ಮಾಜಿ ಶಾಸಕ ವಸಂತ ಅಸ್ನೋಟಿಕರ್ ಕೊಲೆ ಪ್ರಕರಣ: ಗುಂಡಿಟ್ಟ ಮೊಹಿತೆಗೆ ಜೀವಾವಧಿ ಶಿಕ್ಷೆ

ಕಾರವಾರ: ಕಾರವಾರ ಶಾಸಕರಾಗಿದ್ದ ವಸಂತ ಆಸ್ನೋಟಿಕರ್ ಹತ್ಯೆ ಮಾಡಿದ್ದ ಸಂಜಯ್ ಮೋಹಿತೆಗೆ ಜೀವಾವಧಿ ಶಿಕ್ಷೆ ಹಾಗೂ 68,000 ರೂ. ದಂಡ ವಿಧಿಸಿ ಶಿರಸಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಫೆಬ್ರುವರಿ 19, 2000ದಂದು ವಸಂತ ಅಸ್ನೊಟಿಕರ್‌ ಕೊಲೆ ನಡೆದಿತ್ತು. ಕಾರವಾರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ತಮ್ಮ ಮಗಳ ಮದುವೆ ಆರತಕ್ಷತೆಯ ತಯಾರಿ ನೋಡಿಕೊಂಡು ಮನೆಗೆ ಹೊರಡುವ ಸಲುವಾಗಿ ಕಲ್ಯಾಣ ಮಂಟಪದ ಎದುರಿನ ರಸ್ತೆಯ ಪಕ್ಕದಲ್ಲಿ ನಿಂತುಕೊಂಡಿದ್ದಾಗ ಬೈಕ್ ನಲ್ಲಿ ಬಂದ ಇಬ್ಬರು ವಸಂತ ಅನ್ನೋಟಿಕರ್ ಮೇಲೆ ಗುಂಡು ಹಾರಿಸಿದ್ದರು.
ಹಿಂಬದಿಯ ಸವಾರನಾಗಿದ್ದ ರಾಜನ್ ಅಲಿಯಾಸ್ ಸಂಜಯ್ ಮೋಹಿತ್ ಹಾರಿಸಿದ್ದ ನಾಲ್ಕು ಗುಂಡು ವಸಂತ ಅಸ್ನೋಟಿಕರ್ ದೇಹಕ್ಕೆ ಹೊಕ್ಕಿತ್ತು, ಅವರು ತೀವ್ರವಾಗಿ ಗಾಯಗೊಂಡಿದ್ದರು. ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದರು.
ಸಂಜಯ್ ಮೋಹಿತನೊಂದಿಗೆ ಭಾಗಿಯಾಗಿದ್ದ ಓಂ ಪ್ರಕಾಶ್ ಅಲಿಯಾಸ್ ಪಕ್ಕಾ ಹಾಗೂ ಅಂತೋನಿಯು ದೋಷಾರೋಪಣೆ ಪಟ್ಟಿ ಸಲ್ಲಿಸುವ ಪೂರ್ವದಲ್ಲಿ ಮುಂಬೈ ಪೊಲೀಸರಿಂದ ಎನ್ ಕೌಂಟರ್ ನಲ್ಲಿ ಮೃತಪಟ್ಟಿದ್ದರು. ವಸಂತ ಅಸ್ನೋಟಿಕರ್ ಕೊಲೆಗೆ ಸಂಜಯ್ ಮೊಹಿತೆಗೆ ಸುಪಾರಿ ನೀಡಿದ್ದ. ಈ ಪ್ರಕರಣದ ಮುಖ್ಯ ಆರೋಪಿ ದಿಲೀಪ್ ನಾಯ್ಕ ಪ್ರಕರಣದ ವಿಚಾರಣೆಯ ಹಂತದಲ್ಲಿ ಮೃತಪಟ್ಟಿದ್ದ. ಕೊಲೆ ಸಂಚಿನಲ್ಲಿ ಭಾಗಿಯಾಗಿದ್ದ 2 ಮತ್ತು ಮೂರನೇ ಆರೋಪಿಯನ್ನು ನ್ಯಾಯಾಲಯ ಬಿಡುಗಡೆಗೊಳಿಸಿದೆ.
ಪ್ರಕರಣ ಕಾರವಾರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಿಂದ ಶಿರಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿತ್ತು. ಈ ಪ್ರಕರದ ವಿಚಾರಣೆ ನಡೆಸಿದ ನ್ಯಾಯಾಧೀಶ ಶಾಂತವೀರ ಶಿವಪ್ಪ ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳ ವಾದಿಸಿದ್ದರು. ಬೆಂಗಳೂರು ಸಿಒಡಿ ಡಿಎಸ್ ಪಿ. ಬಿ. ಎಸ್. ಎಸ್ ರಾವ್ ಅವರು ಪ್ರಾಥಮಿಕ ಹಂತದಲ್ಲಿ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದು, ಡಿ.ಎಸ್.ಪಿಗಳಾದ ರಫೀಕ ಮುಲ್ಲಾ ಹಾಗೂ ಲವಕುಮಾರ ಹೆಚ್ಚುವರಿ ದೋಷಾರೋಪಣಾ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement