ಮುಂಬೈ: ಮಾಜಿ ಪೊಲೀಸ್ ಆಯುಕ್ತ ಪರಮ್ವೀರ್ ಸಿಂಗ್ ಅವರ ಆರೋಪಗಳನ್ನು ಆಧರಿಸಿ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿದ ಬಾಂಬೆ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರವು ಮಂಗಳವಾರ (ಏಪ್ರಿಲ್ 6) ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
1988ರ ಬ್ಯಾಚ್ನ ಐಪಿಎಸ್ ಅಧಿಕಾರಿ ಪರಮ್ವೀರ್ ಸಿಂಗ್ ಅವರನ್ನು ಈಚೆಗಷ್ಟೇ ಮಹಾರಾಷ್ಟ್ರ ಸರ್ಕಾರವು ಹೋಂ ಗಾರ್ಡ್ಸ್ನ ಕಮಾಂಡೆಂಟ್ ಜನರಲ್ ಆಗಿ ವರ್ಗಾವಣೆ ಮಾಡಿತ್ತು. ಪ್ರತಿ ತಿಂಗಳು 100 ಕೋಟಿ ರೂ. ಸಂಗ್ರಹಿಸಿಕೊಡುವಂತೆ ಬಂಧಿತ ಪೊಲೀಸ್ ಅಧಿಕಾರಿ ಸಚಿನ್ ವಾಝೆಗೆ ಹಿಂದಿನ ಗೃಹಸಚಿವ ಅನಿಲ್ ದೇಶ್ಮುಖ್ ಸೂಚಿಸಿದ್ದರು ಎಂದು ಪರಮ್ವೀರ್ ಸಿಂಗ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದ ಪತ್ರದಲ್ಲಿ ಗಂಭೀರ ಆರೋಪ ಮಾಡಿದ್ದರು.
ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮತ್ತು ಕ್ರಿಮಿನಲ್ ರಿಟ್ ಅರ್ಜಿಯ ವಿಚಾರಣೆಯ ನಂತರನ್ಯಾಯಮೂರ್ತಿಗಳಾದ ದೀಪಾಂಕರ್ ದತ್ತ ಮತ್ತು ನ್ಯಾಯಮೂರ್ತಿ ಗಿರೀಶ್ ಕುಲಕರ್ಣಿ ಅವರಿದ್ದ ಬಾಂಬೆ ಹೈಕೋರ್ಟ್ನ ವಿಭಾಗೀಯ ಪೀಠವು ಸೋಮವಾರ ಸಿಬಿಐ ತನಿಖೆಗೆ ಆದೇಶಿಸಿತ್ತು. ಹೈ
ವಕೀಲೆ ಮತ್ತು ಚಳವಳಿಗಾರ್ತಿ ಜಯಶ್ರೀ ಪಾಟೀಲ್ ಅವರ ಅರ್ಜಿ ವಿಚಾರಣೆಯ ನಂತರ ಈ ಆದೇಶ ಹೊರಡಿಸಲಾಗಿದೆ. ‘ಈ ಪ್ರಕರಣದ ತನಿಖೆಯನ್ನು ಸಿಬಿಐನಂತಹ ಸ್ವತಂತ್ರ ಸಂಸ್ಥೆ ನಡೆಸಬೇಕು. ಪ್ರಕರಣ ಸಂಬಂಧ ಈ ಕ್ಷಣವೇ ಸಿಬಿಐ ಎಫ್ಐಆರ್ ದಾಖಲಿಸಬೇಕಾದ ಅಗತ್ಯವೇನೂ ಕಾಣಿಸುವುದಿಲ್ಲ. ಆದರೆ ಪ್ರಕರಣದ ತನಿಖೆ ಸಿಬಿಐನಿಂದಲೇ ನಡೆಯುವುದು ಒಳಿತು ಎಂಬ ಅಭಿಪ್ರಾಯ ನಮ್ಮದು’ ಎಂದು ನ್ಯಾಯಪೀಠ ಹೇಳಿತ್ತು. ಹಾಗೂ 15 ದಿನದ ಒಳಗೆ ಪ್ರಾಥಮಿಕ ತನಿಖೆ ನಡೆಸಿ ವರದಿ ನಿಡುವಂತೆ ಸಿಬಿಐಗೆ ಬಾಂಬೆ ಹೈಕೋರ್ಟ್ ನಿರ್ದೇಶನ ನೀಡಿತ್ತು.
ದೇಶ್ಮುಖ್ ರಾಜೀನಾಮೆ:ಹೈಕೋರ್ಟ್ ಆದೇಶ ನೀಡಿದ ತಕ್ಷಣವೇ ಗೃಹ ಸಚಿವ ಅನಿಲ್ ದೇಶ್ಮುಖ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರು ರಾಜೀನಾಮೆ ನೀಡಿ ಅದು ಸ್ವೀಕಾರವಾದ ಒಂದು ದಿನದ ನಂತರ ಮಹಾರಾಷ್ಟ್ರ ಸರ್ಕಾರ ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮಂಗಳವಾರ ಅರ್ಜಿ ಸಲ್ಲಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ