ಈಶ್ವರಪ್ಪ ಏನು ತಪ್ಪು ಮಾಡಿದ್ದಾರೆ..? ಕ್ಯಾಬಿನೆಟ್‌ ಸಚಿವರಿಗೆ ಅಧಿಕಾರ ಇಲ್ಲವೆಂದ್ರೆ ಹೇಗೆ?: ಈಶ್ವರಪ್ಪ ಪರ ಯತ್ನಾಳ್ ಬ್ಯಾಟ್‌ ‌

ವಿಜಯಪುರ: ಸಚಿವ ಈಶ್ವರಪ್ಪನವರು ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾಡಿದ ಆರೋಪಕ್ಕೆ ಮಹತ್ವ ನೀಡಬೇಕು.ಈಶ್ವರಪ್ಪ ಏನು ತಪ್ಪು ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಶ್ವರಪ್ಪ ಪರ ಬ್ಯಾಟ ಬೀಸಿದ್ದಾರೆ.
ವಿಜಯಪುರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಚಿವ ಕೆ.ಎಸ್.ಈಶ್ವರಪ್ಪ ದೂರು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯನ್ನು ಈ ಹಿಂದೆ ಕಟ್ಟಿದವರಲ್ಲಿ ಈಶ್ವರಪ್ಪ ಕೂಡ ಒಬ್ಬರು. ಹೀಗಾಗಿ ನಿನ್ನೆ ಮೊನ್ನೆ ಬಂದವರು ಅವರ ಬಗ್ಗೆ ಟಿಪ್ಪಣೆ ಮಾಡುವುದು ಸರಿಯಲ್ಲ. ನಾನು ಹಾಗೂ ಯಡಿಯೂರಪ್ಪ ಇಬ್ಬರೂ ಪಕ್ಷ ಬಿಟ್ಟು ಮತ್ತೆ ಪಕ್ಷಕ್ಕೆ ಬಂದವರು. ಆದರೆ ಈಶ್ವರಪ್ಪ ಬಿಜೆಪಿಯಲ್ಲೇ ಇದ್ದಾರೆ.ಹೀಗಾಗಿ ಅವರ ಬಗ್ಗೆ ನಿನ್ನೆ ಮೊನ್ನೆ ಬಂದವರು ಮಾತನಾಡುವುದು ಸರಿಯಲ್ಲ ಎಂದರು.
ರಾಜ್ಯದಲ್ಲಿ ನಡೆಯುತ್ತಿರುವುದು ಪ್ರಧಾನಿ ಮೋದಿಯವರ ಕನಸಿನ ಬಿಜೆಪಿ ಸರ್ಕಾರವಲ್ಲ. ಅಪ್ಪ-ಮಗನ ಸರ್ಕಾರ. ಅಪ್ಪ-ಮಗ ಕಾವೇರಿಯಲ್ಲಿ ಕುಳಿತು ಎಲ್ಲಾ ಇಲಾಖೆಗಳ ಡೀಲ್ ಮಾಡುತ್ತಿದ್ದಾರೆ. ವಿಜಯೇಂದ್ರ ಯಾವ ಸಂವಿಧಾನಿಕ ಹುದ್ದೆಯಲ್ಲಿದ್ದಾರೆ ಎಂದು ಪ್ರಶ್ನಿಸಿದ ಅವರು, ಇಷ್ಟಕ್ಕೂ ಈಶ್ವರಪ್ಪ ಮಾಡಿದ ತಪ್ಪಾದರೂ ಏನು? ಈಶ್ವರಪ್ಪನವರಿಗೆ ಒಂದು ವರ್ಷದಿಂದ ತೊಂದರೆ ಕೊಟ್ಟಿದ್ದಾರೆ. ಕ್ಯಾಬಿನೆಟ್ ದರ್ಜೆ ಸಚಿವರಿಗೇ ಅಧಿಕಾರ ಕೊಡದಿದ್ದರೆ ಈಶ್ವರಪ್ಪ ಏನು ಮಾಡಬೇಕು? ಈಗ ಈಶ್ವರಪ್ಪನವರಿಗೆ ಮಾತ್ರ ತಲೆ ಕೆಟ್ಟಿದೆ. ಇದು ಹೀಗೆ ಮುಂದುವರಿದರೆ ಇನ್ನೂ ಹಲವರಿಗೆ ತಲೆ ಕೆಡಲಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಮೇ 2ರೊಳಗೆ ಪಕ್ಷದಲ್ಲಿ ಭಾರೀ ರಾಜಕೀಯ ಸ್ಫೋಟವಾಗಲಿದೆ ಎಂದು ಭವಿಷ್ಯ ನುಡಿದ ಯತ್ನಾಳ್‌, ಯಡಿಯೂರಪ್ಪ ಬದಲಾಗದಿದ್ದರೆ ಇನ್ನೂ ದೊಡ್ದ ಸ್ಫೋಟ ಸಂಭವಿಸಲಿದೆ. ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗಲಿದೆ ಎಂದರು.
.

ಪ್ರಮುಖ ಸುದ್ದಿ :-   ಎಸ್‌ಐಟಿ ನೋಟಿಸ್​: ವಿಚಾರಣೆಗೆ ಹಾಜರಾಗಲು ಸಮಯ ಕೇಳಿದ ಪ್ರಜ್ವಲ್‌ ; ಪತ್ರದಲ್ಲೇನಿದೆ..?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement