ಬೆಂಗಳೂರು: ಕಳೆದೆರಡು ದಿನಗಳಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ಮಧ್ಯೆ ನಡೆಯುತ್ತಿರುವ ಪರವಿರೋಧ ಹೇಳಿಕೆಗಳಿಗೆ ಸ್ವತಃ ಕುಮಾರಸ್ವಾಮಿ ಅವರು ಮಂಡ್ಯದಿಂದಲೇ ರಾಜಕೀಯ ಆರಂಭಿಸಿ ಅಲ್ಲೇ ಸುಮಲತಾರನ್ನು ಸೋಲಿಸುವೆ ಎಂದು ಬಹಿರಂಗವಾಗಿ ಶಪಥ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೆ.ಆರ್.ಎಸ್.ನ ೨೦ ಕಿಮೀ ವ್ಯಾಪ್ತಿಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಬೇಕೆಂದು ಆದೇಶ ಮಾಡಿದ್ದವನು ನಾನು. ಮಂಡ್ಯದಲ್ಲಿ ಇವರು ಏನು ಕೆಲಸ ಮಾಡಿದ್ದಾರೆ, ಇವರು ಜನ ಸತ್ತಾಗ ಹೋಗಲಿಲ್ಲ. ಈಗ ಕಲ್ಲು ಗಣಿಗಾರಿಕೆ ವೀಕ್ಷಿಸಲು ಹೋಗಿದ್ದಾರೆ. ನನಗೆ ಸಂಸ್ಕೃತಿ ಪಾಠ ಹೇಳಿ ಕೊಡುತ್ತಾರಾ ? ಇವರಿಂದ ಪಾಠ ಕಲಿಯಬೇಕಾ ? ನನ್ನ ಸ್ನೇಹಿತ ಅಂಬರೀಶ್ ಆಸ್ಪತ್ರೆಯಲ್ಲಿ ತೀರಿಕೊಂಡಾಗ ಮಂಡ್ಯಕ್ಕೆ ದೇಹವನ್ನು ತೆಗೆದುಕೊಂಡು ಹೋಗಬಾರದೆಂದು ಹೇಳಿದವರು ಈಗ ಮಂಡ್ಯ ಜಿಲ್ಲೆ, ಅಂಬರೀಶ್ ಬಗ್ಗೆ ಚರ್ಚೆ ಮಾಡುತ್ತೀರಾ? ನಿಮಗೆ ನಾಚಿಕೆಯಾಗಬೇಕು. ಅಂಬರೀಶ್ ರನ್ನ ಬದುಕಿದ್ದಾಗ ಯಾವ ರೀತಿ ನೋಡಿಕೊಂಡಿದ್ದೀರೋ ಗೊತ್ತಿಲ್ಲ, ಈಗ ಅಂಬರೀಶ್ ಬಗ್ಗೆ ಪ್ರೀತಿ ಉಕ್ಕಿ ಹರಿಯುತ್ತಿದೆಯಾ ? ವಿಕ್ರಮ್ ಆಸ್ಪತ್ರೆಯಲ್ಲಿ ಹೇಗೆ ನಡೆದುಕೊಂಡರು ಅನ್ನೋದು ಗೊತ್ತಿದೆ. ಸಿನಿಮಾದಲ್ಲಿ ನಟಿಸಿದಂತೆ ಇಲ್ಲೂ ಮಾಡಬಹುದು ಅಂದುಕೊಂಡಿದ್ದಾರೆ ಎಂದು ಸುಮಲತಾ ಅಂಬರೀಶ್ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ ವುಕ್ತಪಡಿಸಿದ್ದಾರೆ.
ಸಂಸದೆ ಸುಮಲತಾ ಅವರನ್ನು ಸೋಲಿಸುವ ಶಪಥ ಮಾಡಿದ ಕುಮಾರಸ್ವಾಮಿ ಅವರು, ಮುಂದಿನ ರಾಜಕಾರಣವನ್ನು ಮಂಡ್ಯದಲ್ಲೇ ತೋರಿಸುವೆ. ಮಂಡ್ಯದಲ್ಲಿ ನಮ್ಮನ್ನು ಸೋಲಿಸಿದ್ದೀರಾ ಅಲ್ಲಿಂದಲೇ ಪ್ರಾರಂಭ ಮಾಡುವೆ. ಸಹೋದರ ಅಂಬರೀಶ್ ಮೃತಪಟ್ಟಾಗ ನಾನು ಯಾವ ರೀತಿ ಗೌರವ ಕೊಟ್ಟಿದ್ದೇನೆ ಎಂಬುದು ರಾಜ್ಯದ ಜನರಿಗೆ ತಿಳಿದಿದೆ. ಈಗ ಮಂಡ್ಯ ಬಗ್ಗೆ ಮಾತನಾಡುತ್ತಾರೆ ಎಂದು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಪ್ರಜ್ವಲ್ ರೇವಣ್ಣನನ್ನು ಕುಮಾರಸ್ವಾಮಿ ನೋಡಿ ಕಲಿಯಬೇಕು ಎಂದಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಅವರ ಸಂಸ್ಕೃತಿ ಏನು ಅಂತ ನನಗೆ ಗೊತ್ತಿದೆ, ನಮ್ಮ ಕುಟುಂಬವನ್ನು ಒಡೆಯುವ ಕೆಲಸವನ್ನು ಮಾಡುತ್ತಿದ್ದಾರೆ. ದೇವೇಗೌಡರ ಕುಟುಂಬವನ್ನು ಒಡೆಯಲು ಬಂದವರು ಏನು ಆಗಿದ್ದಾರೆ ಅಂತ ಗೊತ್ತಿದೆ ಎಂದರು.
= = = =
ನಿಮ್ಮ ಕಾಮೆಂಟ್ ಬರೆಯಿರಿ