ನೋಟಿಸ್‌ಗೆ ಹೆದರುವವ ನಾನಲ್ಲ, ಪಂಚಮಸಾಲಿಗಳಿಗೆ ೨ಎ ತಗೊಂಡೇ ಹೋಗ್ತೀವಿ:ಯತ್ನಾಳ

ಬೆಂಗಳೂರು: ನನಗೆ ನೋಟಿಸ್ ಕೊಡುವುದರಿಂದ ನನ್ನ ಬಾಯಿ ಬಂದ ಮಾಡ್ಲಿಕ್ಕೆ ಆಗುವುದಿಲ್ಲ.
ಅದಕ್ಕೆಲ್ಲ ನಾನು ಹೆದರುವವನೂ ಅಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ೨ಎ ಮೀಸಲಿಗೆ ಒತ್ತಾಯಿಸಿ ಪಂಚಮಸಾಲಿ ಸಮಾಜದ ಬೃಹತ್ ಹಕ್ಕೊತ್ತಾಯದ ಸಮಾವೇಶದಲ್ಲಿ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಸಮಾಜವನ್ನು 3ಬಿಗೆ ಸೇರಿಸಿದ್ದೇ ನಾವು ಎಂದು ಹೇಳ್ತಾರೆ. ಆದರೆ ಎಲ್ಲ ಲಿಂಗಾತತರು 3ಬಿ ಒಳಗೇ ಇದ್ದಾರೆ. ಅದರಲ್ಲೇನು ವಿಶೇಷ ಎಂದು ಪ್ರಶ್ನಿಸಿದರು.
ನನಗೆ ನೋಟಿಸ್ ಕೊಟ್ಟರೆ ನಾನು ಬಾಯಿ ಮುಚ್ಚಿ ಕೂರುವವನಲ್ಲ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಬೇಕೆಂದರೆ 25 ಸಂಸದರನ್ನು ಕರೆದುಕೊಂಡು ದೆಹಲಿಗೆ ಹೋಗಿ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ತಮ್ಮ ಕೈಲಿ ಚಾವಿ ಇಟ್ಕೊಂಡಿದ್ದೀರಿ. ಚಾವಿ ನಿಮ್ಮ ಕೈಯಲ್ಲಿರುವಾಗ ನಾನ್ಯಾಕ್ ದೆಹಲಿಗೆ ಹೋಗಲಿ ಎಂದರು.
ಗೃಹ ಸಚಿವ ಬೊಮ್ಮಾಯಿ ಅವರು ನಮಗೆ ಸಮಾಧಾನ ಮಾಡಲಿಕ್ಕೆ ಬರ್ತಾರೆ. ನಮ್ಮ ಪ್ರಾಣ ಬೇಕಾದರೆ ಕೊಡುತ್ತೇವೆ ಎಂದು ಹೇಳುತ್ತಾರೆ. ನಮಗೆ ನಿಮ್ಮ ಪ್ರಾಣ ನಮಗೆ ಬೇಡ, 2ಎ ಮೀಸಲಾಗಿ ಕೊಡಿ ಎಂದು ನಾವು ಕೇಳುತ್ತಿದ್ದೇವೆ. ಅದನ್ನು ಕೊಡಿ ಸಾಕು. ಬೇರೆಯವರ ತರ ನನಗೆ ಭರವಸೆ ಕೊಡುವುದು ಬೇಡ. ಶಿಗ್ಗಾವಿ ಕ್ಷೇತ್ರದಲ್ಲಿ 50 ಸಾವಿರ ಪಂಚಮಸಾಲಿ ಮತದಾರರು ಇದ್ದಾರೆ. ನಾವು ಇವರನ್ನು ಕೇಳಿ ಕೇಳಿ ಸಾಕಾಗಿದೆ. ಈ ಬಾರಿ ನಾವು ಮನವಿ ಕೊಡೋದಿಲ್ಲ. ನಾವೇನಿದ್ದರೂ ಮೀಸಲಾತಿ ತೆಗೆದುಕೊಂಡೇ ವಾಪಸ್‌ ಹೋಗ್ತೇವೆ ಎಂದು ಹೇಳಿದರು.
ಪಂಚಮಸಾಲಿ ಸಮುದಾಯ ಇವರ ಮಕ್ಕಳು, ಮೊಮ್ಮಕ್ಕಳನ್ನು ಸಾಕಲಿಕ್ಕಲ್ಲ ಇರುವುದು. ನಮ್ಮ ಮಕ್ಕಳು, ಮೊಮ್ಮಕ್ಕಳನ್ನು ನಾವೂ ಸಲಹ ಬೇಕು.. ಸ್ವಾಮಿಗಳು ೭೦೮ ಕಿಮೀ ಪಾದಯಾತ್ರೆ ಮಾಡಿದ್ದಾರೆ. ವೀರಶೈವ ಸಮುದಾಯದ ಎಲ್ಲಾ ಮಠಾಧೀಶರು ನಮಗೆ ಬೆಂಬಲ ನೀಡಿದ್ದಾರೆ. 2ಎ ಮೀಸಲಾತಿಗಾಗಿ ನಮ್ಮ ಮನವಿಯನ್ನು ಹಿಂದುಳಿದ ವರ್ಗದ ಆಯೋಗಕ್ಕೆ ಕಳುಹಿಸಿಕೊಡುವ ಅಗತ್ಯವಿಲ್ಲ.ಸರ್ಕಾರವೇ ಈ ಬಗ್ಗೆ ಮನಸ್ಸು ಮಾಡಿ ನಿರ್ಧಾರ ಮಾಡಬೇಕು. ಅಲ್ಲಿಯ ವರೆಗೆ ನಾವು ಹೋರಾಟ ಕೈಬಿಡುವುದಿಲ್ಲ. ಇಲ್ಲಿಂದ ವಿಧಾನಸೌಧದ ಬಳಿ ತೆರಳಿ ಧರಣಿ ಸತ್ಯಾಗ್ರಹ ಆರಂಭಿಸುತ್ತೇವೆ ಎಂದು ಯತ್ನಾಳ ಗುಡುಗಿದರು.

ಪ್ರಮುಖ ಸುದ್ದಿ :-   ವೀಡಿಯೋ..| ಎರಡೂ ಕೈತೋಳುಗಳಿಲ್ಲದೆ ಡ್ರೈವಿಂಗ್‌ ಲೈಸೆನ್ಸ್‌ ಪಡೆದ ಏಷ್ಯಾದ ಮೊದಲ ಮಹಿಳೆ ಇವರು : ಕೇರಳದ ಯುವತಿಯ ಕಾರ್‌ ಚಾಲನೆಗೆ ಬೆರಗಾಗ್ತೀರಾ..!

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement