ಮತ್ತೆ ಮುಷ್ಕರಕ್ಕೆ ಮುಂದಾಗುವ ಮುನ್ನವೇ ಸಾರಿಗೆ ನೌಕರರಿಗೆ ಶಾಕ್ ಕೊಟ್ಟ ಸರ್ಕಾರ..!

ಬೆಂಗಳೂರು: ರಾಜ್ಯದ ಸಾರಿಗೆ ಸಂಸ್ಥೆಗಳ ನೌಕರರು ಜುಲೈ 5ರ ಬಳಿಕ ಮತ್ತೆ ಮುಷ್ಕರ ನಡೆಸಲು ಮುಂದಾಗಿರುವ ಸುಳಿವಿನ ಮೇರೆಗೆ ರಾಜ್ಯ ಸರ್ಕಾರ ಮುಷ್ಕರಕ್ಕೆ ಬ್ರೇಕ್‌ ಹಾಕಲು ಅಗತ್ಯ ಸೇವೆಗಳ ಮುಷ್ಕರ ನಿಷೇಧಿಸಿ ಆದೇಶ ಹೊರಡಿಸಿದೆ.
ಜುಲೈ 1ರಿಂದ ಡಿಸೆಂಬರ್ 31ರ ವರೆಗೆ ಮುಷ್ಕರವನ್ನು ನಿಷೇಧಿಸಿ ಆದೇಶ ಮಾಡಲಾಗಿದೆ. ಆರ್ಥಿಕತೆಯ ಮೇಲೆ ಕೋವಿಡ್ ಸಾಕಷ್ಟು ಪ್ರಭಾವ ಬೀರಿದೆ.
ಈ ಸಂದರ್ಭದಲ್ಲಿ ಮುಷ್ಕರ ಮಾಡುವುದು ಸೂಕ್ತವಲ್ಲ. ಹೀಗಾಗಿ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ 3 ಉಪವಿಭಾಗ 1ರ ಅನ್ವಯ ಅಗತ್ಯ ಸೇವೆಗಳ ಮುಷ್ಕರಕ್ಕೆ ನಿಷೇಧ ಹೇರಲಾಗಿದೆ ಎಂದು ತಿಳಿದುಬಂದಿದೆ.
ಲಾಕ್‍ಡೌನ್ ಮುಗಿದ ಮೇಲೆ ಜುಲೈ 5ರ ಬಳಿಕ ಕುಟುಂಬ ಸಮೇತರಾಗಿ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದರು. ಆದರೆ ಅದಕ್ಕೂ ಮೊದಲೇ ಸರ್ಕಾರ, ಅಗತ್ಯ ಸೇವೆಗಳ ಮುಷ್ಕರವನ್ನ ನಿಷೇಧಿಸಿ ಮುಷ್ಕರ ನಡೆಸದಂತೆ ಆದೇಶ ಹೊರಡಿಸಿದೆ.
ಮುಷ್ಕರ ನಡೆಸುವ ಕುರಿತು ಜುಲೈ 1ರಂದು ನಡೆಯುವ ಸಭೆಯಲ್ಲಿ ದಿನಾಂಕ ನಿಗದಿ ಮಾಡಲಾಗುತ್ತದೆ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದರು.

ಪ್ರಮುಖ ಸುದ್ದಿ :-   ಹತ್ಯೆಗೀಡಾದ ನೇಹಾ ಹಿರೇಮಠ ಮನೆಗೆ ಸಿಎಂ ಸಿದ್ದರಾಮಯ್ಯ ಭೇಟಿ ; ಕುಟುಂಬಸ್ಥರಿಗೆ ಸಾಂತ್ವನ

2020ರ ಡಿಸೆಂಬರ್‍ನಲ್ಲಿ 15 ದಿನ ಪ್ರತಿಭಟನೆ ನಡೆದಿತ್ತು. ಈ ವೇಳೆ ರಾಜ್ಯ ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ನೀಡಿತ್ತು. ಆದರೆ ಲಿಖಿತ ರೂಪದಲ್ಲಿ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ದೂರಿದ್ದರು.
ಆರನೇ ವೇತನ ಆಯೋಗ ಜಾರಿ ಮಾಡಲೇಬೇಕು. ಮುಷ್ಕರದಲ್ಲಿ ಭಾಗಿಯಾಗಿದ್ದವರನ್ನು ವರ್ಗಾವಣೆ, ಅಮಾನತು, ಸಸ್ಪೆಂಡ್ ಮಾಡಲಾಗಿದೆ. ಕೂಡಲೆ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ ಕೋಡಿಹಳ್ಳಿ ಚಂದ್ರಶೇಖರ್, ಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆಗೆ ನಿರ್ಧರಿಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement