ಬಸವಕಲ್ಯಾಣ ಉಪಚುನಾವಣೆ ಗೆಲ್ಲಲು ಬಿಜೆಪಿ ರಣತಂತ್ರ

ಬೆಂಗಳೂರು: ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿಯವರಾದ ಲಕ್ಷ್ಮಣ ಸವದಿ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಬಿಜೆಪಿ ಟಿಕೇಟ್‌ ಆಕಾಂಕ್ಷಿಗಳ ಹಾಗೂ ಮುಖಂಡರ ಸಭೆ ನಡೆಯಿತು.
ಈ ಸಭೆಯಲ್ಲಿ ಸಚಿವರಾದ ಪ್ರಭು ಚೌವ್ಹಾಣ, ವಿ. ಸೋಮಣ್ಣ, ಬೀದರ್ ಕ್ಷೇತ್ರದ ಸಂಸದ ಭಗವಂತ ಖೂಬಾ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಮಾಲೀಕಯ್ಯ ಗುತ್ತೇದಾರ್, ಶಾಸಕರಾದ ರಾಜಕುಮಾರ್ ಪಾಟೀಲ್ ತೇಲ್ಕೂರ್, ವಿಭಾಗ ಸಹ ಪ್ರಭಾರಿಗಳಾದ ಈಶ್ವರ್ ಸಿಂಗ್ ಠಾಕೂರ್, ಮಾಜಿ ಶಾಸಕರಾದ ಅಮರನಾಥ್ ಪಾಟೀಲ್, ಬಿಜೆಪಿಯ ಬೀದರ್ ಜಿಲ್ಯಾಧ್ಯಕ್ಷರಾದ ಶಿವಾನಂದ ಮಂಟಾಲ್ಕರ್ ಹಾಗೂ ಜಿಲ್ಲೆಯ ಇತರ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.
ಬಿಜೆಪಿಯ ಟಿಕೆಟ್ ಬಯಸಿದ 18ಕ್ಕೂ ಹೆಚ್ಚಿನ ಆಕಾಂಕ್ಷಿಗಳು ಈ ಸಭೆಯಲ್ಲಿ ಭಾಗವಹಿಸಿ ಚುನಾವಣಾ ಉಸ್ತುವಾರಿಗಳೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಉಪ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಕುರಿತು ರಣತಂತ್ರವನ್ನು ಈ ಸಭೆಯಲ್ಲಿ ರೂಪಿಸಲಾಯಿತು.
ಈ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಹಲವಾರು ಮುಖಂಡರು ಅಪೇಕ್ಷೆ ಪಟ್ಟು ಬಿಜೆಪಿಯ ಟಿಕೆಟ್‍ಗೆ ಮನವಿ ಮಾಡಿಕೊಂಡಿರುವುದು ಸಹಜ. ಆದರೆ ಈ ಎಲ್ಲಾ ಆಕಾಂಕ್ಷಿಗಳ ವಿವರಗಳನ್ನು ಪಕ್ಷದ ವರಿಷ್ಠರಿಗೆ ಕಳುಹಿಸಲಾಗುವುದು ಮತ್ತು ಅಂತಿಮ ತೀರ್ಮಾನವನ್ನು ಪಕ್ಷದ ವರಿಷ್ಠರೇ ಕೈಗೊಳ್ಳುತ್ತಾರೆ. ಅವರು ಯಾವುದೇ ತೀರ್ಮಾನ ಕೈಗೊಂಡರೂ ಸಹ ಎಲ್ಲರೂ ಸಹಮತದಿಂದ ಮತ್ತು ಒಗ್ಗಟ್ಟಿನಿಂದ ವರಿಷ್ಠರು ಸೂಚಿಸುವ ಅಭ್ಯರ್ಥಿಯ ಗೆಲುವಿಗೆ ಸಮರೋಪಾದಿಯಲ್ಲಿ ಶ್ರಮಿಸುವುದು ಅಗತ್ಯ ಎಂದು ಲಕ್ಷ್ಮಣ ಸವದಿ ತಿಳಿಸಿದರು.
ಈ ಚುನಾವಣೆಯಲ್ಲಿ ಮತದಾರರ ಮನ ಮತ್ತು ಮನೆಯನ್ನು ತಲುಪುವಲ್ಲಿ ಬಿಜೆಪಿ ಕಾರ್ಯಕರ್ತರು ಮುಂದಿರಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಾಧನೆಗಳನ್ನು ಸ್ಥಳೀಯರಿಗೆ ಮನದಟ್ಟು ಮಾಡಿಕೊಡಬೇಕು ಎಂದು ಅವರು ಕೋರಿದರು.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement