ಸಮುದಾಯ ಭವನಗಳು ಹೊಸ ಚಿಂತನೆಯ ಕಮ್ಮಟಗಳಾಗಲಿ: ಶ್ರೀರಾಮುಲು

ಹುಬ್ಬಳ್ಳಿ: ಇಲಾಖೆಯಿಂದ ನಿರ್ಮಿಸಿರುವ ಸಮುದಾಯ ಭವನಗಳಲ್ಲಿ ಮದುವೆ ಮತ್ತಿತರ ಕಾರ್ಯಕ್ರಮಗಳ ಜೊತೆಗೆ ಸಮಾಜದ ಬಗೆಗಿನ ಚಿಂತನೆಗಳು ಹಾಗೂ ಗೋಷ್ಠಿಗಳು ನಡೆಯಬೇಕು‌. ಸಮುದಾಯ ಭವನಗಳು ಹೊಸ ಚಿಂತನೆಯ ಕಮ್ಮಟಗಳಾಗಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ ಶ್ರೀರಾಮುಲು ಹೇಳಿದರು.
ಹುಬ್ಬಳ್ಳಿಯ‌ ಈಶ್ವರ ಹಾಗೂ ಸಂಗೊಳ್ಳಿ ರಾಯಣ್ಣ ನಗರದಲ್ಲಿ ಸಮಾಜ ಕಲ್ಯಾಣ ಇಲಾಖೆ ಮೂರು ಕೋಟಿ ಹಾಗೂ ಮಹಾನಗರ ಪಾಲಿಕೆ 50 ಲಕ್ಷ ರೂ.ಗಳ ಅನುದಾನದಲ್ಲಿ ನಿರ್ಮಿಸಲಾಗಿರುವ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಭವನ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಬೀದರ್ ನಿಂದ ಚಾಮರಾಜನಗರ ಜಿಲ್ಲೆಯ ವರೆಗೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪರಿವರ್ತನೆ ತರಲಾಗಿದೆ. ಇಲಾಖೆ ವಸತಿ ಶಾಲೆಯಲ್ಲಿ 1.68 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ಬಾರಿಯ ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ‌ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮುಖಂಡರು ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಜನಸಂಖ್ಯೆ ಆಧರಿಸಿ ಮೀಸಲಾತಿ ನೀಡಬೇಕಾಗಿದೆ. ಪರಿಶಿಷ್ಟ ಜಾತಿ ಮೀಸಲಾತಿ ಪ್ರಮಾಣವನ್ನು ಶೇ.15 ರಿಂದ ಶೇ. 17ಕ್ಕೆ ಏರಿಸಬೇಕಾಗಿದೆ. ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣ ಶೇ.3 ರಿಂದ ಶೇ 7.5 ರಷ್ಟು ಆಗಬೇಕಾಗಿದೆ. ನಾಯ್ಯಮೂರ್ತಿ ನಾಗಮೋಹನ್ ದಾಸ್ ವರದಿ ಜಾರಿಯಲ್ಲಿ ವಿಳಂಬವಾಗಿದೆ. ರಾಜ್ಯದಲ್ಲಿ ಕುರುಬರು ಎಸ್.ಟಿಗೆ ಸೇರಲು, ಪಂಚಮಸಾಲಿಗಳು 2ಎ ಸೇರಲು ಹಾಗೂ ಒಕ್ಕಲಿಗರು ಕೇಂದ್ರ ಓಬಿಸಿ ಪಟ್ಟಿಗೆ ಸೇರಲು ಹೋರಾಟ ನಡುಸುತ್ತಿದ್ದಾರೆ ಎಂದರು.
ನೂತನ ಅಂಬೇಡ್ಕರ್ ಭವನದ ಸುತ್ತ ಕಾಂಪೌಂಡ್ ನಿರ್ಮಾಣ ಹಾಗೂ ಪೇವರ್ಸ್ ಅಳವಡಿಸಲು 2.50 ಕೋಟಿ ಅನುದಾನ ಕೇಳಲಾಗಿದೆ. ಈ ಕುರಿತು ಸಭಾಪತಿಗಳಾದ ಬಸವರಾಜ ಹೊರಟ್ಟಿ ಹಾಗೂ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಬೆಂಗಳೂರಿಗೆ ತೆರಳಿದ ತಕ್ಷಣ ಸಚಿವಾಲಯದಲ್ಲಿರುವ ಫೈಲ್ ಅನ್ನು ಹುಡುಕಿಸಿ ಅನುದಾನ ಮಂಜೂರು ಮಾಡುವುದಾಗಿ ಅವರು ಆಶ್ವಾಸನೆ ನೀಡಿದರು.
ಅಂತರ್ಜಾತಿ ವಿವಾಹ ಹಾಗೂ ದೇವದಾಸಿ ಮಕ್ಕಳ ಮದುವೆ ಪ್ರೋತ್ಸಾಹ ಧನ ಯೋಜನೆಯಡಿ ಮದುವೆಯಾದ ಜೋಡಿಗಳಿಗೆ ಹಾಗೂ ವಿದ್ಯಾರ್ಥಿನಿಗೆ ಪ್ರೋತ್ಸಾಹ ಧನದ ಚಕ್ ವಿತರಣೆ ಮಾಡಲಾಯಿತು.
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಕೊರವಿ‌, ಮಲ್ಲಿಕಾರ್ಜುನ ಗುಡೂರ , ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್.ಆರ್.ಪುರುಷೋತಮ್‌ ಮೊದಲಾದವರಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement