ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪರ ಪ್ರಚಾರ ಮಾಡಬೇಡಿ ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಹಾಗೂ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರಿಗೆ ಕಾಂಗ್ರೆಸ್ ರಾಜ್ಯಸಭಾ ಸಂಸದ ಪ್ರದೀಪ್ ಭಟ್ಟಾಚಾರ್ಯ ಉಭಯ ಮುಖಂಡರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಸ್ಟಾರ್ ಪ್ರಚಾರಕರಿಬ್ಬರೂ ಟಿಎಂಸಿ ಪರ ಪ್ರಚಾರ ಮಾಡಿದರೆ ರಾಜ್ಯದ ಮತದಾರರು ಗೊಂದಲಕ್ಕೀಡಾಗುವರು. ಆದ್ದರಿಂದ ತೃಣಮೂಲ ಕಾಂಗ್ರೆಸ್ ಪರ ಪ್ರಚಾರ ಮಾಡದಂತೆ ಪತ್ರ ಬರೆದು ವಿನಂತಿಸಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ನ ಮಿತ್ರ ಪಕ್ಷಗಳ ಮುಖಂಡರು ಕಾಂಗ್ರೆಸ್ ಬೆಂಬಲಿಸದೇ ಮಮತಾ ಬ್ಯಾನರ್ಜಿ ಪಕ್ಷದ ಪರ ಪ್ರಚಾರ ನಡೆಸಲು ಮುಂದಾಗಿದ್ದಾರೆ.
ಆರ್ಜೆಡಿ ಈಗಾಗಲೇ ಟಿಎಂಸಿಯನ್ನು ಬೆಂಬಲಿಸುವುದಾಗಿ ಘೋಷಿಸಿದೆ. ಪಕ್ಷದ ಮುಖಂಡ ತೇಜಸ್ವಿ ಯಾದವ್, ಇದು ಮೌಲ್ಯಗಳ ಹೋರಾಟ. ಮಮತಾ ಅವರನ್ನು ಬೆಂಬಲಿಸಬೇಕೆಂಬುದು ಲಾಲು ಪ್ರಸಾದ ಯಾದವ ಅವರ ಅಭಿಲಾಷೆಯಾಗಿರುವುದರಿಂದ ನಾವು ಮಮತಾರನ್ನು ಬೆಂಬಲಿಸಲು ನಿರ್ಧರಿಸಿದ್ದೇವೆ. ಕೋಮುವಾದಿ ಶಕ್ತಿಗಳು ನಮ್ಮ ರಾಷ್ಟ್ರವನ್ನು ವಿಭಜಿಸುವುದನ್ನು ತಡೆಯುವ ದೊಡ್ಡ ಹೋರಾಟ ಇದಾಗಿದೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡದ ಸಾಕಷ್ಟು ಹಿಂದಿ ಮಾತನಾಡುವ ಜನರಿದ್ದಾರೆ. ಮಮತಾ ದೀದಿ ಅವರ ಗೆಲುವನ್ನು ಖಚಿತಪಡಿಸಿಕೊಳ್ಳಲು ನಮ್ಮೆಲ್ಲರ ಶಕ್ತಿಯನ್ನು ಬೆಂಬಲಿಸುವಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಮಾರ್ಚ್ 27 ರಿಂದ 20 ಏಪ್ರಿಲ್ 2021 ರವರೆಗೆ 8 ಹಂತಗಳಲ್ಲಿ ನಡೆಯಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ