ಇದು ನೂರಕ್ಕೆ ನೂರು ನಕಲಿ ಸಿಡಿ, ಯುವತಿಗೆ ೫ ಕೋಟಿ, ವಿದೇಶದಲ್ಲಿ ಎರಡು ಫ್ಲ್ಯಾಟ್ ‌ಆಮಿಷ: ರಮೇಶ ಜಾರಕಿಹೊಳಿ

ಚಿತ್ರ ಕೃಪೆ-ಇಂಡಿಯಾ ಟುಡೆ

ಬೆಂಗಳೂರು: ಇದು ನೂರಕ್ಕೆ ನೂರರಷ್ಟು ನಕಲಿ ಸಿಡಿ. ಸಿಡಿ ವಿದ್ಯಮಾನದಲ್ಲಿ ನಾನು ನಿರಪರಾಧಿ, ನಾನು ಯಾವುದೇ ತಪ್ಪು ಮಾಡಿಲ್ಲ. ಇದು ನನ್ನ ತೇಜೋವಧೆ ಮಾಡಲು ರೂಪಿಸಿದ ಷಡ್ಯಂತ್ರ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿದ್ದಾರೆ.
ಮಂಗಳವಾರ (ಮಾ.೯) ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತನಾಡುತ್ತ ಕೆಲಕಾಲ ತೀವ್ರವಾಗಿ ಗದ್ಗದಿತರಾದರು.
ರಮೇಶ್ ಜಾರಕಿಹೊಳಿಯವರು ಯುವತಿಗೆ ಕೆಲಸದ ಆಮಿಷವೊಡ್ಡಿ ಲೈಂಗಿಕವಾಗಿ ಬಳಸಿಕೊಂಡ ಆರೋಪ ಮಾಡಿದ್ದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸಿಡಿ ಜೊತೆ ಬೆಂಗಳೂರಿನ ಕಬ್ಬನ್‌ ಪಾರ್ಕ್‌ ಪೊಲೀಸರಿಗೆ ದೂರು ನೀಡಿದ್ದರು. ಆದರೆ ದಿಢೀರ್‌ ಬೆಳವಣಿಗೆಯಲ್ಲಿ ದೂರು ವಾಪಸ್‌ ಪಡೆದಿದ್ದರು.
ಇದರ ಬೆನ್ನಲ್ಲೇ ಸೋಮವಾರ ಬಾಲಚಂದ್ರ ಜಾರಕಿಹೊಳಿ ಪತ್ರಿಕಾಗೋಷ್ಠಿ ಕರೆದಿದ್ದರು ಹಾಗೂ ಮಾಧ್ಯಮದವರ ಮುಂದೆ ಬರಲು ಸಹೋದರ ರಮೇಶ ಜಾರಕಿಹೊಳಿಗೆ ಸಲಹೆ ನೀಡಿದ್ದರು.
ಇದರ ಬೆನ್ನಲ್ಲೇ ಮಂಗಳವಾರ ಸುದ್ದಿಗೋಷ್ಠಿ ನಡೆಸಿರುವ ರಮೇಶ್ ಜಾರಕಿಹೊಳಿ, ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆದಿದೆ. ದಯವಿಟ್ಟು ನನಗೆ ಬೆಂಬಲ ನೀಡಿ ಎಂದು ಮನವಿ ಮಾಡಿದ್ದಾರೆ.
ನನ್ನ ವಿರುದ್ಧ ಷಡ್ಯಂತ್ರ ರೂಪಿಸಲು ಸಿಡಿಗೆ 20 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಯಶವಂತಪುರ ಮತ್ತು ಹುಳಿಮಾವು ಎರಡು ಕಡೆ ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
‘ಯುವತಿಗೆ ಕೊಟ್ಟಿದ್ದು ಕೇವಲ ೫೦ ಲಕ್ಷ ರೂ.ಗಳಲ್ಲ. ಯುವತಿಗೆ ಇದಕ್ಕಾಗಿ ೫ ಕೋಟಿ ರೂ.ಗಳನ್ನು ನೀಡಿದ್ದಾರೆ. ಅಲ್ಲದೆ ವಿದೇಶದಲ್ಲಿ ಎರಡು ಫ್ಲ್ಯಾಟ್‌ ಕೊಡಿಸಿರುವ ಮಾಹಿತಿ ಇದೆ ಎಂದು ಅವರು ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ಸಿಡಿ ಹಿಂದಿರುವ ಷಡ್ಯಂತ್ರದ ಬಗ್ಗೆ ವಿವರಿಸಿದರು.
ಓರಾಯ್ನ್‌ ಮಾಲ್‌ನ 4 ಮತ್ತು ೫ನೇ ಮಹಡಿಯ ಫ್ಲ್ಯಾಟ್‌ನಲ್ಲಿ ಷಡ್ಯಂತ್ರ ನಡೆದಿದೆ. ರಾಜಕೀಯ ಏಳಿಗೆ ಸಹಿಸದ ಕೆಲವರು ಈ ಸಂಚು ರೂಪಿಸದ್ದಾರೆ. ಯಾರೆಲ್ಲ ನನ್ನ ವಿರುದ್ಧದ ಈ ಷಡ್ಯಂತ್ರದಲ್ಲಿ ಭಾಗಿಯಾಗಿದ್ದಾರೋ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಆಕ್ರೋಶದಿಂದ ಹೇಳಿದರು.
ಮತ್ತೆ ಸಚಿವನಾಗುವ ಬಗ್ಗೆ ನನಗೆ ಆಕಾಂಕ್ಷೆ ಹಾಗೂ ನಿರೀಕ್ಷೆ ಇಲ್ಲ. ಅದು ನನ್ನ ಕುಟುಂಬ ನನ್ನ ಬಳಿ ಇದ್ದರೆ ಸಾಕು, ಪಕ್ಷಕ್ಕೆ ಮುಜುಗರ ಆಗಬಾರದೆಂದು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಕೆಲವು ರಾಜಕೀಯ ನಾಯಕರ ಮೇಲೆ ರಮೇಶ್ ಜಾರಕಿಹೊಳಿ ಅನುಮಾನ ವ್ಯಕ್ತಪಡಿಸಿದ್ದಾರೆ. ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದಾಗ ನನಗೆ ನೀರಾವರಿ ಖಾತೆಯನ್ನು 3 ತಿಂಗಳು ನಿರ್ವಹಿಸಲು ಸಾಧ್ಯವಿಲ್ಲ ಎಂದು ಮಹಾನ್‌ ನಾಯಕರೊಬ್ಬರು ಚಾಲೆಂಜ್ ಮಾಡಿದ್ದರು. ಆ ಮಹಾನ್‌ ನಾಯಕನೇ ನನ್ನ ವಿರುದ್ಧ ಷಡ್ಯಂತ್ರ ನಡೆಸಿರುವ ಸಾಧ್ಯತೆ ಇದೆ ಎಂದು ನಮಗೆ ಅನುಮಾನವಿದೆ. ಆದರೆ,ಸದ್ಯಕ್ಕೆ ಆತನ ಹೆಸರು ಹೇಳಲು ಬಯಸುವುದಿಲ್ಲ ಎಂದೂ ಹೇಳಿದ್ದಾರೆ.
ಈ ಷಡ್ಯಂತ್ರದ ಬಗ್ಗೆ ನಾಲ್ಕು ತಿಂಗಳ ಮೊದಲೇ ಸಿಡಿ ತಿಳಿದಿತ್ತು. ಆದರೆ ಸಹೋದರ ಬಾಲಚಂದ್ರ ಜಾರಕಿಹೊಳಿ ಈ ಬಗ್ಗೆ ಕೇಳಿದಾಗ ನನಗೆ ಗೊತ್ತಿಲ್ಲ ಎಂದು ಹೇಳಿದ್ದೆ. ಸಿಡಿ ಬಿಡುಗಡೆಗೂ 26 ತಾಸು ಮೊದಲು ನನಗೆ ಪಕ್ಷದ ಹೈಕಮಾಂಡ್‌ನಿಂದ ಈ ಬಗ್ಗೆ ನನಗೆ ಮಾಹಿತಿ ಬಂದಿತ್ತು. ನಾನು ಯಾವುದೇ ತಪ್ಪು ಮಾಡಿಲ್ಲವಾದ್ದರಿಂದ ನಾನು ಹೆದರಲಿಲ್ಲ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈ ವಿದ್ಯಮಾನದ ನಂತರ ನನಗೆ ಧೈರ್ಯ ತುಂಬಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದ ಅವರು ಯಾವುದೇ ಕಾರಣಕ್ಕೂ ಈ ಷಡ್ಯಂತ್ರದಲ್ಲಿ ಭಾಗಿಯಾದವರನ್ನು ಜೈಲಿಗೆ ಕಳುಹಿಸದೆ ಬಿಡುವುದಿಲ್ಲ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಅಥಣಿ | ಶಾಲೆಯಲ್ಲಿ ಆಟವಾಡುವಾಗಲೇ ಹೃದಯಾಘಾತ ; ವಿದ್ಯಾರ್ಥಿನಿ ಸಾವು

4.5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement