ನವದೆಹಲಿ: ರಸಗೊಬ್ಬರದ ಬೆಲೆಯನ್ನು ಇಫ್ಕೊ ಕಂಪನಿ ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದ್ದಕ್ಕೆ ರೈತ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಹೀಗಾಗಿ ಕೇಂದ್ರ ಸರ್ಕಾರ ರಸಗೊಬ್ಬರ ಬೆಲೆ ಏರಿಕೆಗೆ ಬ್ರೇಕ್ ಹಾಕಿದೆ.
ಯಾವುದೇ ಕಾರಣಕ್ಕೂ ರಸಗೊಬ್ಬರದ ದರಗಳಲ್ಲಿ ಹೆಚ್ಚಳ ಮಾಡದಂತೆ ಕಂಪನಿಗಳಿಗೆ ನಿರ್ದೇಶನ ನೀಡಿದೆ.
ಯೂರಿಯಾ ಅಲ್ಲದ ರಸಗೊಬ್ಬರಗಳ ಎಂ.ಆರ್.ಪಿ.ಯನ್ನು ಹೆಚ್ಚಳ ಮಾಡದಂತೆ ಕೇಂದ್ರ ಸರ್ಕಾರ ರಸಗೊಬ್ಬರ ಕಂಪನಿಗಳಿಗೆ ಸೂಚಿಸಿದ್ದು, ಹಳೆಯ ದರದಲ್ಲಿ ಮಾರಾಟ ಮಾಡುವಂತೆ ತಾಕೀತು ಮಾಡಿದೆ.
ಜಾಗತಿಕ ಮಾರುಕಟ್ಟೆಗೆ ಅನುಗುಣವಾಗಿ ಯೂರಿಯಾ ಅಲ್ಲದ ಪೋಷಕಾಂಶಗಳ ದೇಶಿಯ ಚಿಲ್ಲರೆ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ರೈತ ಸಮುದಾಯಕ್ಕೆ ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಆನಂತರದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದ ಸರ್ಕಾರ ಕಂಪನಿಗಳಿಗೆ ನಿರ್ದೇಶನ ನೀಡಿದೆ.
ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಮನ್ ಸುಖ್ ಮಾಂಡವಿಯಾ ಅವರು ಈ ಬಗ್ಗೆ ಮಾತನಾಡಿ, ಕೇಂದ್ರ ಸರ್ಕಾರ ಉನ್ನತ ಮಟ್ಟದ ಸಭೆ ನಡೆಸಿ ರಸಗೊಬ್ಬರ ಕಂಪನಿಗಳಿಗೆ ಡಿಎಪಿ, ಎನ್.ಪಿ.ಕೆ., ಎಂಒಪಿ ಬೆಲೆಯನ್ನು ಹೆಚ್ಚಳ ಮಾಡದಂತೆ ನಿರ್ದೇಶನ ನೀಡಿದ್ದು, ಇದಕ್ಕೆ ಕಂಪನಿಗಳು ಒಪ್ಪಿಕೊಂಡಿವೆ ಎಂದು ಹೇಳಿದ್ದಾರೆ. ಹಳೆಯ ದರದಲ್ಲಿ ಗೊಬ್ಬರ ಮಾರಾಟ ಮಾಡಲು ತಿಳಿಸಲಾಗಿದೆ. ರೈತರು ಹಳೆಯ ದರದಲ್ಲಿ ರಸಗೊಬ್ಬರ ಖರೀದಿಸಬಹುದಾಗಿದೆ. ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಇಫ್ಕೊ ರಸಗೊಬ್ಬರ ಕಂಪನಿ 58% ರಷ್ಟು ಭಾರಿ ಪ್ರಮಾಣದಲ್ಲಿ ಬೆಲೆ ಏರಿಕೆ ಮಾಡಿತ್ತು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಯೂರಿಯಾ ಅಲ್ಲದ ರಸಗೊಬ್ಬರಗಳಾದ ಡಿಎಪಿ, ಎನ್.ಪಿ.ಕೆ., ಎಂಒಪಿ ಬೆಲೆಯನ್ನು ತಯಾರಕರು ನಿರ್ಧರಿಸುತ್ತಾರೆ.ಇದಕ್ಕೆ ಕೇಂದ್ರ ಸರ್ಕಾರ ಪ್ರತಿ ವರ್ಷ ನಿಗದಿತ ಸಬ್ಸಿಡಿ ನೀಡುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ