್ಕೆ ಸಂಯುಕ್ತ ಕಿಸಾನ್‌ ಮೋರ್ಚಾ ವಿರೋಧ ವ್ಯಕ್ತಪಡಿಸಿದೆ.
ನಾವು ರೈಲು ಅಥವಾ ಬಸ್ಸುಗಳ ಸಂಚಾರ ಸ್ಥಗಿತಗೊಳಿಸಲು ಇಚ್ಛಿಸುವುದಿಲ್ಲ. ಸಾರ್ವಜನಿಕರಿಗೆ ತೊಂದರೆ ನೀಡುವುದು ನಮ್ಮ ಉದ್ದೇಶವಲ್ಲ. ನಮ್ಮದು ಶಾಂತಿಯುತ ಹೋರಾಟ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಮುಖ್ಯಸ್ಥ ನರೇಶ್‌ ಟಿಕಾಯತ್‌ ತಿಳಿಸಿದ್ದಾರೆ. ಗಣರಾಜ್ಯೋತ್ಸವದಂದು ಮೋರ್ಚಾ ಆಯೋಜಿಸಿದ್ದ ಟ್ರಾಕ್ಟರ್ ರ್ಯಾಲಿಯಲ್ಲಿ ನಡೆದ ಹಿಂಸಾಚಾರವನ್ನು ಪ್ರಸ್ತಾಪಿಸಿದ ನರೇಶ್‌, ಹೋರಾಟ ಹಿಂಸಾತ್ಮಕವಾಗಿ ನಡೆದು ಅದರಿಂದ ಜನರಿಗೆ ತೊಂದರೆಯಾದರೆ ಸಾಮಾನ್ಯರ ಜನರ ಸಹಾನುಭೂತಿ ಮತ್ತು ಬೆಂಬಲವನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಎಲ್ಲ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವವರೆಗೂ ಅವರ ಆಂದೋಲನ ಮುಂದುವರಿಯುತ್ತದೆ ಮತ್ತು ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲವನ್ನು (ಎಂಎಸ್ಪಿ) ಖಚಿತಪಡಿಸಿಕೊಳ್ಳಲು ಹೊಸ ಕಾನೂನನ್ನು ರೂಪಿಸಲು ಆಗ್ರಹಿಸಲಾಗುವುದು. ಆಂದೋಲನ ನಡೆಸುತ್ತಿರುವ ರೈತರನ್ನು ಆಂದೋಲನಕಾರಿಗಳೆಂದು ಎಂದು ಕರೆದು ಕೇಂದ್ರ ಸರ್ಕಾರ ಅವಮಾನಿಸಿದೆ. ರೈತರು ತಮ್ಮ ಒತ್ತಡ ತಂತ್ರಗಳಿಗೆ ಬಲಿಯಾಗುವುದಿಲ್ಲ ಎಂಬುದನ್ನು ಸರ್ಕಾರ ನೆನಪಿನಲ್ಲಿಡಬೇಕು. ಅವರು ರೈತರಿಗೆ ಆಜ್ಞೆಗಳನ್ನು ನೀಡಲು ಸಾಧ್ಯವಿಲ್ಲ. ನಾವು ದೇಶಾದ್ಯಂತ ಒಂದಾಗಿದ್ದೇವೆ ಮತ್ತು ನಮ್ಮ ಶಕ್ತಿಯನ್ನು ತೋರಿಸಿದ್ದೇವೆ ಎಂದು ಅವರು ಎಚ್ಚರಿಸಿದರು.
ಮೋರ್ಚಾದೊಳಗೆ ಅಭಿಪ್ರಾಯ ವ್ಯತ್ಯಾಸವು ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಈ ಹಿಂದೆ, ಮೋರ್ಚಾ ನಾಯಕರೊಂದಿಗೆ ಸಮಾಲೋಚಿಸದೆ ಫೆಬ್ರವರಿ 6 ರಂದು ಭಾರತ್ ಬಂದ್‌ಗೆ ಕರೆ ನೀಡಿದ್ದು ನಾಯಕರ ಮಧ್ಯೆ ಭಿನ್ನಾಭಿಪ್ರಾಯ ಮೂಡಲು ಕಾರಣವಾಗಿತ್ತು. ರೈಲ್‌ ರೋಕೊ ನಡೆಸಿಯೇ ತೀರುವುದಾಗಿ ಭಾರತೀಯ ಕಿಸಾನ್‌ ಯೂನಿಯನ್‌ ಈಗಾಗಲೇ ಘೋಷಿಸಿದೆ. ಆಂದೋಲನದಲ್ಲಿ ತಮ್ಮ ಪ್ರಾಬಲ್ಯ ತೋರಿಸುವ ದಿಸೆಯಲ್ಲಿ ಉತ್ತರ ಪ್ರದೇಶ ಹಾಗೂ ಪಂಜಾಬ್‌-ಹರಿಯಾಣ ರೈತ ಮುಖಂಡರ ಮಧ್ಯೆ ಸ್ಪರ್ಧೆ ಏರ್ಪಟ್ಟಿರುವುದೇ ಭಿನ್ನಾಭಿಪ್ರಾಯಕ್ಕೆ ಕಾರಣ ಎಂದು ಅಂದಾಜಿಸಲಾಗಿದೆ.

ಪ್ರಮುಖ ಸುದ್ದಿ :-   ನೂಪುರ್ ಶರ್ಮಾ ಸೇರಿದಂತೆ ಹಲವು ಹಿಂದೂ ನಾಯಕರ ಹತ್ಯೆಗೆ ಸಂಚು: ಮೌಲ್ವಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement