ಡೆಹರಾಡೂನ್: ಉತ್ತರಾಖಂಡದ ಬಿಜೆಪಿ ಸರ್ಕಾರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿನ ಉಲ್ಬಣಿಸಿದ್ದು, ವಿಧಾನಸಭೆ ಚುನಾವಣೆಗೆ ವರ್ಷವಷ್ಟೇ ಬಾಕಿ ಉಳಿದಿರುವಾಗ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮಂಗಳವಾರ ಸಂಜೆ ರಾಜೀನಾಮೆ ಸಲ್ಲಿಸಿದ್ದಾರೆ.
ಹೈಕಮಾಂಡ್ ಸೂಚನೆ ಮೇರೆಗೆ ಅವರು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಮಂಗಳವಾರ ಸಂಜೆ ರಾಜಭವನದಲ್ಲಿ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ತ್ರಿವೇಂದ್ರ ಸಿಂಗ್ ರಾವತ್ ಕಾರ್ಯಶೈಲಿ ಬಗ್ಗೆ ಅಏಕ ಸಚಿವರು ಮತ್ತು ಶಾಸಕರು ಅಸಮಾದಾನ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ್ದ ಅವರು ಬಿಜೆಪಿ ಹೈ ಕಮಾಂಡ್ನೊಂದಿಗೆ ಈ ಕುರಿತು ಚರ್ಚಿಸಿದ್ದರು. ಸೋಮವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಭೇಟಿ ಬಳಿಕ ರಾವತ್ ರಾಜೀನಾಮೆಯ ನೀಡುವ ಬಗ್ಗೆ ಮಾತುಗಳು ಕೇಳಿಬಂದಿದ್ದವು. ದೆಹಲಿಯಿಂದ ಬಂದ ಅವರು ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.
ಅನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತ್ರಿವೇಂದ್ರ ಸಿಂಗ್ ರಾವತ್, ಉತ್ತರಾಖಂಡದ ‘ದೇವ ಭೂಮಿ’ಯ ಸೇವೆ ಮಾಡಲು ಬಿಜೆಪಿ ಅವಕಾಶ ನೀಡಿದ್ದಕ್ಕೆ ಧನ್ಯವಅದ ಸಲ್ಲಿಸಿದರು. ಪಕ್ಷವು ನನ್ನನ್ನು ಇಷ್ಟು ದೊಡ್ಡ ಜವಾಬ್ದಾರಿಯಿಂದ ಗೌರವಿಸುತ್ತದೆ ಎಂಬುದನ್ನು ನಾನು ಊಹಿಸಿರಲಿಲ್ಲ ಎಂದರು.
ಪಕ್ಷದ ಆಂತರಿಕ ಚರ್ಚೆಯಲ್ಲಿ ಬೇರೆಯವರಿಗೆ ಈಗ ರಾಜ್ಯದ ಜವಾಬ್ದಾರಿ ನೀಡಬೇಕು ಎಂಬ ಏಕಾಭಿಪ್ರಾಯ ಮೂಡಿದ್ದರಿಂದ ನಾನು ರಾಜೀನಾಮೆ ನೀಡಿದ್ದೇನೆ ಎಂದರು. ಮುಖ್ಯಮಂತ್ರಿ ಆಯ್ಕೆಗೆ ಆಯ್ಕೆ ಬಿಜೆಪಿ ಶಾಸಕರು ಮಾ.೧೦ರಂದು ಬೆಳಿಗ್ಗೆ ೧೦ಕ್ಕೆ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಭೆ ಸೇರಲಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ