ಆಮ್ಲಜನಕದ ಕೊರತೆಯಿಂದ ಅಮೃತಸರದ ಖಾಸಗಿ ಆಸ್ಪತ್ರೆಯಲ್ಲಿ ಆರು ರೋಗಿಗಳು ಸಾವು

ಚಂಡೀಗಡ: ವೈದ್ಯಕೀಯ ಆಮ್ಲಜನಕದ ಕೊರತೆಯಿಂದಾಗಿ ಅಮೃತಸರದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ -19 ಸೋಂಕಿತ ಐದು ರೋಗಿಗಳು ಸೇರಿದಂತೆ ಆರು ರೋಗಿಗಳು ಶನಿವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಈ ಕುರಿತು ವರದಿ ಮಾಡಿರುವ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌, ನೀಲಕಂಠ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೃತಪಟ್ಟ ಆರು ಗಂಭೀರ ರೋಗಿಗಳಲ್ಲಿ ಮೂವರು ಅಮೃತಸರದವರು, ಇಬ್ಬರು ಗುರುದಾಸ್‌ಪುರದವರು ಮತ್ತು ಒಬ್ಬರು ತರಣ್ ತಾರ್ನ್‌ಗೆ ಸೇರಿದವರು. ಅವರೆಲ್ಲರ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಗುರುವಾರ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಎಂದು ಹೇಳಿದೆ.
ವರದಿ ಪ್ರಕಾರ, ಆಮ್ಲಜನಕದ ಕೊರತೆ ಇದೆ ಎಂದು ಆಸ್ಪತ್ರೆಯ ಸಿಬ್ಬಂದಿ ನಿನ್ನೆ ರಾತ್ರಿ ತಿಳಿಸಿದ್ದಾರೆ ಮತ್ತು ಅವರು ತಮ್ಮದೇ ಆದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸಂತ್ರಸ್ತರ ಕುಟುಂಬ ಸದಸ್ಯರಿಗೆ ತಿಳಿಸಿದ್ದಾರೆ.
ಆಮ್ಲಜನಕ ಸಿಲಿಂಡರ್‌ಗಳ ಕೊರತೆಯ ಬಗ್ಗೆ ಅವರು ನಿನ್ನೆ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದರು. ಆದರೆ ಯಾರೂ ಅವರ ಮಾತನ್ನು ಆಲಿಸಲಿಲ್ಲ ಎಂದು ಆಸ್ಪತ್ರೆ ಅಮೃತಸರ ಜಿಲ್ಲಾಡಳಿತವನ್ನು ದೂಷಿಸಿದೆ.
ವೈದ್ಯಕೀಯ ಆಮ್ಲಜನಕ ಸಿಲಿಂಡರ್‌ಗಳನ್ನು ಭರ್ತಿ ಮಾಡುವುದನ್ನು ವಿಳಂಬ ಮಾಡದಂತೆ ಅವರು ಜಿಲ್ಲಾಡಳಿತವನ್ನು ಪದೇ ಪದೇ ಕೋರಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಆದರೆ ಆಮ್ಲಜನಕವನ್ನು ಪೂರೈಸುವ ಆದ್ಯತೆಯು ಸರ್ಕಾರಿ ಆಸ್ಪತ್ರೆಗಳಿಗೆ ಮಾತ್ರ. ಮತ್ತು ಅದರ ನಂತರವೇ ಖಾಸಗಿ ಆಸ್ಪತ್ರೆಗಳಿಂದ ಬೇಡಿಕೆ ಈಡೇರುತ್ತದೆ ಎಂದು ಅವರಿಗೆ ತಿಳಿಸಲಾಯಿತು.
ನೀಲಕಂಠ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಸುನಿಲ್ ದೇವಗನ್ ಮಾತನಾಡಿ, ಸೀಮಿತ ಪ್ರಮಾಣದ ಆಮ್ಲಜನಕದ ಪೂರೈಕೆಯಿಂದಾಗಿ ರೋಗಿಗಳ ಕುಟುಂಬಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ನಾವು ವಿನಂತಿಸಿದ್ದೇವೆ ಆದರೆ ಕುಟುಂಬಗಳು ಒಪ್ಪಲಿಲ್ಲ. ಜಿಲ್ಲಾಡಳಿತವು ಸರ್ಕಾರಿ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ನೀಡುತ್ತಿದೆ, ಆದ್ದರಿಂದ ಇದು ಖಾಸಗಿ ಆಸ್ಪತ್ರೆಗಳಲ್ಲಿನ ಕೊರತೆಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಅಮೃತಸರ ಸಿವಿಲ್ ಸರ್ಜನ್ ಡಾ.ಚರಣಜಿತ್ ಸಿಂಗ್ ಅವರು, “ನಾವು ತನಿಖೆ ನಡೆಸುತ್ತೇವೆ ಮತ್ತು ಭವಿಷ್ಯದಲ್ಲಿ ಅಂತಹ ಯಾವುದೇ ಘಟನೆ ಸಂಭವಿಸದಂತೆ ನೋಡಿಕೊಳ್ಳುತ್ತೇವೆ. ಆಮ್ಲಜನಕದ ಪೂರೈಕೆಯಲ್ಲಿ ಕೊರತೆಯಿದೆ. ಯಾವುದೇ ಪರಿಣಾಮಗಳಿಗೆ ಕುಟುಂಬ ಸದಸ್ಯರು ಜವಾಬ್ದಾರರಾಗಿರುತ್ತಾರೆ ಎಂದು ಖಾಸಗಿ ಆಸ್ಪತ್ರೆಯ ಆಡಳಿತವು ರೋಗಿಗಳ ಕುಟುಂಬ ಸದಸ್ಯರಿಗೆ ಲಿಖಿತಪತ್ರ ನೀಡಿತ್ತು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement