ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಮಾಡಿರುವ ಹಿನ್ನೆಲೆಯಲ್ಲಿ ಕಳೆದ ಎರಡು ತಿಂಗಳಿಂದ ಸ್ಥಗಿತಗೊಂಡಿದ್ದ ಹುಬ್ಬಳ್ಳಿಯಿಂದ ಮಹಾರಾಷ್ಟ್ರ ರಾಜ್ಯಕ್ಕೆ ಬಸ್ ಸಂಚಾರವನ್ನು ಮತ್ತೆ ಆರಂಭಿಸಲಾಗಿದೆ.
ಮೊದಲ ಹಂತದಲ್ಲಿ ಸಾರ್ವಜನಿಕ ಸಾರಿಗೆಗೆ ಅನುಮತಿ ನೀಡಿರುವ ಜಿಲ್ಲೆಗಳ ಮೀರಜ್, ಈಚಲಕರಂಜಿ, ಸೊಲ್ಲಾಪುರ, ಬಾರ್ಸಿ,ಔರಂಗಾಬಾದ್,ಪಂಢರಾಪುರ, ತುಳಜಾಪುರ ಮತ್ತಿತರ ಸ್ಥಳಗಳಿಗೆ ಬಸ್ ಸಂಚಾರ ಮತ್ತೆ ಆರಂಭವಾಗಿದೆ. ಮೀರಜ್ ಮತ್ತು ಈಚಲಕರಂಜಿ ಬಸ್ಸುಗಳು ಗೋಕುಲ ರಸ್ತೆ ಬಸ್ ನಿಲ್ದಾಣದಿಂದ ಹೊರಡುತ್ತವೆ. ಇನ್ನುಳಿದಬಸ್ಸುಗಳು ಹೊಸೂರು ಬಸ್ ನಿಲ್ದಾಣದಿಂದ ಹೊರಡುತ್ತವೆ ಎಂದು ಹುಬ್ಬಳ್ಳಿ ವಾಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದ್ದಾರೆ.
ಲಾಕ್ ಡೌನ್ ಪೂರ್ವದಲ್ಲಿ ಹುಬ್ಬಳ್ಳಿ ವಿಭಾಗದಿಂದ ಮಹಾರಾಷ್ಟ್ರಕ್ಕೆ- 38, ಗೋವಾ-11, ತೆಲಂಗಾಣ-12, ತಮಿಳುನಾಡು- 2 ಹಾಗೂ ಆಂಧ್ರಪ್ರದೇಶಕ್ಕೆ -2 ಒಟ್ಟು 65 ಬಸ್ಸುಗಳು ಸಂಚರಿಸುತ್ತಿದ್ದವು.
ಮುಂಬೈ, ಶಿರಡಿ, ಪಿಂಪ್ರಿ, ಹೈದರಾಬಾದ್, ಚೆನ್ನೈ, ಸೋಲ್ಲಾಪುರ ಮುಂತಾದ ಪ್ರಮುಖ ಸ್ಥಳಗಳಿಗೆ ವೋಲ್ವೊ, ಎಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್ ಹಾಗೂ ರಾಜಹಂಸ ಸೇರಿದಂತೆ 26 ಐಶಾರಾಮಿ ಬಸ್ಸುಗಳು ಸಂಚರಿಸುತ್ತಿದ್ದವು.
ಇವುಗಳೊಂದಿಗೆ ಮುಂಬೈ, ಪುಣೆ, ಬೊರಿವಿಲಿ, ಪಣಜಿ,ವಾಸ್ಕೋ, ಮಡಗಾಂವ,ಪಂಡರಾಪುರ, ಮೀರಜ, ಈಚಲಕರಂಜಿ, ಔರಂಗಾಬಾದ್, ಸೋಲಾಪುರ,ಬಾರ್ಶಿ, ಮಂತ್ರಾಲಯ, ಹೈದರಾಬಾದ್ ಮತ್ತಿತರ ಸ್ಥಳಗಳಿಗೆ 39 ವೇಗದೂತ ಬಸ್ಸುಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ