ನವದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ಬೀದಿಗಿಳಿದು ಹೋರಾಟ ಮಾಡಲು ರೈತರು ನಿರ್ಧರಿಸಿದ್ದು ಅದರ ಭಾಗವಾಗಿ ಹಲವೆಡೆ ಮಹಾಪಂಚಾಯತ್ ನಡೆಸಿ, ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಮುಂದಾಗಿದ್ಧಾರೆ.
ನವದೆಹಲಿಯ ಗಡಿಭಾಗದಲ್ಲಿ ನಡೆಸುತ್ತಿರುವ ಹೋರಾಟ ಮೂರು ತಿಂಗಳ ಸಮೀಪಕ್ಕೆ ಬಂದಿದೆ. ಅದರೆ ಮಹಾರಾಷ್ಟ್ರದಲ್ಲಿ ಮಹಾ ಪಂಚಾಯತ್ ನಡೆಸಲು ರೈತರಿಗೆ ಕೊರೊನಾ ಬಿಕ್ಕಟ್ಟು ಎದುರಾಗಿದೆ. ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯವತ್ಮಾಲ್ ಜಿಲ್ಲೆಯಲ್ಲಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರ ರಾಕೇಶ್ ಟಿಕಾಯತ್ ನಡೆಸಬೇಕೆಂದಿದ್ದ ಕಿಸಾನ್ ಮಹಾ ಪಂಚಾಯತ್ ರದ್ದಾಗಿದೆ.
ಮಹಾ ಪಂಚಾಯತ್ಗೆ ಯವತ್ಮಾಲ್ ಜಿಲ್ಲಾಡಳಿತ ಅನುಮತಿ ನೀಡಲು ನಿರಾಕರಿಸಿದೆ. ಜಿಲ್ಲೆಯಲ್ಲಿನ ಕೊರೊನಾ ಪರಿಸ್ಥಿತಿಯಿಂದಾಗಿ ರ್ಯಾಲಿ ನಡೆಸಲು ಅನುಮತಿಗಾಗಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಜಿಲ್ಲಾಡಳಿತ ತಿರಸ್ಕರಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧದ ಪ್ರತಿಭಟನೆಗೆ ರೈತರನ್ನು ಮತ್ತಷ್ಟು ಒಗ್ಗೂಡಿಸಲು ಯವತ್ಮಾಲ್ ಜಿಲ್ಲೆಯ ಆಜಾದ್ ಮೈದಾನದಲ್ಲಿ ಶನಿವಾರ ಕಿಸಾನ್ ಮಹಾ ಪಂಚಾಯತ್ ನಡೆಸುವುದಾಗಿ ಟಿಕಾಯತ್ ತಿಳಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ