ಗಣಿಗಾರಿಕೆ ಲೈಸೆನ್ಸ್ ನೀಡಲು ಆನ್‍ಲೈನ್-ಆಫ್‍ಲೈನ್‌ ವ್ಯವಸ್ಥೆ ಜಾರಿ:ನಿರಾಣಿ

ಧಾರವಾಡ: ಗಣಿಗಾರಿಕೆ ನಡೆಸುವ ಉದ್ಯಮಿಗಳಿಗೆ ಶೀಘ್ರದಲ್ಲಿ ಲೈಸೆನ್ಸ್(ಪರಾವನಗಿ) ನೀಡಲು ಅನುಕೂಲವಾಗುವಂತೆ ಆನ್‍ಲೈನ್ ಮತ್ತು ಆಫ್‍ಲೈನ್ ವ್ಯವಸ್ಥೆ ಜಾರಿ ಮಾಡಲಾಗುವುದು ಎಂದು ಗಣಿ ಮತ್ತು  ಭೂ ವಿಜ್ಞಾನ ಸಚಿವ  ಮುರುಗೇಶ್ ನಿರಾಣಿ ಶುಕ್ರವಾರ ಪ್ರಕಟಿಸಿದ್ದಾರೆ.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಜೊತೆ  ಪ್ರಗತಿ ಪರಿಶೀಲನಾ ಸಭೆ  ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಫ್‍ಲೈನ್, ಆನ್‍ಲೈನ್ ಜಾರಿ ಮಾಡಿದರೆ 30 ದಿನದಲ್ಲಿ ಗಣಿಗಾರಿಕೆ ಲೈಸೆನ್ಸ್ ಪಡೆಯಬಹುದು ಎಂದು ತಿಳಿಸಿದರು.
ಇನ್ನು 30 ದಿನದೊಳಗೆ  ಈ ಎರಡೂ ವ್ಯವಸ್ಥೆಯನ್ನು ಇಲಾಖೆ ಜಾರಿಗೆ ತರಲಿದೆ. ಈಗಾಗಲೇ ಕರಡು ನೀತಿ ಸಿದ್ಧವಾಗಿದ್ದು, ಗಣಿಗಾರಿಕೆ ಅನುಮತಿ ಪಡೆಯುವವರಿಗೆ  ತೊಂದರೆಯಾಗದಂತೆ ಸರಳೀಕರಣ ಮಾಡುವುದು ಇದರ ಉದ್ದೇಶ ಎಂದರು.
ಅದಿರನ್ನು ಹೊರಗಿನಿಂದ ಆಮದು ಮಾಡಿಕೊಳ್ಳುವುದಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು  ಬಳಸಿಕೊಂಡು ಇಲ್ಲಿನ ಅದಿರನ್ನು ಬಳಕೆ ಮಾಡಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಜಿಂದಾಲ್, ಬಲ್ಡೋಟಾ, ಕಿರ್ಲೋಸ್ಕರ್ ಸೇರಿದಂತೆ ದೊಡ್ಡ ದೊಡ್ಡ ಕಂಪನಿಗಳ ಜೊತೆ ಸಭೆ ನಡೆಸಲಾಗಿದೆ. ಹೊರಗಡೆಯಿಂದ ಅದಿರು ಆಮದು ಮಾಡಿಕೊಂಡರೆ  ಉಂಟಾಗಬಹುದಾದ ಆರ್ಥಿಕ ಹೊರೆ ತಗ್ಗಿಸಬಹುದಾಗಿದೆ.
ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಚರ್ಚೆ ನಡೆಸಲಾಗಿದೆ. ಅವರು ಕೂಡ ಸ್ಥಳೀಯ ಸಂಪನ್ಮೂಲವನ್ನು ಬಳಸಿಕೊಳ್ಳಲು ಸೂಚನೆ ಕೊಟ್ಟಿದ್ದಾರೆ. ಸದ್ಯದಲ್ಲೇ ಈ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಿವಮೊಗ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ನಡೆದ  ಘಟನೆ ನಂತರ ಹೊಸ ನಿಯಮ ತಂದಿದ್ದು, ಅನುಮತಿ ಪಡೆದವರು ಮಾತ್ರ ಸ್ಫೋಟಕ ವಸ್ತುಗಳನ್ನು ಬಳಸಬೇಕು.  ಯಾರಾದರೂ ಕಾನೂನುಬಾಹಿರವಾಗಿ ಸ್ಪೋಟಕಗಳನ್ನು ಇಟ್ಟುಕೊಂಡಿದ್ದರೆ ಕೂಡಲೇ ಹಿಂತಿರುಗಿಸಬೇಕೆಂದು ಅವರು ಮನವಿ ಮಾಡಿದರು.
ರಾಜ್ಯದಲ್ಲಿ ಹೊಸದಾಗಿ ಸ್ಕೂಲ್ ಆಫ್ ಮೈನಿಂಗ್ ತೆರೆಯುವ ಉದ್ದೇಶವಿದೆ.ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಆರಂಭಿಸಲಾಗುವುದು. ಹೀಗಾಗಿ ಅಧಿಕಾರಿಗಳಿಗೆ ತರಬೇತಿ ಹಮ್ಮಿಕೊಳ್ಳಲಾಗುವುದು. ಗಣಿಗಾರಿಕೆ  ನಡೆಸುವವರಿಗೂ ಇಲಾಖೆ ವತಿಯಿಂದ ತರಬೇತಿ ನೀಡಲಾಗುವುದು ಎಂದರು.
ಬಳ್ಳಾರಿ, ತುಮಕೂರು ಹಾಗೂ ಚಿತ್ರದುರ್ಗದಲ್ಲಿ 12 ಸಾವಿರ ಕೋಟಿ ಹಣವನ್ನು ರಾಜಸ್ವ ಧನದ ಮೂಲಕ ಸಂಗ್ರಹಿಸಲಾಗಿದೆ. ಇದರ ಬಡ್ಡಿ ಸೇರಿಸಿ ಒಟ್ಟು 18 ಸಾವಿರ ಕೋಟಿಯಾಗಿದೆ. ಇದು ಮೂರು ತಿಂಗಳ ಒಳಗೆ  ನಮ್ಮ ಕೈ ಸೇರಿದರೆ  ಅಭಿವೃದ್ಧಿ ಕಾರ್ಯಗಳಿಗೆ ಕ್ರಿಯಾ ಯೋಜನೆ ರೂಪಿಸಲಿದ್ದೇವೆ ಎಂದರು.

ಪ್ರಮುಖ ಸುದ್ದಿ :-   ಮಂಗಳೂರಲ್ಲಿ ಅಭೂತಪೂರ್ವ ರೋಡ್ ಶೋ : ಕರಾವಳಿ ಜನರ ಬಗ್ಗೆ ಪ್ರಧಾನಿ ಮೋದಿ ಟ್ವೀಟ್‌

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement