ಹು-ಧಾ ಮಹಾನಗರ ಪಾಲಿಕೆ ಇಬ್ಬರು ಆರೋಗ್ಯ ನಿರೀಕ್ಷಕರು ಎಸಿಬಿ ಬಲೆಗೆ

ಹುಬ್ಬಳ್ಳಿ: ಪೌರಕಾರ್ಮಿಕರ ಪ್ರತಿ ತಿಂಗಳ ಸಂಬಳದ ಬಿಲ್‌ ಮಂಜೂರು ಮಾಡಲು ೧೮ ಸಾವಿರ ರೂ.ಗಳ. ಲಂಚ ಸ್ವಿಕರಿಸುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಇಬ್ಬರು ಆರೋಗ್ಯ ನಿರೀಕ್ಷಕರನ್ನು ರೆಡ್ ಹ್ಯಾಂಡ್ ಹಿಡಿದು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸ್ವಚ್ಛತಾ ಗುತ್ತಿಗೆದಾರರಾದ ಅಲ್ಲಾಭಕ್ಷ ಮೊಹಮ್ಮದ್‌ ಸಾಹೇಬ್ ಕಿತ್ತೂರ ಈ ಕುರಿತು ಧಾರವಾಡ ಎಸಿಬಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಅಲ್ಲಾಭಕ್ಷ ಮೊಹಮಮ್ಮದ್‌ ಸಾಹೇಬ್ ಕಿತ್ತೂರ ಹಳೇಹುಬ್ಬಳ್ಳಿ ಇವರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಸ್ವಚ್ಛತಾ ಗುತ್ತಿಗೆದಾರರಿದ್ದು, ೨೦೨೦ರಲ್ಲಿ ಗುತ್ತಿಗೆದಾರರ ಟೆಂಡರ್ ರದ್ದುಪಡಿಸಿದ ನಂತರ ಅವರಿಗೇ ತಾತ್ಕಾಲಿಕ ಟೆಂಡರ್ ನೀಡಲಾಗಿತ್ತು. ಅವರ ಬಳಿ ೧೪ ಜನ ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ಆಪಾದಿತರಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಛೇರಿ-೧೦, ಹಳೇಹುಬ್ಬಳ್ಳಿಯ ಆರೋಗ್ಯ ನಿರೀಕ್ಷಕರಾದ ನೂರಂದಪ್ಪ ಗಿರಿಯಪ್ಪ ಭಜಂತ್ರಿ ಹಾಗೂ ತಜಮಿಲ್ ಮೆಹಬೂಬ್ ಶಿರ್ಸಿ ಅವರು ಪೌರಕಾರ್ಮಿಕರಿಗೆ ಪ್ರತಿ ತಿಂಗಳು ಬಿಲ್ ಮಂಜೂರಿಸಲು ಕಮೀಷನ್ ರೂಪದಲ್ಲಿ ಲಂಚ ನೀಡುವಂತೆ ಒತ್ತಡ ಹೇರುತ್ತಿದ್ದು, ೨೨,೦೦೦ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಹಳೇಹುಬ್ಬಳ್ಳಿಯ ಗಣೇಶ ನಗರದಲ್ಲಿರುವ ಉಡುಪಿ ಶ್ರೀಕೃಷ್ಣ ಉಪಾಹಾರ ಸಸ್ಯಹಾರಿ ಹೋಟೆಲ್‌ನಲ್ಲಿ ಆಪಾದಿತರಾದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವಲಯ ಕಚೇರಿ-೧೦, ಹಳೇಹುಬ್ಬಳ್ಳಿಯ ಆರೋಗ್ಯ ನಿರೀಕ್ಷಕರಾದ ನೂರಂದಪ್ಪ ಗಿರಿಯಪ್ಪ ಭಜಂತ್ರಿ ೬,೦೦೦ ರೂ. ಹಾಗೂ ತಜಮಿಲ್ ಮೆಹಬೂಬ್ ಶಿರ್ಸಿ ಅವರು ಪಿರ್ಯಾದುದಾರರಿಂದ ರೂ ೪,೦೦೦ ಹಣವನ್ನು ಲಂಚ ಸ್ವೀಕರಿಸುತ್ತಿರುವಾಗ ರೆಡ್‌ಹ್ಯಾಂಡ್ ಆಗಿ ಹಿಡಿದು ಆಪಾದಿತರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆದಿದೆ.
ಟ್ರ್ಯಾಪ್ ತಂಡದ ನೇತೃತ್ವವನ್ನು ಡಿಎಸ್‌ಪಿ ಎಲ್.ವೇಣುಗೋಪಾಲ, ಪಿಐ ಅಲಿ ಎ ಶೇಕ್‌, ತನಿಖೆ ಕೈಕೊಂಡಿದ್ದು, ಪಿಐ ವಿ.ಎನ್. ಕಡಿ, ಹಾಗೂ ಸಿಬ್ಬಂದಿಯವರಾದ ಶ್ರೀಶೈಲ ಕಾಜಗಾರ, ಗಿರಿಶ್ ಮನ್ಸೂರ ಶ್ರೀಶೈಲ ಬೀಳಗಿ, ಲೋಕೆಶ್ ಬೆಂಡೆಕಾಯಿ, ಶಿವಾನಂದ ಕೆಲವಡಿ, ಕಾರ್ತಿಕ್ ಹುಯಿಲ್ಗೋಳ, ವಿ.ಎಸ್. ದೇಸಾಯಿಗೌಡರ್, ರವಿ ಯರಗಟ್ಟಿ, ಎಸ್.ಎಸ್. ನರಗುಂದ, ಎಸ್.ವಿರೇಶ ದಾಳಿಯಲ್ಲಿ ಭಾಗವಹಿಸಿದ್ದರು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement