ರಾಜ್ಯ ಸಹಕಾರಿ ಮಹಾಮಂಡಳಿಗೆ ಜಿ.ಟಿ.ದೇವೆಗೌಡ ಅಧ್ಯಕ್ಷ, ಜಗದೀಶ ಕವಟಗಿಮಠ ಉಪಾಧ್ಯಕ್ಷರಾಗಿ ಆಯ್ಕೆ

ಬೆಂಗಳೂರು: ರಾಜ್ಯ ಸಹಕಾರಿ ಮಹಾಮಂಡಳಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹಾಗೂ ಉಪಾಧ್ಯಕ್ಷರಾಗಿ ಜಗದೀಶ್ ಎಂ.ಕವಟಗಿಮಠ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 29 ಜಿಲ್ಲಾ ಯೂನಿಯನ್ ಗಳಿಂದ 13 ನಿರ್ದೇಶಕರನ್ನು ಚುನಾವಣೆಯಲ್ಲಿ ಆಯ್ಕೆಮಾಡಲಾಯಿತು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿ.ಟಿ.ದೇವೇಗೌಡ, ಸಹಕಾರ ಮಹಾಮಂಡಳಿಯ ಅಭಿವೃದ್ಧಿಗಾಗಿ ದುಡಿದು, ಇಡೀ ದೇಶದಲ್ಲಿ ಸಹಕಾರಿ ಕ್ಷೇತ್ರ ಎಲ್ಲಾ ವಲಯಕ್ಕೂ ಮಾದರಿಯಾಗಿ ಮಾಡುವುದಾಗಿ ಹೇಳಿದರು.
ಜಾಗತೀಕರಣ, ಉದಾರೀಕರಣ ಬಂದ ಬಳಿಕ ಸಹಕಾರಿ ಕ್ಷೇತ್ರ ಉಳಿಯುವುದಿಲ್ಲ ಎಂಬ ಮಾತು ಸುಳ್ಳಾಗಿದೆ. ಸರ್ಕಾರ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡಬೇಕು. ಇಲಾಖೆಯಲ್ಲಿ ಶಿಕ್ಷಣ, ತರಬೇತಿ, ಅರಿವು ಮೂಡಿಸುವುದು ಸಹಕಾರ ಕ್ಷೇತ್ರದ ಜವಾಬ್ದಾರಿ ಆಗಿದೆ. ನಾನು ಎಲ್ಲರಿಗಾಗಿ, ಎಲ್ಲರೂ ನನಗಾಗಿ ಅನ್ನೋದು ಈ ಸಹಕಾರಿ ಕ್ಷೇತ್ರದ ಧ್ಯೇಯ. ಸಹಕಾರಿ ಕ್ಷೇತ್ರ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಆಗಬೇಕು. ಹೀಗಾಗಿ ಎಲ್ಲಾ ಸಹಕಾರಿಗಳು ಒಟ್ಟಾಗಿ ದುಡಿಯುತ್ತೇವೆ. ರೈತರು, ಬಡವರು, ಕಾರ್ಮಿಕರ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ ಎಂದರು.
ಕೊರೋನಾ ಹಿನ್ನಲೆಯಲ್ಲಿ ಮುಚ್ಚಿರುವ ಸಹಕಾರಿ ಸಂಸ್ಥೆಗಳ ಮರು ಪ್ರಾರಂಭಕ್ಕೆ ಕ್ರಮಕೈಗೊಳ್ಳಲಾಗುವುದು. ಇದಕ್ಕಾಗಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಕೊಟ್ಟು, ಮುಚ್ಚಿರುವ ಸಹಕಾರ ಸಂಸ್ಥೆಗಳು, ನಷ್ಟದಲ್ಲಿರುವ ಸಂಸ್ಥೆಗಳ ಅಭಿವೃದ್ಧಿಗೆ ಅಗತ್ಯವಾದ ಯೋಜನೆ ರೂಪಿಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಮಾತನಾಡಿ, ಸಹಕಾರ ಇಲಾಖೆಗೆ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿಯು ಮಾತೃ ಸಂಸ್ಥೆಯಾಗಿದೆ. ಈ ಮಾತೃಗೆ ಒಳ್ಳೆಯ ನಿರ್ದೇಶಕರನ್ನು ಆಯ್ಕೆ ಮಾಡಲು ಚುನಾವಣೆ ನಡೆಸಿ ನಿರ್ದೇಶಕರನ್ನಾಗಿ 13 ಮಂದಿಯನ್ನು ಆಯ್ಕೆ ಮಾಡಲಾಗಿದೆ. ರಾಜ್ಯ ಮಟ್ಟದ ಸಂಸ್ಥೆಗಳಿಂದ ಒಬ್ಬರನ್ನು ಆಯ್ಕೆ ಮಾಡಿದೆ. ಎಲ್ಲರೂ ಸೇರಿ ಅಧ್ಯಕ್ಷರನ್ನಾಗಿ ಜಿ ಟಿ ದೇವೇಗೌಡ, ಉಪಾಧ್ಯಕ್ಷರಾಗಿ ಜಗದೀಶ್ ಎಂ ಕವಟಗಿಮಠ ಅವರನ್ನು ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​ ಪ್ರಕರಣ : ಪ್ರಮುಖ ಆರೋಪಿ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement