ನೆಲ್ಲೂರು: ಕೊರೊನಾ ವಿರುದ್ಧ ಆನಂದಯ್ಯ ಅವರ ಗಿಡಮೂಲಿಕೆಗಳ ಔಷಧದ ಬಳಕೆಗೆ ಆಂಧ್ರ ಸರ್ಕಾರ ಅನುಮತಿ ನೀಡುತ್ತಿದಂತೆ ಔಷಧ ವಿತರಣೆ ಶುರುವಾಗಿದೆ.
ಜಿಲ್ಲೆಯ ಗೊಲಗಮುಡಿಯಲ್ಲಿ ಆನಂದಯ್ಯ ಔಷಧ ವಿತರಣೆ ಇಲ್ಲಿನ ವೆಂಕಯ್ಯ ಸ್ವಾಮಿ ಆಶ್ರಮದಲ್ಲಿ ಶುರುವಾಗಿದ್ದು ಔಷಧಕ್ಕಾಗಿ ಜನ ಮುಗಿಬಿದ್ದಿದ್ದಾರೆ. ಚಿತ್ತೂರು ಜಿಲ್ಲೆಯ ಚಂದ್ರಗಿರಿ ಕ್ಷೇತ್ರದ ಜನಕ್ಕೆ ಮೊದಲು ಔಷಧ ಲಭ್ಯವಾಗಲಿದೆ. ಅಧಿಕಾರಿಗಳಿಂದ ಅನುಮತಿ ಪಡೆದ ಕೂಡಲೇ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಆನಂದಯ್ಯ ಕೊರೊನಾ ಔಷಧಿ ವಿತರಣೆ ಆಗಲಿದೆ. ಈ ಔಷಧವನ್ನು ಆನಂದಯ್ಯ ಉಚಿತವಾಗಿ ಆಂಧ್ರದ ಜನಕ್ಕೆ ನೀಡಲು ಮುಂದಾಗಿದ್ದಾರೆ.
ರಾಜ್ಯಾದ್ಯಂತ ಜನಕ್ಕೆ ಉಚಿತವಾಗಿ ಔಷಧ ನೀಡಬೇಕೆಂದರೆ ಸರ್ಕಾರದ ಸಹಾಯದಿಂದ ಮಾತ್ರ ಸಾಧ್ಯ. ಔಷಧಕ್ಕಾಗಿ ಬೇಡಿಕೆಗಳ ಬರುತ್ತಿದ್ದರೂ ಅಗತ್ಯಕ್ಕೆ ತಕ್ಕಂತೆ ಔಷಧ ತಯಾರಿಸಲು ಸಾಧ್ಯವಾಗುತ್ತಿಲ್ಲ. ಮೂಲ ಸೌಕರ್ಯದ ಸಮಸ್ಯೆ ಎದುರಾಗಿದೆ ಎಂದು ಆನಂದಯ್ಯ ತಿಳಿಸಿದ್ದಾರೆ. ಈ ಹಳ್ಳಿ ಮದ್ದಿನಲ್ಲಿ 16 ಬಗೆಯ ಗಿಡಮೂಲಿಕೆಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ. ಆನ್ಲೈನ್ ಮೂಲಕವೂ ಔಷಧವನ್ನು ಖರೀದಿಸಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಆನಂದಯ್ಯ ತಂಡ ವಿಶೇಷ ವೆಬ್ಸೈಟ್ ಸಿದ್ಧಪಡಿಸಿದೆ.
ಜೂನ್ 1ರಂದು ಗಿಡಮೂಲಿಕೆ ಔಷಧಿಯನ್ನು ಪಡೆದಿದ್ದ ಕೊರೋನಾ ಸೋಂಕಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇತ್ತೀಚೆಗೆ ವೈರಲ್ ಆಗಿದ್ದ ವಿಡಿಯೋದಲ್ಲಿ ಸೋಂಕಿತ ವ್ಯಕ್ತಿ, ಗಿಡಮೂಲಿಕೆ ಔಷಧಿ ಉತ್ತಮವಾಗಿದೆ. ನಾನು ಆ ಚಿಕಿತ್ಸೆ ಪಡೆದ ಬಳಿಕ ಸುಧಾರಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಆದರೆ, ಅದೇ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕೊರೊನಾಗೆ ರಾಮಬಾಣ ಎನ್ನುತ್ತಿದ್ದ ಕೃಷ್ಣಪಟ್ನಂ ಗಿಡಮೂಲಿಕೆ ಕಣ್ಣಿನ ಹನಿಯನ್ನುಕೊರೊನಾ ಪೀಡಿತ ನಿವೃತ್ತ ಹೆಡ್ ಮಾಸ್ಟರ್ ಪಡೆದಿದ್ದರು. ಇದು ಆಮ್ಲಜನಕದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿತ್ತು. ಬಳಿಕ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ ಮೃತಪಟ್ಟಿದ್ದಾರೆ.
ಆನಂದಯ್ಯ ಅವರ ಗಿಡಮೂಲಿಕೆ ಔಷಧಿ ಪಡೆದಿದ್ದ ಇನ್ನೂ 24 ಮಂದಿ ಕೊರೊನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಕಣ್ಣಿನ ತುರಿಕೆ ಇದೆ ಎಂದು ಅವರು ಹೇಳಿದ್ದಾರೆ.
ಆನಂದಯ್ಯ ಅವರು ನೀಡುವ ಔಷಧದಲ್ಲಿ ಬೇವು, ಅರಿಶಿಣ, ಮೆಣಸು, ಶುಂಠಿ ಸೇರಿದಂತೆ ಹಲವು ಔಷಧೀಯ ಸಾಮಗ್ರಿಗಳು ಇವೆಯಂತೆ. ಇದರಿಂದ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಕೊರೊನಾದಿಂದ ಗುಣಮುಖವಾಗಬಹುದು ಎನ್ನಲಾಗುತ್ತಿದೆ. ಆನಂದಯ್ಯ ಅವರ ಔಷಧಕ್ಕೆ ಆಂಧ್ರ ಸರ್ಕಾರ ಅನುಮತಿ ನೀಡಿದೆ. ಜನ ಗಿಡಮೂಲಿಕೆ ಔಷಧಕ್ಕಾಗಿ ಮುಗಿಬೀಳುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ