ಮುಂಬೈ: ದೇಶದ ಅಗ್ರಮಾನ್ಯ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಮನೆಯ ಬಳಿ ಸ್ಫೋಟಕಗಳಿಂದ ತುಂಬಿದ ವಾಹನ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಸಚಿನ್ ವಾಝೆ ಅವರ ಎನ್ಐಎ ಕಸ್ಟಡಿಯನ್ನು ವಿಶೇಷ ನ್ಯಾಯಾಲಯವು ಏಪ್ರಿಲ್ 3ರ ವರೆಗೆ ವಿಸ್ತರಿಸಿದೆ.
ಈ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನನ್ನು ಬಲಿಪಶುವಾಗಿ ಮಾಡಲಾಗಿದೆ ಎಂದು ಸಚಿನ್ ವಾಜೆ ವಿಶೇಷ ಎನ್ಐಎ ನ್ಯಾಯಾಲಯಕ್ಕೆ ತಿಳಿಸಿದರು. ಮುಂಬೈ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ವಾಝೆ ಅವರನ್ನು ಮಾರ್ಚ್ 13ರಂದು ಎನ್ಐಎ ಬಂಧಿಸಿತ್ತು.
ವಾಝೆ ಕಸ್ಟಡಿ ಅವಧಿ ಮುಗಿದ ಹಿನ್ನಲೆಯಲ್ಲಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ತನಿಖೆಯ ಸಮಯದಲ್ಲಿ ವಾಜೆ ಮನೆಯಿಂದ 62 ಗುಂಡುಗಳನ್ನು ವಶಪಡಿಸಿಕೊಂಡಿದೆ. ಅವುಗಳನ್ನು ಮನೆಯಲ್ಲಿ ಯಾಕೆ ಇರಿಸಲಾಗಿದೆ ಎಂದು ತನಿಖೆ ಮಾಡಬೇಕಾಗಿದೆ ಎಂದು ಎನ್ಐಎ ಹೇಳಿತು.
ಸ್ಫೋಟಕ ತುಂಬಿದ್ದ ಸ್ಕಾರ್ಪಿಯೋ ವಾಹನ ಮಾಲೀಕ ಮನ್ಸುಖ್ ಹಿರೇನ್ ಶಂಕಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ತನಿಖೆ ಮುಂದುವರಿಸಿದೆ. ಇನ್ನು ಹಿರೇನ್ ಶಂಕಾಸ್ಪದ ಸಾವಿನಲ್ಲಿ ಸಚಿನ್ ವಾಝೆ ಕೈವಾಡವಿದೆ ಎಂದು ಹಿರೇನ್ ಅವರ ಪತ್ನಿ ಆರೋಪಿಸಿದ್ದರು. ಆರೋಪದ ಬೆನ್ನಲ್ಲೇ ಮುಂಬೈ ಕ್ರೈಂ ಬ್ರ್ಯಾಂಚ್ ಕರ್ತವ್ಯದಿಂದ ವಾಝೆ ಅವರನ್ನು ಅಮಾನತುಗೊಳಿಸಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ